Sunday, August 04, 2019

NAAGA PUJA ( ನಾಗರ ಪೂಜೆ ) ಭಾಗ I

 NAAGA  PUJE  (ನಾಗರ ಪೂಜೆ)            
ನಾಗರ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ,
ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆಪೂಜೆ ನಡೆಯುತ್ತದೆ. 
ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ.ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು.ಮಡಿ ಬಟ್ಟೆಗಳನ್ನು ತೊಟ್ಟು ಪೂಜೆಮಾಡಬೇಕು.   ಶ್ರಾವಣ ಶುದ್ಧ ಚತುರ್ಥಿಯಂದೂ ಸಹ ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಸಹ ಹಾವಿನ ಆಕಾರ ಮಾಡಿ ಇಟ್ಟುಕೊಳ್ಳಬಹುದು ಅರಿಶಿಣದಿಂದ ಸಿಂಗರಿಸಬೇಕು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹವನ್ನು ಇಟ್ಟುಕೊಳ್ಳಬಹುದು.


ಸಾಮಾನ್ಯ ಎಲ್ಲರ ಮನೆಯಲ್ಲೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಪಟ ಇದ್ದೇ ಇರುತ್ತೆ. ಇದನ್ನೂ ಜೊತೆಯಲ್ಲಿ ಇಟ್ಟು ಪೂಜೆ ಮಾಡಬಹುದು.ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ.ನಾಗಪ್ಪನಿಗೆ ಹಾಲು, ನೀರಿನಿಂದ ತಣ್ಣೀರಿನಿಂದ ಎರೆಯುತ್ತಾರೆ. ಸಾಮಾನ್ಯವಾಗಿ ತಾಳೆ(ಕೇದಿಗೆ) ಗಿಡದ ಎಲೆ / ಹೂವನ್ನು ಉಪಯೋಗಿಸಿ ತಣ್ಣೀರಿನಿಂದಎರೆಯುತ್ತಾರೆ. ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣಉಪಯೋಗಿಸುತ್ತಾರೆ.
ಪೂಜಾ ವಿಧಾನ:-
ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತಪೇಚಾಡುತ್ತ ಇದ್ದೀರಾ. ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸ ಬಹುದು. ದೇವರಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ - ಅಂದರೆ ನಿರ್ಧಾರ ನಿರ್ಣಯ ಚಿತ್ತ.
ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ,
ಋತು , ಮಾಸ, ಪಕ್ಷ, ವಾರ, ತಿಥಿ,ನಕ್ಷತ್ರವನ್ನು ಹೆಸರಿಸಬೇಕು.ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಚರಣೆ  ಭರತವರ್ಷೇ ಭರತಖಂಡೇ ಜಂಬು ದ್ವೀಪೇ ದಂಡ ಕಾರಣ್ಯೇ ದೇಶೆ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇನ  .....ನಾಮ ಸಂವತ್ಸರೇ,ಉತ್ತರಾಯನೇ/ದಕ್ಷಿಣಾಯನೇ ..
.........ಋತೌ , .... ಮಾಸೇ ,ಶುಕ್ಲ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ( ಗೋತ್ರ, ಜನ್ಮ ಹೆಸರನ್ನೂ ಉಚ್ಚರಿಸಬೇಕು ) ಅಸ್ಮಾಕಂ ಸಹಕುಟುಂಬಾನಾಂ ಸಹ ಪರಿವಾರಾಣಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ..............(ಪುಜನಿಯ ದೇವತಾ) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂಕರಿಷ್ಯೇ.
ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು. ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು.
ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:
1.ಆವಾಹನೆ - ಅಂದರೆ ಆಹ್ವಾನ .ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.
2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
4.ಅರ್ಘ್ಯ - ಕೈತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.
6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.
7.ವಸ್ತ್ರ - ಧರಿಸಲು ಉಡುಪುಕೊಡುವುದು . ಕೇವಲ ಅರಿಶಿಣ ಹಚ್ಚಿದ ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ  ಜನಿವಾರ,  ಆಭರಣವನ್ನು ಬಳೆ-ಬಿಚ್ಚೋಲೆ ಸಮರ್ಪಿಸುವುದು.
8.ಹರಿದ್ರ, ಕುಂಕುಮ, ಗಂಧ, ಅಕ್ಷತ -ಅರಿಶಿನ , ಕುಂಕುಮ, ಶ್ರೀಗಂಧ ,ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.
11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.
12.ದೀಪ - ದೀಪ ಸಮರ್ಪಣೆ ಮಾಡುವುದು.
13.ನೈವೇದ್ಯ, ತಾಂಬೂಲ -ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.
14. ನೀರಾಜನ - ತುಪ್ಪಲ್ಲಿ ತೋಯಿಸಿದ  ಹೂಬತ್ತಿ ಗಳಿಂದಲೋ  ಮಂಗಳಾರತಿ  ಬತ್ತಿ ಗಳಿಂದಲೋ ಕರ್ಪುರದಿಂದಲೋ
ಮಂಗಳಾರತಿ ಮಾಡುವುದು.
15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.
16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನುನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು.ಪೂಜೆಯ ನಂತರ ದೇವರು ಅನುಗ್ರಹಿಸಿರುವ ಅರಿಶಿನ,ಕುಂಕುಮ,ನೈವೇದ್ಯವನ್ನು ಪ್ರಸಾದರೂಪವಾಗಿ ಸ್ವೀಕಾರ ಮಾಡುವುದು.ಹೀಗೆ ಕ್ರಮವಾಗಿ ಪೂಜೆ ಮಾಡಿದೇವರನ್ನು ಸಂತೃಪ್ತಿ ಪಡಿಸಿದರೆ,ಭಗವಂತನು ತನ್ನ ಕೃಪೆಯನ್ನು ನಮ್ಮಮೇಲೆ ಅಪಾರವಾಗಿಅನುಗ್ರಹಿಸುತ್ತಾನೆ.
ಪೂಜಾ ಸಾಮಾಗ್ರಿ:-
ಪೂಜೆ ಶುರು ಮಾಡುವ ಮುನ್ನ ,ಅಲಂಕಾರ, ಅಣಿ ಮಾಡಿಕೊಳ್ಳಕ್ಕೆ ಸುಮಾರು ಹೊತ್ತು ಆಗುತ್ತೆ. ಪೂಜೆ ಅಂದರೆ ಎಷ್ಟೊಂದು ಸಾಮಗ್ರಿ ಉಪಯೋಗಿಸುತ್ತೀವಿ , ಪೂಜೆಮಾಡೋ ಸಡಗರದಲ್ಲಿ ಕೆಲವೊಮ್ಮೆಒಂದೆರಡು ಸಾಮಾನು ಮರೆಯುವಸಾಧ್ಯತೆಗಳು ಇದೆ ಹೀಗೆ ಆಗದೆ ಇರಲಿಅಂತ ಪೂಜಾ ಸಾಮಾನುಗಳಒಂದು ಪಟ್ಟಿಯನ್ನು  ಮಾಡಿದ್ದೀನಿ.ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು:
ರಂಗೋಲಿ , ಮಣೆ / ಮಂಟಪ ದೇವರ ವಿಗ್ರಹ, ದೇವರ ಪಟ ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ  ಘಂಟೆ, ಜಾಗಟೆ  ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ,ನೀರು ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ.ಅರಿಶಿನ, ಕುಂಕುಮ,ಮಂತ್ರಾಕ್ಷತೆ ಶ್ರೀಗಂಧ, ಊದಿನ ಕಡ್ಡಿಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ - ಹಾಲು,ಮೊಸರು, ಸಕ್ಕರೆ, ತುಪ್ಪ,ಜೇನುತುಪ್ಪವೀಳ್ಯದ ಎಲೆ, ಅಡಿಕೆ,ಹಣ್ಣು , ತೆಂಗಿನಕಾಯಿ
ನೈವೇದ್ಯ - ಪಾಯಸ, ಅನ್ನ,ಕೋಸಂಬರಿ, ಇತ್ಯಾದಿ      ಹಲಗಾರತಿ, ಕರ್ಪೂರ,ಮಂಗಳಾರತಿ ಬತ್ತಿ ಆರತಿ ತಟ್ಟೆ, ಸೊಡರು ,ಹೂಬತ್ತಿ,ಕೆಲವು ಪೂಜೆಗಳಲ್ಲಿ ಅಧಿಕವಾಗಿ ಇನ್ನಷ್ಟು ಸಾಮಗ್ರಿಗಳನ್ನು ಉಪಯೋಗಿಸುತ್ತೀವಿ :ಕಳಶ, ಅರಿಶಿನದ ಕೊನೆ ಜನಿವಾರ, ಅರಿಶಿನ ದಾರಮರದ ಜೊತೆ / ಬಾಗಿನ  ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ ಸೋಬಲಕ್ಕಿ, ಉಪಾಯನ
ದಾನ ನವಗ್ರಹಮಂಡಲ ಇತ್ಯಾದಿಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ.ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ .
ಇದು ಪ್ರತಿಯೊಬ್ಬರ ಆಸಕ್ತ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ. ನೈವೇದ್ಯಕ್ಕೆ ಚಿಗಳಿ
( ಎಳ್ಳು ಮತ್ತು ಬೆಲ್ಲ ಸೇರಿಸಿಮಾಡುವ ಸಿಹಿ ತಿನಿಸು) ತಂಬಿಟ್ಟು (ಅಕ್ಕಿ, ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ಮಾಡುತ್ತಾರೆ. ಪೂಜೆಯ  ನಂತರ ದೇವರ ಮುಂದೆ
ಒಡಹುಟ್ಟಿದವರಿಗೆ ಹಾಲು ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ.
ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು  ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು  ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ.
ಹೊಟ್ಟೆ ಎಂದರೆ -ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿಹುಟ್ಟುವ ಮಕ್ಕಳು ಎಂಬ ಸಂಕೇತ ,ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ.ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ.ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ಮಾಡುತ್ತಾರೆ. ೩ - ೫ ದಿನಗಳ ಹಬ್ಬನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣಶರ್ಮ (ಆನಂದಕಂದರು) ರಚಿಸಿರುವ
"ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ
ಅಣ್ಣ ಬರಲಿಲ್ಲ ಯಾಕೋ ಕರಿಯಾಕ "
ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿಹಬ್ಬವನ್ನು ತವರು ಮನೆಗೆ ಹೋಗಿಆಚರಿಸುತ್ತಾರೆ. ಒಡಹುಟ್ಟಿದವರಿಗೆ
ಹಾಲು ಎರೆದು ಉಡುಗೊರೆಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ .ಜೋಕಾಲಿ ಕಟ್ಟಿ ಆಟ ಆಡುತ್ತಾರೆ.ಹೀಗೆ ಸಂಬ್ರಮದಿಂದ ಹಬ್ಬಮಾಡುತ್ತಾರೆ.ಕರ್ನಟಾಕದಲ್ಲೇ ಅಲ್ಲ, ಇಡೀ ಭಾರತದೇಶದಲ್ಲಿ ನಾಗ ಪಂಚಮಿಆಚರಿಸುತ್ತಾರೆ. — — 
ನಾಗಪೂಜೆ ಎಷ್ಟು ಅರ್ಥಪೂರ್ಣ
==================                         
ಶ್ರಾವಣ ಶುಕ್ಲ ಪಂಚಮಿಯನ್ನು ನಾಗಪಂಚಮೀ ಎಂದು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ನಾಗಪಂಚಮಿಯಂದು ಏಳುಹೆಡೆಯ ಸರ್ಪಾಕೃತಿಯ ಚಿತ್ರಬರೆದು ತಾಳೆಹೂವಿನಿಂದ ಅದಕ್ಕೆ ಹಾಲೆರೆಯುವ ಪದ್ಧತಿ ಇದೆ. ಇದಕ್ಕೆ ತನಿ ಎರೆಯುವುದು ಎಂಬ ಹೆಸರಿದೆ. ಅಂತೆಯೇ ಅಂದು ಬೆನ್ನುಮೂಳೆಯ ಆರಂಭದ ಎಡೆ, ಹೊಕ್ಕಳು, ಹೃದಯ, ಗಂಟಲಗುಳಿ, ಅದರ ಹಿಂಭಾಗದ ಬೆನ್ನಿನ ನೇರ, ನೆತ್ತಿ ಇವುಗಳಿಗೆ ಹಾಲು ತುಪ್ಪವನ್ನು ಸವರುವುದೂ ರೂಢಿಯಲ್ಲಿದೆ. ನಾಗದ ವಾಸದ ಎಡೆಯಾದ ಹುತ್ತಗಳಿರುವಲ್ಲಿಗೆ ಹೋಗಿ ಹಾಲು ತುಪ್ಪಗಳನ್ನೆರೆಯುವ ರೂಢಿಯೂ ಇದೆ.
ಆದರೆ ನಾಗಪೂಜೆಯ ಬಗ್ಗೆ ಸಾಕಷ್ಟು ಟೀಕೆಗಳನ್ನುಕೇಳುತ್ತೇವೆ. ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಆರ್ಯ ದ್ರಾವಿಡ ವಾದ:
ಭಾರತದಲ್ಲಿ ಎಲ್ಲ ವಿಷಯಗಳಿಗೂ ಆರ್ಯ ದ್ರಾವಿಡ ವಾದವನ್ನು ಮುಂದೆಮಾಡುವವರು ಹೇಳುವ ಮಾತು- ದ್ರಾವಿಡ ಅಥವಾ ಆದಿವಾಸಿ ಜನಾಂಗದಲ್ಲಿ ಈ ನಾಗ ಪೂಜೆ ಬಳಕೆಯಲ್ಲಿತ್ತು, ನಂತರ ಆರ್ಯ-ದ್ರಾವಿಡ ಸಂಗಮವಾದಾಗ ಆರ್ಯ ಸಂಸ್ಕೃತಿಯಲ್ಲಿಯೂ ಈ ನಾಗಪೂಜೆ ಸೇರಿತು. ಶ್ರೀಕೃಷ್ಣನ ಕಾಲೀಯ ತಾಂಡವವು ಈ ನಾಗ ಪೂಜೆಯ ಕ್ಷೀಣ ದಶೆಯನ್ನು ಸೂಚಿಸುತ್ತದೆ ಎಂಬುದು ಅಂತಹ ಮಹಾಮೇಧಾವಿಗಳ ಮಾತು. 
ದೇವತಾಮೂರ್ತಿಗಳಲ್ಲಿ ನಾಗನ ಹಿನ್ನೆಲೆ: 
ದೇವತೆಗಳಿಗೆ ಮತ್ತು ನಾಗಕ್ಕೆ ನಿಕಟವಾದ ಸಂಬಂಧ ಕಲ್ಪಿಸಲಾಗಿದೆ. ವಿಷ್ಣು ಶೇಷಶಾಯಿ. ಶಿವ ನಾಗಾಭರಣಧರ. ಗಣಪತಿ ನಾಗಯಜ್ಞೋಪವೀತಿ. ಇದಲ್ಲದೇ ಸುಬ್ರಹ್ಮಣ್ಯ, ನಾಗರಾಜ ಎಂಬ ಹೆಸರಿನಿಂದ ಸ್ವತಂತ್ರವಾಗಿಯೇ ನಾಗನನ್ನು ಪೂಜಿಸುವುದೂ ನಮಗೆಲ್ಲರಿಗೂ ವೇದ್ಯವಾದ ವಿಷಯವೇ.
ಮೂರು, ಐದು, ಏಳು ಹೆಡೆಗಳ ಸರ್ಪಗಳು. ಇದಲ್ಲದೇ ಭೂಮಿಯಲ್ಲೆಲ್ಲೂ ಕಾಣದ ಕೇಳದ ಮೂರು, ಐದು, ಏಳು ಹಾಗೂ ಸಹಸ್ರಹೆಡೆಗಳ ಸರ್ಪ-ಆದಿಶೇಷನಕಲ್ಪನೆ ಭಾರತೀಯ ಸಾಹಿತ್ಯದಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಈ ಭೂಮಿಯೇ ಸಾವಿರ ಹೆಡೆಗಳ ಆದಿಶೇಷನಮೇಲೆ ನಿಂತಿದೆ ಎನ್ನುವ ಕಲ್ಪನೆ ಬೇರೆ. ಸೌರಾಕರ್ಷಣೆಯ ಬಲದಮೇಲೆ ಭೂಮಿ ನಿಂತಿರುವುದು ವೈಜ್ಞಾನಿಕ ಸತ್ಯವಾಗಿರುವಾಗ ಅದು ಆದಿಶೇಷನ ಫಣಗಳಮೇಲೆ ನಿಂತಿದೆ ಎನ್ನುವುದು  ನಂಬಿಕೆಯಲ್ಲದೇ ಮತ್ತೇನು?
ತನ್ನ ಬುದ್ಧಿಸಾಮರ್ಥ್ಯಗಳಿಂದ ನಿಸರ್ಗದ ಆಳ-ಅಗಲಗಳ ಅಳತೆಯನ್ನು ಮಾಡುತ್ತಾ ಅನೇಕ ರಂಗಗಳಲ್ಲಿ ಯಶಸ್ಸನ್ನು ಸಾಧಿಸಿದ ಮಾನವನೆಲ್ಲಿ? ತಾನು ಹುಟ್ಟಿದಂದಿನಿಂದ ನಿಸರ್ಗವಿಟ್ಟಂತೆಯೇ ಇರುವ ಯಾವ ಹೆಗ್ಗಳಿಕೆಯೂ ಇಲ್ಲದ ನಾಗವೆಲ್ಲಿ? ಅಂತಹ ಕ್ಷುದ್ರ ವಿಷಜಂತುವನ್ನು ನಿಸರ್ಗದ ಮಹಾನ್ವೇಷಕನಾದ ಮಾನವ ಪೂಜಿಸುವುದು ಮನುಕುಲಕ್ಕೇ ಅಪಮಾನವಲ್ಲವೇ?
ಇಂತಹ ಪರಿಸರದಲ್ಲಿ ನಾಗಪೂಜೆ ಹೇಗೆ ಸಮರ್ಥನೀಯ? ಜೀವನಕ್ಕೆ ಅದು ಯಾವ ಮೇಲ್ಮೆಯನ್ನು ತರುತ್ತದೆ. ಎಲ್ಲೂ ಕಾಣದ ಮೂರು, ಐದು, ಏಳು, ಸಹಸ್ರ ಫಣಗಳ ಸರ್ಪಗಳ ಕಲ್ಪನೆ ಹೇಗೆ ಮೂಡಿಬಂತು? ದೇವತೆಗಳಿಗೂ ಸರ್ಪಕ್ಕೂ ಕಲ್ಪಿಸಿರುವ ಸಂಬಂಧದ ತಿರುಳೇನು? ಎಲ್ಲವೂ ಉತ್ತರವನ್ನು ಬಯಸುವ ಪ್ರಶ್ನೆಗಳಾಗಿವೆ. ನಾಗಪೂಜೆಯು ಕ್ಷುದ್ರ ವಿಷಜಂತುವಿನ ಮೂಢ ಆರಾಧನೆಯೇ ಆದರೆ ಅದನ್ನು ಕೈಬಿಡುವುದೇ ಲೇಸು. ಇದಲ್ಲದೇ ವಸ್ತುನಿಷ್ಠವಾದ ವಿಷಯಗಳೂ ಆ ಪೂಜೆಯಲ್ಲಿದೆ ಎಂಬುದಾದರೆ ಅಂತಹ ಮೌಲಿಕವಾದ ವಿಷಯಗಳು ಬೆಳಕಿಗೆ ಬರಬೇಕಾಗುತ್ತದೆ.
ಮಹರ್ಷಿ ಪ್ರಣೀತ ಆಚರಣೆ:
ನಿಸರ್ಗವನ್ನೂ,ಜೀವನವನ್ನೂ, ಒಳತುಂಬುನೋಟದಿಂದ ಅನ್ವೇಷಿಸಿ ಅಂತಹ ಅನ್ವೇಷಣೆಯಿಂದ ಬಂದ ನಿಷ್ಕರ್ಷೆಯಿಂದ ಜೀವನದ ನಡವಳಿಕೆಗಳನ್ನು ರೂಪಿಸಿದ ನಮ್ಮ ಸನಾತನ ಭಾರತೀಯ ಮಹರ್ಷಿಗಳಿಂದಲೇ ಈ ನಾಗಪೂಜೆಯೂ ರೂಪವನ್ನು ತಳೆದಿದೆ ಎಂಬುದನ್ನು ನಾವು ಗಮನಿಸಬೇಕು. ಅವರು ಪೂಜಿಸಿದ ಆ ನಾಗ ಕೇವಲ ಕ್ಷುದ್ರಜಂತು ಮಾತ್ರವಲ್ಲ ಎನ್ನುವುದೂ ಅಷ್ಟೇ ಸತ್ಯವಾದ ವಿಷಯ. ಹಾಗಾದರೆ ಯಾವುದು ಆ ನಾಗ? ಎಲ್ಲಿದೆ? 
ನಾಗ-ಕುಂಡಲಿನೀ
ಪ್ರತಿ ಜೀವಿಗಳ ಮೂಲಾಧಾರ ಎಂಬ ಶರೀರದ ಕೇಂದ್ರದಲ್ಲಿ ಸುಪ್ತವಾಗಿ ಸುತ್ತು ಹಾಕಿಕೊಂಡಿರುವ ಕುಂಡಲಿನೀ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿಯೇ ಅವರು ಗುರುತಿಸಿದ ನಾಗ ಶಕ್ತಿ. ಅದು ಮೆದುಳುಬಳ್ಳಿಯಾಗಿ ವಿಕಾಸಗೊಂಡು ನಂತರ ಬೆನ್ನುಮೂಳೆಯಾಗುವ ಸುಷುಮ್ನಯೇ ಜೀವಿಯ ಇಹ ಮತ್ತು ಪರಗಳಿಗೆ ಆಧಾರವಾದ ಶಕ್ತಿಯನ್ನೊದಗಿಸುವ ಕೇಂದ್ರ. ನಮ್ಮ ಭೌತಿಕ ಜೀವನಕ್ಕೆ ಅಗತ್ಯವಾದ ಕೇಂದ್ರಗಳೂ ಆ ಮೂಳೆಯ ಪರ್ವಸ್ಥಾನದಿಂದಲೇ ಅರಳುತ್ತದೆ ಎಂಬುದನ್ನು ಆಧುನಿಕ ವಿಜ್ಞಾನವೂ ಒಪ್ಪುತ್ತದೆ. ಬೆನ್ನೆಲುಬೇ ಜೀವನದ ಆಧಾರ ಎನ್ನುವ ಮಾತೂ ಜನಜನಿತವಾಗಿದೆ.
ಆ ಬೆನ್ನೆಲುಬಿನ ಹೊರರಹಸ್ಯವನ್ನು ಆಧುನಿಕ ವೈದ್ಯವಿಜ್ಞಾನವು ಬಯಲಿಗೆಳೆದಿರುವಂತೆ ಅದರ ಒಳರಹಸ್ಯವನ್ನು ಯೋಗವಿಜ್ಞಾನವು ಅರಿತು ಹೊರಹೊಮ್ಮಿಸಿದೆ. ಅದರಂತೆ ಮೂಲಾಧಾರ ಪ್ರದೇಶದಲ್ಲಿ ಸುತ್ತುಹಾಕಿಕೊಂಡಿರುವ ಆ ಕುಂಡಲಿಯು ಸುಪ್ತನಾಗದಂತೆ ಇರುತ್ತದೆ. ” ಕುಂಡಲೀ ಸುಪ್ತನಾಗವತ್” ಎಂದು ಯೋಗ ಶಾಸ್ತ್ರವು ಕೊಂಡಾಡುವುದೂ ಇದನ್ನೇ. ಸುಷುಮ್ನಾ ರಂಧ್ರದ ಒಳರಹಸ್ಯವನ್ನರಿಯದ ಅಥವಾ ಅರಿಯುವ ಪ್ರಯತ್ನವನ್ನೇ ಮಾಡದ ಜೀವಿಗಳ ಪಾಲಿಗೆ ಅದು ಸುಪ್ತವಾಗಿಯೇ ಇರುತ್ತದೆ. ಆದರೆ ಅವರಿಗೂ ಇಂದ್ರಿಯಜೀವನಕ್ಕೆ ಬೇಕಾದ ಚೈತನ್ಯರಸವು ಹರಿಯುವುದು ಆ ಶಕ್ತಿಯ ಕಡೆಯಿಂದಲೇ.
ಶಂಕರ ಭಗವತ್ಪಾದರು ತಮ್ಮ ಯೋಗತಾರಾವಳಿಯಲ್ಲಿ ಆ ನಾಗನನ್ನು ಹೀಗೆ ವರ್ಣಿಸುತ್ತಾರೆ 
ಓಡ್ಯಾಣ ಜಾಲಂಧರ ಮೂಲಬಂಧೈಃ ಉನ್ನಿದ್ರಿತಾಯಾಂ ಉರಗಾಂಗನಾಯಾಂ
ಪ್ರತ್ಯಙ್ಮುಖತ್ವಾತ್ಪ್ರವಿಶನ್ ಸುಷುಮ್ನಾಂ ಗಮಾಗಮೌ ಮುಂಚತಿ ಗಂಧವಾಹಃ ||
ಉಡ್ಯಾಣ, ಜಾಲಂಧರ, ಮೂಲ ಎಂಬ ಬಂಧಗಳಿಂದ ನಾಗ ಶಕ್ತಿಯು ಎಚ್ಚರಗೊಳಿಸಲ್ಪಡುತ್ತದೆ. ಆಗ ಹಿಮ್ಮುಖನಾಗಿ ಸುಷುಮ್ನೆಯನ್ನು ಪ್ರವೇಶಿಸಿದ ಪ್ರಾಣಶಕ್ತಿಯು ತನ್ನ ಗತಾಗತಿಯನ್ನು ಬಿಡುತ್ತದೆ. ಎಂಬುದು ಅನುಭವಿಗಳ ಮಾತು. 
ಮೂಲಬಂಧವೆಂಬುದು ಪೃಷ್ಠಾಸ್ಥಿಮೂಲದಲ್ಲಿ ಏರ್ಪಡುವ ಒಂದು ಕಟ್ಟು. ಉಡ್ಯಾಣಬಂಧವು ಉದರ ಅಥವಾ ನಾಭಿದೇಶದಲ್ಲಿ ಏರ್ಪಡುವ ಕಟ್ಟು. ಜಾಲಂಧರವೆಂಬುದು ಕಂಠಪ್ರದೇಶದಲ್ಲಿ ಏರ್ಪಡುವ ಒಂದು ಕಟ್ಟು. ಈ ಮೂರೂ ಕಟ್ಟೂ ಏರ್ಪಟ್ಟಾಗ 
ಆ ಸಂದರ್ಭದಲ್ಲಿ ಏಳುವ ನಾಗಶಕ್ತಿ, ಕುಂಡಲಿನೀ ಶಕ್ತಿ. ಅದುವೇ ಅವರು ಪೂಜಿಸಿದ ನಾಗ ಶಕ್ತಿ. ತಮ್ಮ ಒಳಮುಖಜೀವನದ ನಡೆಯಿಂದ ಸುಷುಮ್ನೆಯನ್ನು ಪ್ರವೇಶಿಸುವ ಸಾಹಸಕ್ಕಿಳಿದು, ಆ ಬಗ್ಗೆ ಸೂಕ್ತ ಮಾರ್ಗದರ್ಶನ, ಗುರುವಿನ ಅನುಗ್ರಹವನ್ನು ಪಡೆದು ಸಾಧನೆ ಮಾಡುವವರಿಗೆ ಪ್ರಾಣಶಕ್ತಿಯು ಸುಷುಮ್ನೆಯಲ್ಲಿ ಪ್ರವೇಶಿಸತೊಡಗಿದಾಗ ಆ ಸುಪ್ತನಾಗವು ಎಚ್ಚರಗೊಳ್ಳುತ್ತದೆ ತನ್ನ ಸುತ್ತುಗಳನ್ನು ಬಿಚ್ಚುತ್ತದೆ. ಆ ಶಕ್ತಿಯು ಶರೀರದ ಆರೂ ಕೇಂದ್ರಗಳನ್ನು ಭೇದಿಸಿಕೊಂಡು ಏಳನೆಯದಾದ ಸಹಸ್ರಾರವೆಂಬ ಎಡೆಯಲ್ಲಿ ನೆಲೆ ನಿಲ್ಲುತ್ತದೆ. ಅದು ವಿದ್ಯುಲ್ಲೇಖೆಯಂತೆ ಮಿನುಗುತ್ತದೆ. ಜೀವನದ ಒಳ ರಹಸ್ಯವನ್ನೆಲ್ಲವನ್ನೂ ಬಚ್ಚಿಟ್ಟುಕೊಂಡಿರುವ ಜ್ಞಾನ ಭಂಡಾರವದು. ಪ್ರಾಮಾಣಿಕವಾದ ಪ್ರಯತ್ನದಿಂದ ಜೀವನದ ಒಳರಹಸ್ಯವನ್ನರಿಯಲು ಸಾಧನೆ ಮಾಡುವವರಿಗೆ ಸುಷುಮ್ನಾದ್ವಾರವನ್ನು ತೆರೆದು ಕಾಪಾಡುವ ತಾಯಿ ಅವಳು. ಪೂಜ್ಯರಾದ ಶ್ರೀ ರಾಮಭದ್ರಾಚಾರ್ಯರು ಒಂದು ಉದಾಹರಣೆ  ಕೊಟ್ಟಿದ್ದರು. 
ನಾವು ನಮ್ಮ ಜಮೀನನ್ನು ಮರೆತು ಬಿಟ್ಟಿದ್ದೇವೆ. ಸುಷುಮ್ನೆಯನ್ನು ಮರೆತಿದ್ದೇವೆ. ಅದನ್ನು ನಮ್ಮ ಜಮೀನು ಎಂದು ಅರಿತು ಮತ್ತೆ ಮತ್ತೆ ಸಾಧನೆಯಿಂದ ಅದರ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ  ಆ ಜಮೀನನ್ನು ಕಾಯುತ್ತಿರುವ ತಾಯಿ ನಮಗೆ ದ್ವಾರವನ್ನು ಬಿಟ್ಟು ಕೊಡುತ್ತಾಳೆ.ಅದಿಲ್ಲದಿದ್ದಾಗ ಅವಳು ಆ ದ್ವಾರವನ್ನು ಭದ್ರವಾಗಿ ಮುಚ್ಚಿರುತ್ತಾಳೆ-ಎಂಬುದಾಗಿ. 
ಆ ಜ್ಞಾನ ಭಂಡಾರವಾದ ಶಕ್ತಿಯ ನಡೆಯು  ಹೊರಗೆ ಸುತ್ತನ್ನು ಬಿಚ್ಚುವ ಸರ್ಪದ ನಡೆಯನ್ನೂ, ಮತ್ತು ಅದು ಮೇಲೇಳುವ ನಡೆಯು ಸರ್ಪದ ಗತಿಯನ್ನೂ ಹೋಲುವುದರಿಂದ ಅದನ್ನೂ ಸರ್ಪ ಅಥವಾ ನಾಗ ಎಂದು ಕರೆದರು. ಅಂದರೆ ಜೀವನ ವಿಕಾಸಕ್ಕೆ ಬೇಕಾದ ಚೈತನ್ಯ ರಸ ಧಾರೆಯನ್ನೆರೆಯುವ, ಒಳಗೆ ಸರ್ಪದ ನಡೆಯಿಂದ ಗೋಚರವಾಗುವ ಮಿಂಚಿನ ಕಾಂತಿಯುಳ್ಳ ಮಹಾಶಕ್ತಿಯೇ ಕುಂಡಲಿ ಅಥವಾ ಕುಂಡಲಿನೀ. ಅದೇ ಅವರು ಪೂಜಿಸಿದ ನಾಗ ಶಕ್ತಿಯೇ ಹೊರತು ಹೊರಗಿನ ವಿಷಜಂತುವಲ್ಲ.
ತಂತ್ರ ಶಾಸ್ತ್ರ - 
ತಂತ್ರಶಾಸ್ತ್ರದ ಈ ಮಾತು ಇದನ್ನು ಇನ್ನೂ ಸ್ಪಷ್ಟಗೊಳಿಸುತ್ತದೆ :
ಮೂಲೋನ್ನಿದ್ರ ಭುಜಂಗರಾಜಮಹಿಷೀಂ ಯಾಂತೀಂ ಸುಷುಮ್ನಾಂತರಂ
ಭಿತ್ವಾಧಾರ ಸಮೂಹ ಮಾಶು ವಿಲಸತ್ಸೌದಾಮಿನೀ ಸನ್ನಿಭಾಂ |
ವ್ಯೋಮಾಂಭೋಜ ಗತೇಂದುಮಂಡಲ ಗಲದ್ದಿವ್ಯಾಮೃತೌಘಪ್ಲುತಂ
ಸಂಭಾವ್ಯ ಸ್ವಗೃಹಂ ಗತಾಂ ಪುನರಿಮಾಂ ಸಂಚಿಂತಯೇತ್ಕುಂಡಲೀಂ ||
ಮೂಲಾಧಾರದೆಡೆಯಲ್ಲಿ ಎಚ್ಚೆತ್ತ ಸರ್ಪರಾಣಿ ಸುಷುಮ್ನೆಯಲ್ಲಿ ಸಂಚರಿಸುತ್ತಿರುವಾಕೆ. ಆಧಾರಾದಿ ಆರು ಚಕ್ರಗಳನ್ನೂ ಭೇದಿಸಿ ಮಿಂಚಿನ ಬಳ್ಳಿಯಂತೆ ಹೊಳೆಯುತ್ತಿರುವಾಕೆ. ದಹರಾಕಾಶದಲ್ಲಿರುವ ಸಹಸ್ರಾರಕಮಲ ಪ್ರದೇಶದಲ್ಲಿರುವ ಚಂದ್ರಮಂಡಲದಿಂದ ಅಮೃತವನ್ನು ಹರಿಸುತ್ತಿರುವುದನ್ನು ಗಮನಿಸಿ ಆ ಕುಂಡಲಿಯು ತನ್ನ ಮನೆ ಸೇರಿರುವುದನ್ನರಿತು ಅವಳನ್ನು ಚಿಂತಿಸಬೇಕು  ಎಂಬುದಾಗಿದೆ. ಅಂತಹ ಕುಂಡಲಿನಿಯನ್ನು ತಮ್ಮ ವಶಪಡಿಸಿಕೊಂಡಿರುವುದರಿಂದಲೇ ಅದು ಶಿವ, ವಿಷ್ಣು ದೇವತೆಗಳ ಶಿರೋಭಾಗದಲ್ಲಿ ಕಂಗೊಳಿಸುವುದು. ಮೂಲಾಧಾರದಿಂದ ಎಚ್ಚೆತ್ತು ಸರಸರನೆ ಮೇಲೆ ಹರಿದು ಸಹಸ್ರಾರದಲ್ಲಿ ಶೋಭಿಸುತ್ತಿರುವುದು.
ಹೀಗೆ ಅವರು ಆರಾಧಿಸಿರುವ ನಾಗ ಹೊರ ವಿಷಜಂತುವಲ್ಲ. ಜೀವನಕ್ಕೆ ಚೈತನ್ಯವನ್ನೆರೆಯುವ ಜೀವನದ ಸಾರವಾದ ಶಕ್ತಿ, ಅದರ ಹಾದಿ ಹಿಡಿದು ಹೊರಟಾಗ ಜೀವಿಗಳನ್ನು ನೆಲೆ ಮುಟ್ಟಿಸಬಲ್ಲ ಮಹಾಶಕ್ತಿ. ಆ ಸುಷುಮ್ನಾಂತರ್ಗತವಾದ ಮಹಾಶಕ್ತಿಯೇ ಜೀವನದ ಒಳಹೊರ ರಹಸ್ಯಗಳನ್ನು ಬಿಚ್ಚಿಕೊಡುವ ಭಂಡಾರವಾದುದರಿಂದಲೇ ಅದರ ಆರಾಧನೆ. ಒಳಗೆ ಪ್ರಣವ ರೂಪವಾಗಿ ಮೊಳಗುವ ಮಹಾಶಕ್ತಿಯೂ ಅದೇ. 
ವಿಷ್ಣು ಸರ್ಪಶಯನ 
ವಿಶ್ವವ್ಯಾಪಕನಾದ ವಿಷ್ಣುವು ಅದರುದ್ದಕ್ಕೂ ವ್ಯಾಪಿಸಿ ತುಂಬಿಕೊಂಡಿರುವುದರಿಂದ ಅದು ವಿಷ್ಣುವಿನ ಶಯನ. ಅವನು ತುಂಬಿಕೊಂಡ ಎಡೆ ಅವನ ಶಯನ. ಅವನು ಪೂರ್ಣವಾಗಿ ತುಂಬಿಕೊಂಡಾಗ ಅಲ್ಲಿ ಸ್ತ್ರೀಪುರುಷಭೇದವಿಲ್ಲ. ಅವನ ಪರಾಶಕ್ತಿಯಲ್ಲಿ ಅವನು ಅಂತಃಪ್ರವಿಷ್ಟನಾಗಿ ಅನಂತಶಯನನಾಗಿ ಇರುವವನು. ಹಾಗೆಂದೇ ವಿಷ್ಣು ಶೇಷಶಾಯಿ.
ಶಿವ ನಾಗಾಭರಣ:
ಈ ಕುಂಡಲಿನೀ ಶಕ್ತಿಯೇ ಶರೀರವ್ಯಾಪಿಯಾಗಿ ಅದರ ಬಗೆಬಗೆಯ ಎಡೆಗಳಲ್ಲಿ ಬಗೆಬಗೆಯ ಕೆಲಸವನ್ನು ನಿರ್ವಹಿಸುತ್ತಿರುವುದರಿಂದ  ಅದನ್ನು ಸೂಚಿಸಲು ಶಿವನ ಶರೀರದ ಬಗೆಬಗೆಯ ಎಡೆಗಳಲ್ಲಿ ನಾಗಾಭರಣವಿರುವುದು. ಮೇಲೆದ್ದ ಕುಂಡಲಿನಿಯ ಜ್ಞಾನದೃಷ್ಟಿಗೋಚರನಾದ ಮಹಾದೇವನವನು. 
ಗಣಪತಿ ನಾಗಯಜ್ಞೋಪವೀತಿ:
ಯಜ್ಞ್ನೋಪವೀತವು ಸೃಷ್ಟಿರಹಸ್ಯಗಳೆಲ್ಲವನ್ನೂ ಒಳಗೊಂಡ ಸೂತ್ರವಾಗಿದೆ. ಜೀವಶಕ್ತಿಯೇ ಆದ ಕುಂಡಲಿನಿಯು ಜೀವದ ಗತಿಯನ್ನು ಸೂಚಿಸುವ ಯಜ್ಞೋಪವಿತವು ಆಗಿದೆ ಎಂಬುದನ್ನು ಸೂಚಿಸಲು ಮೂಲಾಧಾರದ ದೇವತೆಯಾದ ಗಣಪತಿಯು ನಾಗಯಜ್ಞೋಪವೀತಿಯಾಗಿದ್ದಾನೆ.
ಸಹಸ್ರಾರ ಪ್ರದೇಶದಲ್ಲಿ ಕಾಂತಿಯುತವಾಗಿ ಬೆಳಗುವ ಫಣಗಳು ಗೋಚರವಾಗುವುದರಿಂದ ಸಹಸ್ರ ಫಣ ಸರ್ಪವೂ ಅದೇ ಆಗಿದೆ.
ತ್ರಿಗುಣಗಳೇ ಮೂರು ಮುಖವಾಗಿ ನಡೆದ ಸೃಷ್ಟಿಶಕ್ತಿಯನ್ನು ಮೂರು ಹೆಡೆಯು ಸೂಚಿಸುತ್ತಿದೆ. ಆ ಶಕ್ತಿಯು ಸೃಷ್ಟ್ಯುನ್ಮುಖವಾಗಿ ಕೆಲಸ ಮಾಡುವ ರಹಸ್ಯವನ್ನೇ ಹೇಳುತ್ತಿದೆ. ಈ ತರಹದ ಹಾವು ಹೊರಗಿಲ್ಲವೆಂಬುದು ಅದನ್ನು ತಂದವರಿಗೂ ಗೊತ್ತು. ಅಂತೆಯೇ ಪಂಚಪ್ರಾಣ ಶಕ್ತಿಗಳು  ಅಥವಾ ಸಪ್ತ ಪ್ರಾಣ ಶಕ್ತಿಗಳು ಕೇವಲ ಇಂದ್ರಿಯಮುಖವಾದ ಪ್ರವೃತ್ತಿಯನ್ನು ಬಿಟ್ಟು ಜ್ಞಾನ ಮುಖವಾದಾಗ ಎಲ್ಲ ವೃತ್ತಿಗಳೂ ಜ್ಞಾನದ ನೆಲೆಯತ್ತಲೇ ಬೆಳೆದು ಜ್ಞಾನದ ಪರಮರಹಸ್ಯವನ್ನು ಜೀವಿಯು ಮುಟ್ಟಿದಾಗ ಆ ವೃತ್ತಿಗಳೆಲ್ಲವೂ ಮೇಲ್ಮುಖವಾಗಿವೆ ಎಂಬುದನ್ನೇ ಐದು ಅಥವಾ ಏಳು ಹೆಡೆಗಳು ತೋರಿಸುತ್ತವೆ.
ಆದಿಶೇಷನ ಮೇಲೆ ಭೂಮಿ ನಿಂತಿದೆ;
ಆ ಮಹಾಶಕ್ತಿಯು ಯಾವ ಮೂಲಧಾರಪ್ರದೇಶದಲ್ಲಿ ಸುತ್ತುಹಾಕಿಕೊಂಡಿದೆಯೋ ಆ ಎಡೆಯನ್ನು ಪೃಥ್ವೀ ತತ್ತ್ವದ ಎಡೆಯೆಂದು ಜ್ಞಾನಿಗಳು ಗುರುತಿಸುವುದರಿಂದ ಸುತ್ತು ಹಾಕಿದ ಆದಿಶೇಷನ ಮೇಲೆ ಭೂಮಿ ನಿಂತಿದೆ ಎಂಬ ಮಾತು ಒಳಸತ್ಯವನ್ನು ಸಾರುತ್ತದೆ. ಇಡೀ ವಿಶ್ವವೇ ವಾಸ್ತವವಾಗಿ ಆ ಶಕ್ತಿಯ ಬಲದಿಂದಲೇ ನಿಂತಿರುವುದು. 
ಶ್ರೀಕೃಷ್ಣನ ಕಾಲೀಯ ನರ್ತನ:
ಯೋಗಮಾರ್ಗಕ್ಕೆ ಅನುಕೂಲಕರವಾದ ನಾಗಶಕ್ತಿಯಂತೆಯೇ ಅದಕ್ಕೆ ವಿಘ್ನವನ್ನುಂಟುಮಾಡುವ ಸರ್ಪಶಕ್ತಿಯೂ ಉಂಟು. ಅಂತಹ ಸರ್ಪಶಕ್ತಿಯನ್ನು ಮೆಟ್ಟಬೇಕು. ಕೃಷ್ಣವರ್ಣದ ಕಾಳಿಂಗ ಅಂತಹ ಯೋಗವಿಘ್ನಕಾರಿಯಾದ ಮಹಾಸರ್ಪ. ಅದನ್ನು ಕೃಷ್ಣನು ಮೆಟ್ಟಿದುದು ಯೋಗವಿಘ್ನವನ್ನು ಅಳಿಸಿ ಯೋಗದಹಾದಿಯನ್ನು ತೆರೆಸುವ ಸೂಚನೆಯೇ ಹೊರತು ಹೊರಹಾವನ್ನು ಮೆಟ್ಟುವ ಅಥವಾ ನಾಗಾರಾಧನೆಯ ಕ್ಷೀಣದೆಸೆಯ ಕುರುಹಲ್ಲ.
ಒಳನಡೆಯ ನಾಗಾರಾಧನೆ
ಒಳನಡೆಯಲ್ಲಿ ತಾವು ಕಂಡ ನಾಗ ಶಕ್ತಿಯೇ ಅವರ ಆರಾಧನೆಯ ವಿಷಯ. ಅದು ನಾಗ ಶಕ್ತಿ ಎನ್ನುವುದಕ್ಕಿಂತಲೂ ಜೀವನದ ಮೂಲಜ್ಯೋತಿಯ ನಾಗರೂಪವೇ ಅದು. ಆ ನಾಗಾರಾಧನೆಯ ಮೂಲಕ ಅವರು ಆರಾಧಿಸಿದುದು ಆ ಮೂಲಜ್ಯೋತಿಯನ್ನೇ. 

....ಸಾಧಾರ ಮತ್ತು ಸೌಜನ್ಯದಿಂದ 

No comments:

Post a Comment