Monday, July 06, 2020

PANDAVA's PATNI - PANCHAALI . THOUGHT ಪಾಂಡವ ಪತ್ನಿ ಪಾಂಚಾಲಿ - ಚಿಂತನೆ

ಪಾಂಡವ ಪತ್ನಿ ಪಾಂಚಾಲಿ - ಚಿಂತನೆ 
ವಾಸ್ತವಿಕವಾಗಿ, ಪ್ರಸ್ತುತ ಜನಪದಗಳ ರೂಢಿ ಪರಂಪರೆಗಳನ್ನುಅವಲೋಕಿಸಲಾಗಿ, ಎಲ್ಲೊ ಒಂದುಕಡೆ ಓದಿದ ನೆನಪು  ಈಗಲೂ ಸಹ ಪಂಜಾಬ  ಹರಿಯಾಣ ಉತ್ತರಾ ಖಂಡ ಈ ಎಲ್ಲ ಪರಿಸರಗಳಲ್ಲಿ ಒಬ್ಬ ಹೆಣ್ಣು ಮಗಳು ಒಬ್ಬರಿಗಿಂತ ಹೆಚ್ಚಿಗೆ ಗಂಡಂದಿರನ್ನು ಮಾಡಿಕೊಳ್ಳುವ ಸಾಮಾಜಿಕ ಮಾನ್ಯತೆಯುಳ್ಳ ಪ್ರಘಾತವಿದ್ದು ಆ ಜನಪಗಳು ಇನ್ನೂ ಪ್ರಚಲಿತವಾಗಿವೆ

                     ಪುರಾಣಗಳ ಅರ್ಥ ನಿಕ್ಷೇಪದ ಆಳಕ್ಕೆ ಇಳಿದು ಅರ್ಥೈಸುವ ಕೊರತೆಯಿಂದಾಗಿ ಇವತ್ತಿನ ದಿನಮಾನಗಳಲ್ಲಿ ಹಿಂದೂ ವಿಚಾರಧಾರೆಯಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬರುತ್ತವೆ. ನಮ್ಮ ವಿತ್ಪತ್ತಿಗೆ ಅದು ಸರಿ ಕಾಣಿಸುತ್ತದೆ ಹಾಗು ಅದೇ ವಿಚಾರ ಮುಂದಿನ ಪೀಳಿಗೆಗೆ ಅನುಕ್ರಮದಲ್ಲಿ ಹಾದುಹೋಗುತ್ತದೆ. ಆದರೆ ಪುರಾಣಗಳ ನಿಜಾರ್ಥ ಯಾರಿಗೂ ತಿಳಿಯದೆ ಹಾಗೆ ಇರುತ್ತದೆ. ಕಾರಣ ಇಷ್ಟೇ, ಸತ್ಯಜ್ಞಾನ ವೃದ್ಧಿಗೊಳ್ಳಬೇಕು ಎಂಬ ಹಂಬಲದ ಸದ್ದಡಗಿಸಿ ನಮ್ಮೊಳಗಿನ ಅಹಂ ಮುಂದೆ ಬಂದು ನಿಲ್ಲುವುದು. ನಾವು ಕೇಳುವ ಪ್ರಶ್ನೆಗಳು ಜ್ಞಾನಾರ್ಜನೆಯ ಪ್ರತೀಕವಾಗಿರಬೇಕೇ ಹೊರತು ಆಕ್ಷೇಪದ ಸಂಕೇತವಾಗಿರಬಾರದು. ಆಗ ಎಲ್ಲದಕ್ಕೂ ಸಂಶಯ ಅಳಿದು ನಿಶ್ಚಯ ಮೂಡುತ್ತದೆ.

ಇಂತಹ ಪುರಾಣಗಳ ಅರ್ಥ ಮಾಲಿನ್ಯಕ್ಕೆ ದ್ರೌಪದಿಯು ಒಂದು ಉತ್ತಮ ಉದಾಹರಣೆ. ದ್ರೌಪದಿಗಿರುವ ಇನ್ನೊಂದು ಹೆಸರು  ಪಾಂಚಾಲಿ. ಅವಳಿಗೆ ಐದು ಜನ ಗಂಡಂದಿರು ಇರುವ ಕಾರಣಕ್ಕಾಗಿಯೇ ಅವಳಿಗೆ ಪಾಂಚಾಲಿ ಅನ್ನುವ ಹೆಸರು ಬಂತು ಎನ್ನುವ ಅರೆ ಪಂಡಿತವರ್ಗ ನಮ್ಮಲ್ಲಿದೆ. ವಾಸ್ತವವಾಗಿ ಅವಳು ಪಾಂಚಾಲ ದೇಶದ ರಾಜಕುಮಾರಿಯಾಗಿರುವ ಕಾರಣಕ್ಕೆ ಅವಳನ್ನು ರೂಢಿಯಲ್ಲಿ ಪಾಂಚಾಲಿ ಎಂದು ಕರೆಯುವರೇ ವಿನಃ ಪಂಚ ಪಾಂಡವರ ಪತ್ನಿಯಾಗಿರುವ ಕಾರಣಕ್ಕೆ ಅವಳು ಪಾಂಚಾಲಿ ಅಲ್ಲ. ಇಂತಹ ದೃಷ್ಟಾಂತಗಳು ಪುರಾಣದಲ್ಲಿ ಸಾಕಷ್ಟು ಕಾಣಸಿಗುತ್ತವೆ. ಕೋಸಲ ದೇಶದ ರಾಜಕುಮಾರಿ ಕೌಸಲ್ಯೆ, ಗಾಂಧಾರ ದೇಶದ ಕುಮಾರಿ ಗಾಂಧಾರಿ ಹಾಗೆಯೆ ಕೇಕಯದ ರಾಜಕುಮಾರಿ ಕೈಕೇಯಿ ಹೀಗೆ. ಆದರೆ ದುರ್ದೈವದ ಸಂಗತಿ ಎಂದರೆ ಪ್ರಸಕ್ತದಲ್ಲಿ ಪಾಂಚಾಲಿಗೆ ಐದು ಜನ ಗಂಡಂದಿರು ಅನ್ನುವ ಕಾರಣಕ್ಕೋಸ್ಕರ ಪಾಂಚಾಲಿ ಅನ್ನೋ ಹೆಸರು ಬೇರೆ ಬೇರೆ ವಿಧದಲ್ಲಿ ಅನ್ವರ್ಥನಾಮವಾಗಿ ಬಳಕೆಯಲ್ಲಿವೆ. ಏನೇ ಇರಲಿ "ಕಾಲಾಯ ತಸ್ಮೈ ನಮಃ".

ಪಾಂಚಾಲಿಯ ಹೆಸರಿನ ಹಿನ್ನೆಲೆ ತಿಳಿದ ಹಲವರಿಗೆ ಅವಳ ಐದು ಜನ ಪತಿಯರ ವಿಚಾವಾಗಿ ಗೊಂದಲ ಹಾಗು ಕೆಲವೊಂದು ಕೊಳಕು ಮನಸ್ಥಿತಿಯ ಜನರಿಗೆ ಈ ಐದು ಜನ ಪತಿಯರು ಅನ್ನುವ ವಿಚಾರ ಟೀಕಾಸ್ತ್ರ. ಇತ್ತ ಕಡೆ ಟೀಕೆಗಳನ್ನು ಒಪ್ಪಿಕೊಳ್ಳುವುದು ಅಲ್ಲ ಹಾಗೆಯೆ ವಿರೋಧಿಸುವುದಕ್ಕೆ ವಿಷಯವು ತಿಳಿದಿಲ್ಲ ಅನ್ನುವ ಪರಿಸ್ಥಿತಿ ಹಲವರದ್ದು. ಆದರೆ ನೈಜವಾಗಿ ದ್ರೌಪದಿ ಒಂದು ಪಂಚಕನ್ಯಾ ಸಮಾವೇಶಾ ಮಹಿಳೆ. ದ್ರೌಪದಿ ಹಾಗು ಪಾಂಡವರ ಮದುವೆಯ ಸಂದರ್ಭದಲ್ಲಿ ಸಾಕ್ಷಾತ್ ಭಗವದವತಾರವಾದ ವೇದವ್ಯಾಸರು ಆ ಮದುವೆಯನ್ನು ಸಮರ್ಥಿಸಿಕೊಂಡು ಅಶ್ವಿನಿ ದೇವತೆಗಳಿಗೂ ಒಬ್ಬಳೇ ಪತ್ನಿ ಅನ್ನುವ ಪುರಾಣದ ನಿದರ್ಶನ ನೀಡಿ ಸಮಾಜಕ್ಕೆ ಈ ಮದುವೆ ಸ್ವೀಕಾರಾರ್ಹ ಅನ್ನುವ ಸಂದೇಶ ನೀಡಿದ್ದರು.

ಸಾಮಾನ್ಯವಾಗಿ ಸೃಷ್ಟಿಯಲ್ಲಿ ಒಂದು ದೇಹಕ್ಕೆ ಒಂದೇ ಜೀವ ಎನ್ನುವ ನಿಯಮಾವಳಿ ಏನು ಇಲ್ಲ. ಪರಕಾಯ ಪ್ರವೇಶ ವಿದ್ಯೆ ಎನ್ನುವುದು ಇದಕ್ಕೆ ಪುಷ್ಟಿ ನೀಡುವ ವಿಚಾರ. ಒಂದು ದೇಹದಲ್ಲಿ ಒಂದಕ್ಕಿಂತ ಹೆಚ್ಚು ಜೀವ ಇರಬಹುದು ಆದರೆ ಅವೆಲ್ಲವೂ ಒಮ್ಮೆಲೇ ಸಕ್ರಿಯವಾಗಿ ಇರುವುದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದನ್ನ 'ಮಲ್ಟಿಪಲ್ ಮೆಂಟಲ್ ಡಿಸ್ಆರ್ಡರ್' ಅಂತ ಕರೆಯುತ್ತಾರೆ. ಅನ್ನಿಯನ್ ಚಿತ್ರ ನೋಡಿದವರಿಗೆ ಇದರ ಕಲ್ಪನೆ ಇರಬಹುದು. ಅವರ ದೇಹ ಆಯಾ ಜೀವದ ಭಾವಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ. ಉದಾಹರಣೆಗೆ ದೇವರು ಅಥವಾ ದೈವ ಆವೇಶಗೊಂಡ ವ್ಯಕ್ತಿ ಒಮ್ಮೆಗೆ ನಾಲ್ಕು ಚೊಂಬು ನೀರು ಕುಡಿಯಬಲ್ಲ. ಅಥವಾ ಹಸಿ ಮಾಂಸ ತಿನ್ನಬಲ್ಲ. ಆವೇಶ ಇಳಿದ ಮೇಲೆ ಇದಾವುದೂ ಸಾಧ್ಯವಿಲ್ಲ ಹಾಗು ಅವನ ನಡವಳಿಕೆ ಆವೇಶದ ಸಂದರ್ಭದಲ್ಲಿ ಹೇಗೆ ಇತ್ತು ಅನ್ನುವ ಕಲ್ಪನೆ ಅವನಿಗಿರುವುದಿಲ್ಲ.

ವ್ಯಾಸಭಾರತ ಹಾಗು ಪುರಾಣಗಳ ತಾಳೆಯಲ್ಲಿ ಸಿಗುವ ಪ್ರಕಾರ ದ್ರೌಪದಿಯು ಪಂಚ ಕನ್ಯಾ ಸಮಾವೇಶ ಮಹಿಳೆ. ಅವಳ ದೇಹದಲ್ಲಿ ಐದು ಜೀವಗಳು ಇದ್ದವು ಎನ್ನುವುದು ಕಂಡುಬರುತ್ತದೆ. ಶ್ಯಾಮಲಾ, ಭಾರತೀ, ಶಚೀದೇವಿ, ಉಷಾ ಹಾಗು ಬ್ರಹ್ಮಚಾರಿಣಿ. ಈ ಐದು ಜೀವಗಳು ಸೇರಿ ದ್ರೌಪದಿ ಪಂಚಕನ್ಯಾ ಸಮಾವೇಶ ಮಹಿಳೆ.  ಈ ಕಾರಣದಿಂದಾಗಿ ವಿವಾಹಪೂರ್ವದಲ್ಲಿ ಬ್ರಹ್ಮಚಾರಿಣಿಯಾಗಿದ್ದ ದ್ರೌಪದಿಯು ಯಮಧರ್ಮನ ಪತ್ನಿ ಶ್ಯಾಮಲೆಯಾಗಿ ಯುಧಿಷ್ಠಿರನ ಜೊತೆ (ಯುಧಿಷ್ಠಿರ ಯಮಧರ್ಮನ ಅಂಶ) , ವಾಯುದೇವನ ಪತ್ನಿ ಭಾರತಿಯಾಗಿ ಭೀಮನ ಜೊತೆ (ಭೀಮ ವಾಯುದೇವನ ಅಂಶ) , ಇಂದ್ರನ ಪತ್ನಿ ಶಚೀದೇವಿಯಾಗಿ ಅರ್ಜುನನ ಜೊತೆ (ಅರ್ಜುನ ಇಂದ್ರನ ಅಂಶ) , ಅಶ್ವಿನಿ ದೇವತೆಗಳ ಮಡದಿ ಉಷೆಯಾಗಿ ನಕುಲ ಸಹದೇವರ(ನಕುಲ ಸಹದೇವರು ಅಶ್ವಿನಿ ದೇವತೆಗಳ ಅಂಶ) ಜೊತೆ ಧರ್ಮದ ಪ್ರಕಾರ ವಿವಾಹವಾಗುತ್ತಾಳೆ. ತಪ್ಪೇನಿದೆ ಇಲ್ಲಿ? ಇದೆ ಕಾರಣಕ್ಕಾಗಿ ಇರಬಹುದು ಸ್ವಯಂವರ ಸಂದರ್ಭದಲ್ಲಿ ಕರ್ಣನಿಗೆ "ನಾಹಂ ವಿವಾಹಯಾಮಿ ಸೂತಃ"ಎಂದು ಹೇಳಿದ್ದು. ಇಲ್ಲಿ ಸೂತಃ ಅನ್ನುವ ಪದ ಪ್ರಯೋಗ ಕೂಡ ಹಲವರಿಗೆ ಗೊಂದಲ ಉಂಟು ಮಾಡುತ್ತದೆ. ಸೂತಃ ಅಂದರೆ ಅದು ಸೂತಪುತ್ರ ಎಂದು ಭಾವಿಸುವುದು ನಮ್ಮ ತಪ್ಪು. ಕರ್ಣ ಸೂರ್ಯಜಾತ ಹಾಗಾಗಿ ಅವನು ಸೂತ. ಇದೆ ಉದಾಹರಣೆ ರಾಮಾಯಣದಲ್ಲಿಯೂ ಇದೆ. ಸೀತೆ ಜನಕ ವಂಶದ ರಾಜ ಸೀರಧ್ವಜನ ಮಗಳು. ಸೀರ ಜಾತೆ, ಹಾಗಾಗಿ ಸೀತೆ. ಜನಕವಂಶದ ರಾಜಕುಮಾರಿ ಅದರಿಂದ ಜಾನಕೀ. ಹೀಗೆ ದ್ರೌಪದಿ ಸೂತಃ ಅನ್ನುವುದರ ಹಿನ್ನೆಲೆ ಅವಳಿಗೆ ಗೊತ್ತಿತ್ತು. ಅವಳ ದೇಹದಲ್ಲಿ ಸೂರ್ಯದೇವನ ಪತ್ನಿ ಸಂಜ್ಞೆಯ ಜೀವ ಇರಲಿಲ್ಲವೆಂದು. ಹಾಗಾಗಿ ನಾನು ಸೂರ್ಯಪುತ್ರನನ್ನು ವಿವಾಹ ಆಗಲಾರೆ ಎಂದಳು. ಇಲ್ಲಿ ಸೂರ್ಯ ಪುತ್ರ ಅಂದರೆ ಸೂರ್ಯನ ಅಂಶ ಎಂದು ಅರ್ಥ.

ಭಗವದ್ಗೀತೆಯಲ್ಲಿ ಕೃಷ್ಣ ಹೇಳುವಂತೆ ಇಷ್ಟೆಲ್ಲ ಗೊಂದಲಗಳನ್ನು "ಜ್ಞಾನ ಚಾಕ್ಷುಷ"  ಅಂದರೆ ಜ್ಞಾನದ ಒಳಗಣ್ಣನ್ನು ತೆರೆದು ನೋಡಿದರೆ ಸತ್ಯ ಗೊತ್ತಾಗುತ್ತದೆ. ಛಂದೋಗ್ಯ ಉಪನಿಷತ್ತಿನ ಮಾತಿನಂತೆ
ಯದೇವ ವಿದ್ಯಯಾ ಕರೋತಿ ಶ್ರದ್ಧಯಾ ಉಪನಿಷದಾ |
ತದೇವ ವೀರ್ಯವತ್ತರಂ ಭವತಿ ||
ಯಾವುದೇ ವಿಷಯವನ್ನು ಶ್ರದ್ದೆಯಿಂದ ಪೂರ್ತಿಯಾಗಿ ತಿಳಿದುಕೊಳ್ಳಬೇಕು, ಅವಾಗ ಅಲ್ಲಿ ಸಂಶಯಗಳಿರುವುದಿಲ್ಲ. ಎಲ್ಲವೂ ನಿಶ್ಚಯಗಳೇ ಆಗಿರುತ್ತವೆ




No comments:

Post a Comment