Thursday, July 04, 2024

*Worship of clay Bulls. ಮಣ್ಣೆತ್ತಿನ ಅಮಾವಾಸ್ಯೆ

                 ಮಣ್ಣೆತ್ತಿನ ಅಮಾವಾಸ್ಯೆ

       ಭಾರತ ದೇಶ ಹಬ್ಬ ಹರಿದಿನಗಳ ನಾಡು ಇಲ್ಲಿ ಸಂಸ್ಕೃತಿ ಸಂಸ್ಕಾರಗಳ ಸಂಪ್ರದಾಯಗಳ ನೆಲೆಯಲ್ಲಿ ನಾವೆಲ್ಲ ಕಲ್ಲು ಮಣ್ಣಿನಲ್ಲಿ ಪ್ರಕೃತಿಯಲ್ಲಿ ದೈವತ್ವವನ್ನು ಕಾಣುತ್ತೇವೆ ಹಬ್ಬಗಳನ್ನು ರೂಪಿಸಿ ಆಚರಿಸುತ್ತೇವೆ ಹಾಗೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯವಿದೆ ಅದೇ ಮುಂಗಾರು ಆರಂಭದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ  ಕಾರ ಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆ ಕೇವಲ ಒಂದು ಅಮಾವಾಸ್ಯೆ ಅಲ್ಲ ಅದೊಂದು ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ, ಸಂಭ್ರಮ ಪಡುವ ಹಬ್ಬ ಒಕ್ಕಲು ಮಕ್ಕಳಿಗೆ ವರ್ಷ ಆರಂಭದಿಂದ ಒಟ್ಟು ಐದು ಬಾರಿ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ ಆಷಾಢ ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಮಣ್ಣಿನ ಪೂಜೆ ಮಾಡಲಾಗುತ್ತದೆ ಈ ಐದು ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಜನರು ಪೂಜಿಸುತ್ತಾರೆ ಕೃಷಿಕರ ಒಡನಾಡಿ ಆಗಿರುವ ದನ ಕುರುಗಳನ್ನು ಕಾರಹುಣ್ಣಿಮೆಯಲ್ಲಿ ವಿಶೇಷವಾಗಿ ಬಣ್ಣಹಚ್ಚಿ ಸಿಂಗಾರ ಮಾಡಿ ಹೋಳಿಗೆ ಕಡಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಭ್ರಮ ಹೇಳತಿರದು ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತಿನ ಪ್ರತಿ ಕೃತಿಗಳನ್ನು ತಯಾರಿಸುತ್ತಾರೆ ಇಲ್ಲವೇ ಕುಂಬಾರರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಜೋಳ ಕಾಳು ಹಣಕೊಟ್ಟು ತರುತ್ತಾರೆ. ಬಣ್ಣದ ಬ್ಯಾಂಗಡಿ ಚೂರು ಬಣ್ಣದಲ್ಲಿ ತೋರಿಸಿದ ಜೋಳ ಕುಸಬಿ ಕಾಳುಗಳಿಂದ ಎತ್ತುಗಳಿಗೆ ಕೊಂಬೆಣಸು ಏಣಿಕವಚ ಝೂಲು ತೋಡೆ ಗಂಟೆಸರ ಮಾಡಿ ಸಿಂಗರಿಸುತ್ತಾರೆ  ಸಿಂಗರಿಸಿದ ಮಣ್ಣೆತ್ತುಗಳನ್ನು ದೇವರ ಜಗಲಿಯ ಮೇಲೆ ಇಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆ ಹೆಣ್ಣು ಮಕ್ಕಳು ಹೋಳಿಗೆ ಕಡುಬು ಮುಂತಾದ ಸವಿ ಅಡಿಗೆ ಸಿದ್ಧಮಾಡುತ್ತಾರೆ ಮನೆಯಲ್ಲಿಯ ದನಕರುಗಳನ್ನು ಮೈ ತೊಳೆದು ಮೇವು ನೆನೆದ ಗೋಧಿ ಬಾಳೆಹಣ್ಣು ಇತ್ಯಾದಿ ತಿಂಡಿ ತಿನಿಸಿ ಪೂಜೆಗಾಗಿ ಸಿಂಗರಿಸುತ್ತಾರೆ  ಮಣ್ಣೆತ್ತುಗಳಿಗೆ ಕಾಯಿ ಕರ್ಪೂರ ಊದುಬತ್ತಿ ಲೋಭಾನ ಹಾಕಿ ನೈವೇದ್ಯ ತೋರಿಸುತ್ತಾರೆ ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುವುದು ಒಂದು ವಾಡಿಕೆ ಹೊಸ ಬಟ್ಟೆ ತೊಟ್ಟು ಊರಲ್ಲಿಯ ದೇವರುಗಳಿಗೆ ಕಾಯಿ ಕರ್ಪೂರದೊಂದಿಗೆ ಹೋಗಿ ಎಡೆ ಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ ಸಂಜೆಗೆ ಹೆಣ್ಣು ಮಕ್ಕಳು ಮನೆ ಮನೆಗೆ ತೆರಳಿ ಪೂಜಿಪ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ          ಮರುದಿನ ಮಕ್ಕಳು ಮಣ್ಣಿನ ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದನ್ನು ತಟ್ಟೆಯಲ್ಲಿ ಇಟ್ಟುಕೊಂಡು ಮನೆ ಮನೆಗೆ ಹೋಗಿ ತೆರಳಿ ಎಂಟೆತ್ತಿನ್ಯಾಗ ಒಂದು ಕುಂಟೆತ್ತ ಬಂದೈತೆ ಜ್ವಾಲಾ ನೀಡ್ರೇ ಯವ್ವಾ. ಎನ್ನುತ್ತಾ ತಿರುಗುತ್ತಾರೆ ಮನೆಯವರು ಜೋಳ ಸೆಜ್ಜೆ ಅಕ್ಕಿ ಹಣ ನೀಡಿ ಕಳಿಸುತ್ತಾರೆ  ಸಂಗ್ರಹಿಸಿದ ದವಸ ಧಾನ್ಯಗಳನ್ನು ಊರ ಅಂಗಡಿಗೆಹಾಕಿ ಪಂಚಫಳಾರ ಊದುಬತ್ತಿ ಕುಂಕುಮ ವಿಭೂತಿ ತೆಂಗಿನ ಕಾಯಿ ಬೆಲ್ಲ ಚುರುಮುರಿ ಖರೀದಿಸುತ್ತಾರೆ ಎತ್ತುಗಳನ್ನು ತೆಗೆದುಕೊಂಡು ಹೊಳೆ ಕೆರೆ ಹಳ್ಳದ ದಂಡೆಗೆ ಹೋಗಿ ಎಲ್ಲಾ ಮಣ್ಣೆತ್ತುಗಳಿಗೆ ಮುಖ ತೊಳೆದು ವಿಭೂತಿ ಕುಂಕುಮ ಹಚ್ಚಿ ಕರಿಕೆ ಪತ್ರಿಯನ್ನು ಏರಿಸಿ ಊದುಬತ್ತಿ ಬೆಳಗೆ ಪಂಚಫಳಾರ ಹಾಕಿ ಕಾಯಿ ಒಡೆದು ಊರ ಸಮೃದ್ಧಿಗೆ ಬೇಡಿಕೊಂಡು ಮಣ್ಣೆತ್ತುಗಳನ್ನು ಹೊಳೆಯಲ್ಲೇ ವಿಸರ್ಜಿಸುತ್ತಾರೆ ಭೂತಾಯಿಗೆ ರೈತಾಪಿ ಜನ ಮಳೆ ಬೆಳೆ ಚೆನ್ನಾಗಿ ಆಗಲೆಂದು ಕೃಷಿಯ ವರ್ಷ ಆರಂಭದಲ್ಲಿ ಬೇಡಿಕೊಳ್ಳುವ ಹಬ್ಬ  ಬಸವನನ್ನು ಆ ಅರಳೇ ಎಲೆಯ ಮಂಟಪದಲ್ಲಿ ಸಿಂಗಾರ ಮಾಡಿ ಊರ ಮಠದಲ್ಲಿಟ್ಟು ಪೂಜೆ ಹಾಡು ಹೇಳುವ ಪರಿಪಾಠವೂಇದೆ. ಒಟ್ಟಿನಲ್ಲಿ ಈ ಹಬ್ಬದ ಮೂಲ ಆಶಯವೇ ಮಳೆ  ಚೆನ್ನಾಗಿ ಆಗಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಲಿ ಎಂದು, ಯಾಂತ್ರಿಕ ಬದುಕಿನ ಈಗಿನ ಪೀಳಿಗೆಯ ಮಕ್ಕಳಿಗೆ ಹಬ್ಬದ ಪರಿಕಲ್ಪನೆ ತಿಳಿಸುವುದು ಅವಶ್ಯಕ.

ಶ್ರೀ ಮೃಣ್ಮಯ ವೃಷಭ ಪೂಜಾ ವಿಧಿ  ( ಮಣ್ಣೆತ್ತಿನ ಅಮಾವಾಸ್ಯಾ )   

ಆಚಮ್ಯ ಪ್ರಾಣಾನಾಯಮ್ಯ,... ದೇಶಕಾಲೌ ಸಂಕೀರ್ತ್ಯ ... ಮಮ ಸಹ ಕುಟುಂಬಸ್ಯ ಸಹಪರಿವಾರಸ್ಯ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧಿ ಪೂರ್ವಕ ಸಮಸ್ತ ಮಂಗಲಾ ಪ್ರಾಪ್ತ್ಯರ್ಥಂ ಜ್ಯೇಷ್ಠ ಅಮಾವಾಸ್ಯಾಯಾಂ ಪ್ರತಿ ವಾರ್ಷಿಕ ಕುಲಾಚಾರಂಗತ್ವೇನ ವಿಹಿತಂ, ಸಸ್ಯಾಭಿವೃದ್ಧ್ಯರ್ಥಂ, ಕ್ರಿಮಿಕೀಟ ಬಾಧಾ ವಿನಾಶಾರ್ಥಂ, ಸುವೃಷ್ಟ್ಯಾದಿ ಪ್ರಾಪ್ಯಾ, ಧನ ಧಾನ್ಯ ಸಮೃಧ್ಯರ್ಥಂ..ಶ್ರೀ ಪರಮೇಶ್ವರ ಪ್ರಿತ್ಯರ್ಥಂ.. ಮೃಣ್ಮಯ ವೃಷಭ ಪೂಜನಂ ಚ ಕರಿಷ್ಯೇ ...... ಹೀಗೆ ಸಂಕಲ್ಪ ಮಾಡಿ ಸಂಕ್ಷೇಪದಿಂದ ಪ್ರಾಣ ಪ್ರತಿಷ್ಥೆ ಮಾಡಿ ಕಲಶ ಶಂಖ ಘಂಟಾ ಪೂಜಾದಿಗಳನ್ನು ಮೊದಲೇ ಮುಗಿಸಿಕೊಂಡು ಷೋಡಶೋಪಚಾರ ಪೂಜೆಯನ್ನು ಮಾಡುವುದು.

ನಮ್ಮ ಸನಾತನ ಪರಂಪರೆಯಲ್ಲಿ ಮೃಣ್ಮಯ ದೇವರುಗಳ ಪೂಜೆಗೆ ಮಹತ್ವ ನೀಡಲಾಗಿದೆ  ಎತ್ತು, ಆಕಳು, ಕರ, ಹಾವು, ಇಲಿ, ಪರ್ವತಗಳು ಇತ್ಯಾದಿ ಮತ್ತು ಗಣಪತಿ, ರುದ್ರ, ಗೌರಿ, ಕೃಷ್ಣ ಬಲರಾಮ, ಪಾಂಡವರು ಇತ್ಯಾದಿ ಕೆಲ ದೇವರುಗಳು ಭೂಮಿಗೆ, ಮಣ್ಣಿಗೆ ಕೃಷಿಗೆ ಸಂಬಂಧಪಟ್ಟ ಸಸ್ಯ, ಗಿಡ, ಮರಗಳಲ್ಲಿರುವ ಆರಾಧ್ಯ ದೈವಗಳನ್ನು ಆರಾಧಿಸುತ್ತಿದ್ದರೆ, ಪ್ರಾಮಾಣಿಕವಾಗಿ ಪೋಷಿಸುತ್ತಿದ್ದರೆ, ಆದರ ತೋರಿಸುತ್ತಲಿದ್ದರೆ  ನಮಗೆಲ್ಲರಿಗೂ ಬೇಕಾದ ಮಳೆ, ಧಾನ್ಯ, ಧನ, ಐಶ್ವರ್ಯ,ನೆಮ್ಮದಿ ಸಿಗುವುದು ಖಂಡಿತ. ನಮ್ಮ ಕಣ್ಣಿಗೆ ಕಾಣುವ ಇದು ಪೃಥ್ವಿ,ಚಂದ್ರ, ಸೂರ್ಯ, ಆಕಾಶ, ಬೆಂಕಿ,ಗಾಳಿ,ನೀರು ಹೇಗೆ ಸತ್ಯವೋ ಅಷ್ಟೇ ಸತ್ಯ. ಇಷ್ಟೇ ಅಲ್ಲ ನಮ್ಮ ಸನಾತನ ಪರಂಪರೆಯಲ್ಲಿ ಆಚರಿಸುವ 12 ಹುಣ್ಣಿಮೆ, 12 ಅಮಾವಾಸ್ಯ ಗಳು ಸಹಿತ ಭೂಮಿಗೆ, ಮಣ್ಣಿಗೆ, ಕೃಷಿಕ್ಷೇತ್ರಕ್ಕೆ  ಸಂಬಂಧಪಟ್ಟ ಆರಾಧ್ಯ ದೈವಗಳನ್ನು ಆರಾಧಿಸುತ್ತಿದ್ದೇವೆ.   

     ನಮ್ಮ ಸಂಸ್ಕೃತಿಯಲ್ಲಿ ಹೀಗೂ ಕೃತಜ್ಞತೆಯನ್ನು ವ್ಯಕ್ತ ಪಡಿಸುವ ಪರಿಪಾಠವಿದೆ .....ನಾವಿರುವ ಪೃಥ್ವಿ, ನಮ್ಮ ಪೃಥ್ವಿ, ನಮ್ಮ ವಸುಂಧರೆ, ನಮ್ಮ ಕ್ಷೇತ್ರವನ್ನು ತನ್ನ ಕೋರ ದಾಢೆಗಳಲ್ಲಿ ಸುರಕ್ಷಿತವಾಗಿ ಮೇಲೆ ಹೊತ್ತುತಂದ ಯಜ್ಞ ವರಾಹ ದೇವರನ್ನೂ ನಮ್ಮಲ್ಲಿ ಪೂಜಿಸುವ, ಕೃತಜ್ಞತೆಯನ್ನು ವ್ಯಕ್ತ ಪಡಿಸುವ ನಿಯಮಗಳನ್ನು ಅಳವಡಿಸಿಕೊಂಡಿದ್ದೇವೆ. ಮನೆ ಮನೆಗಳಲ್ಲಲ್ಲದಿದ್ದರೂ ಯಜ್ಞ ವರಾಹ ದೇವರ ಮೂರ್ತಿಗಳು, ಮಂದಿರಗಳು ನಮ್ಮ ದೇಶದಲ್ಲಿ ಕಾಣಸಿಗುತ್ತವೆ,

|| ವಸುಧೈವ ಕುಟುಂಬಕಂ ||      

ಧ್ಯಾನ ಶ್ಲೋಕಃ 

ಧರ್ಮಸ್ತ್ವಮ್ ವೃಷಭ ರೂಪೇಣ ಜಗದಾನಂದಕಾರಕ | ಅಷ್ಟಮೂರ್ತೆರಧಿಷ್ಟಾನ ಮತಃ ಪಾಹಿ ಸನಾತನ  ||

ವೇದೋಕ್ತ ಮಾಡುವದಾದಲ್ಲಿ “ ಋಷಭಂಮಾ “ ಎಂಬ ಮಂತ್ರದಿಂದ ಆವಾಹನೆ ಮಾಡಿ ಪುರುಷ ಸೂಕ್ತ, ರುದ್ರಸೂಕ್ತದಿಂದ ಅಭಿಷೇಕ ದಿಂದ ಸಂಪನ್ನ ಮಾಡುವುದು. ಮನೆಯಲ್ಲಿಯ ಎತ್ತು, ಆಕಳುಗಳನ್ನು ಕರುಗಳನ್ನು ಚನ್ನಾಗಿ ತಿಕ್ಕಿ ಸ್ನಾನ ಮಾಡಿಸಬೇಕು ಅವುಗಳಿಗೆ ರಂಗುರಂಗಾಗಿ ಶೋಭಿಸುವಂತೆ ಮಾಡಿ, ಕೋಡುಗಳಿಗೆ ಸಿಂಧೂರ ಹಚ್ಚಿ, ಹೊಟ್ಟೆ ತುಂಬ ಮೇವು ತಿನ್ನಿಸಿ ನೀರನ್ನು ಕುಡಿಸಬೇಕು ಆದಿನ ಆದಷ್ಟು ಕೆಲಸ ತೆಗೆದುಕೊಳ್ಳಬಾರದು. ಸಾಕು ಪ್ರಾಣಿಳಿಗೆ ನಿಸರ್ಗಕ್ಕೆ ಋಣ ತೀರಿಸುವ ಭಾರತದ ವೈದಿಕ ಸನಾತನ  ಧರ್ಮದ ವೈಷಿಷ್ಥ್ಯ ಮತ್ತು ಪರಂಪರೆಯಾಗಿದೆ  

ಶ್ರೀ ಪರಮೇಶ್ವರಾರ್ಪಣಮಸ್ತು           

     

No comments:

Post a Comment