Monday, May 19, 2025

SHANAISHCHARA CHARITAM VIII( 01-81 ) ಶ್ರೀ ಶನೈಶ್ಚರ ಚರಿತಂ ೮

SHANAISHCHARA CHARITAM   VIII (  01-81 )
     
       ಶ್ರೀ ಶನೈಶ್ಚರ ಚರಿತಂ  ೮
               || श्री शनैश्चर देवताभ्यो नमः || 
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತ್ರಿಪದಿಗಳಲ್ಲಿ  )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ  ಶ್ರೀ ಶನೈಶ್ಚರ ಅಷ್ಟಕಂ, ಶ್ರೀ ಶನಿದೇವ ಚಾಲೀಸಾ  ಸಹಿತ )
 ಅಷ್ಟಮ ಸವಿಗಥಾ ಸಂಧಿ 
( ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

ಸತಿಸುತನ ವಂದಿಸುವೆ ನಿನ ಗಣ-
ಪತಿಯೆ ನೀಡು ನಿ ಗ್ರಂಥ ಮುನ್ನಡೆ
ಕಥನ ಮಾಡಲು ಪಡೆವೆ ಪ್ರೇರಣೆ ನಿನ್ನ ದೆಸೆಯಿಂದ  ೧
ಕರ ಮುಗಿವೆ ನಿನ ಪಾದ ಕಮಲದಿ
ಸರಸತಿಯೇ ಪದಗಳ ಮಹತಿ ಕೊಡು 
ವರವ ನೀಡು ನೀ ತಾಯೆ ಆಶೀರ್ವಚನ ಕೇಳುವೆನು ೨
ಪರಮ ಹಂಸನೆ ನಿನ್ನ ಕೃಪೆಯಲಿ 
ಪರಿ ಪರಿಯ ನೀರಕ್ಷೀರ ನ್ಯಾಯವದು 
ಕರ ಮುಗಿವೆ ನಿನ್ನಲಿ ನಿಮ್ಮ ಬೆಂಬಲ ನನ್ನಲಿರಲೆಂದು ೩
ಚತುರ ಸಂಧಿಯ ನೃಪತಿ ವಿಕ್ರಮ 
ನತ ಮಸ್ತಕನಾಗಿ ಮುಂದನ
ಮಿತಿ ಇರಲಿ ಕಾಡುವುದಕ್ಕೆ ತಾ ಮನುಜ ಬಡಪಾಯಿ ೪
ಕೇಳು ಮಾಳವೆ ಅರಸು ಸುರರೊಳು
ಮೇಲು ವಾಚಸ್ಪತಿಯು ಗುರುವರ 
ಆಳು ನಾನಿರೆ ಪೀಡೆನೀಡುವುದೆಂತು ತವಕಿಸಿದೆ. ೫
ಒಂದು ಜಾವದವಳೆದ್ದು ನಾನು 
ಒಂದನೆಯಗಳ ಮಾಡಿ ಕೇಳಿದೆ 
ಕಂದ ನಿಮ್ಮಯ ಕೈ ಮುಗಿದು ಬೇಡುವೆನು ಕಾಡುದಕೆ ೬
ಶ್ರೀ ಗುರುವೇ ನಾ ಬರುವೆ ನಿಮ್ಮಯ 
ಭೋಗರಾಶಿಗೆ  ಏಳೂವರೆ ವರು -
ಷಾಗುವರೆ ಕಾಡುವೆನು ಕೊಡಿ ಅಪ್ಪಣೆಯು ಬೇಗ ೭
ಗುರುಗಳೆಂದರು ಬೇಡ ಬೇಡೈ 
ನರರಿಗುರಿಯಾಗಿರುವೆ ಎಂಬುದ 
ನರಿದಿರುವೆ ಶನಿರಾಯ ಕೃಪೆಯಂ ಗಳಿಗೆಯೂ ಬೇಡ ೮
ನಂತರದಿ ಚಿಂತಿಸುತೆ ನಾಮ್ ವಿ-
ನಂತಿ ಮಾಡಿದೆ ಹಿರಿಯರಾದವ 
ಇಂತು ಜರಿದರೆ ನನಗೆ ಸ್ವಾಗತ ಮಾಡುವವರಾರು  ೯
ನನ್ನ ಹಿರಿಮೆಯೇ ನಿಮ್ಮ ಮೇಲ್ಮೈ 
ಭಿನ್ನವೆನಿಸದೆ ಪೇಳಿವರು ಷ್ಯೈ
ದನ್ನು ಮಾನ್ಯವ ಮಾಡಿ ಎಂದೆನು ನಮ್ರ ಭಾವದಲಿ ೧೦
ಇಲ್ಲದಿದ್ದರೆ ಎರಡುವರೆ ಯೊಳು 
ಸಲ್ಲಿಸಿರಿ ಆಜ್ಞೆಯನು ಅಲ್ಪವು 
ಅಲ್ಲೆನಿಸಿ ಸರಿ ಪೀಡೆ ನಿಮಗಿಂತುಂಟು ಮಾಡುವೆನು ೧೧
ವಿದ್ಯೆಯೊಡೆಯನು ನುಡಿದ ನಡೆಯ್ಯೈ
ತಿದ್ದಿಕೊಳು ನಿನ್ನ ಬುದ್ಧಿ ಎಂದು 
ಶುದ್ಧ ರೂಪವ ತಾಳಿದರು ಕೈ ಮುಗಿದೆ ವಿನಯದಲಿ ೧೨
ದೇವ ಗುರುವರ ರಾಜ ತಾಯಿಯ 
ಭಾವನಿನ್ನೊಳು ಇರಲು ಹಠವನು
ತಾವು ಮನ್ನಿಸಿ ನನ್ನ ಹೆಚ್ಚಳ ಬೆಳಗು ಮಾಡುವುದು ೧೩
ಭಿನ್ನಣೆಯ ಮಾಡುತಲೆ ಗುರು ಪಾ -
ದನ್ನು ಬಿಡದೆಯೆ ಕೇಳುತಿರಲಾ -
ಎನ್ನ ವಿನುತಿಗೆ ಕೃಪೆಯ ತೋರಿರಿ ಏಳುವರೆ ಪ್ರಹರ ೧೪
ಬೇಡವೆನುತಿರೆ ಗುರು ಚರಣವಂ 
ಜೋಡಿ ಬಿಡದಲೆ ಪಿಡಿದೆ ನುತಿಸುತ
ನಾಡ ಜನರು ಎನಗೆ ಏನೆಂದಾರು ಗುರುದೇವ  ೧೫
ಗುರು ಕೃಪೆಯಂ ಹೃದಯ ಕರಗಿಯೆ 
ಇರಲಿ ಒಂದು ಕಾಲು ಪ್ರಹರವು
ಬರುವ ಬಯಸಿದರಿಂತು ತುರುಮುಂಡಿಯನು ತಾಳದಲೇ ೧೬
ಗುರುವಿನಾಜ್ಞೆಯ ಮನ್ನಿಸಿದೆನು 
ಎರಗಿ ನಡೆದೆನು ತಿಳಿಸಿ ವೇಳೆಯ
ಗುರುತಿಸಿದೆ ಗುರು ಗರ್ವವನೆ ಒಂದು ಕಾಲು ಜಾವ ೧೭
ಕೆಲವೇ ವೇಳೆಯೊಳೇನು ಮಾಡುವ ?
ನಿಲುಮೆ ತಿಳಿಯಿತು ಎಂದು ಗುರುವರ 
ಗೆಲುವು ಮುಖದಿಂ ತೋರಿಸಲು ನಿರ್ಧರಿಸಿ ಗ್ರಹಚಳಕ ೧೮ 
ದೇವಗಂಗೆಯೊಳ್ ಮಿಂದು ಸಂಧ್ಯಾ 
ಸೇವೆ ದೇವರ ಪೂಜೆ ಪಾಠವ
ಸೇವಿಸಲು ಮುಗಿಯುವುದು ಎಂದರಿದಿಹನು ಗುರುದೇವ  ೧೯
ಗಡ ಬಡಿಸಿ ನಡೆ ಗುರುಗಳಿಳೆಯೆಡೆ
ಉಡುಗಿ ತೊಡಿಗೆಗಳುಳಿದು ಸಾಧುವು
ಬಡಿಗೆ ಜೋಳಿಗೆ ಧರಿಸಿ ತೆರ ಸನ್ಯಾಸಿ ಹೊರಟಿಹನು ೨೦
ಗಂಗೆ ತಡಿಯೊಳು ಬಂದು ಗುರುವರ 
ಪಿಂಗಳನು ವಿಕ್ರೇತನಾಗಿ ತಾ ಕ-
ಲ್ಲಂಗಡಿಯ ಮಾರುವವನಂತೆದುರುಗೊಂಡಾಗ ೨೧
ಕೊಡಲು ಕಲ್ಲಂಗಡಿಗಳೆರಡನು 
ಪಡೆದು ಹಾಸಲ ನಿತ್ತು ಗುರುವರ 
ಮಡಿಯ ಪಂಜೆಯ ಸುತ್ತಿ ಇರಿಸಿದ ಸ್ನಾನ ಮಾಡುದಕೆ ೨೨
ಸ್ನಾನ ಸಂಧ್ಯಾ ಪೂಜೆ ಪಾಠವು
ಮೌನತೆಯೇ ಆಚರಿಸಿ ಪೊರಟನು 
ತಾನೆ ತಿರುಗಿದ ಜೋಳಿಗೆಯ ಹಾಕಿದನು ಹೆಗಲೊಳಗೆ ೨೩
ಹೊರಟಿರಲು ಎದುರೊಂದು ಪಟ್ಟಣ 
ಅರಸನಿರುವನು ಭರ್ಗುವರ್ಧನ 
ಪರಿಪಾಲಿಪ ಕನೋಜ ದೇಶವೆ ಮಂತ್ರಿ ಮಣಿಮಂತ ೨೪
ಸಚಿವರಾಜಗಿರುವ ಈರ್ವರು
ಉಚಿತ ಪುತ್ರರು ಯುವಾವಸ್ಥೆಯ 
ರುಚಿಯುಇರೆ ಮೃಗಯಾ ವಿಹಾರದ ಕ್ಷಾತ್ರ ವೃತ್ತಿಯಲಿ ೨೫
ತವ ದಿನವೂ ಸಹ ಬೇಟೆಯಾಡಲು 
ಅವರು ಜಾವದಿ ಹೋಗಿರಲು ತಾ
ಜವದಿ ಸಾಗಲು ರಣಗುಡುವ ಮಧ್ಯಾಹ್ನ ವೇಳೆಯದು ೨೬
ದಿನದ ಭೋಜನ ಸಮಯವಿರಲು
ಕನುಜ ಪತಿ ಕಳುಹಿಸಿದ ದೂತರ 
ವನ ವನವ ಹುಡುಕಾಡುತಿರಲಾ ಗಂಗೆತಟ ದಾರಿ ೨೭
ಎದುರು ಬಹ ಸನ್ಯಾಸಿ ಬ್ರಾಹ್ಮಣ 
ಸದಯದಂಡ ಕಮಂಡುಲು ಜಲ 
ಕೆದರುತಲೆ ಮೇಖಲೆಗಳಿಂ ಶೋಭಿಸುತ ಭೂತಿಯನು ೨೮ 
ನಂಬಿಸಿ ವಿನಯದಿ ಕೇಳುತಿರಲಾ 
ತಾಳ ಚಿಂತಿ ೇಗಮಿಸಿ ಬೇಟೆಗೆ ಹೋದ ಯುವಕರು 
ಸುಮತಿ ವರ ಸೇನ ವರ್ಧನರನ್ನು ಕಂಡಿದಿರಾ  ೨೯
ಎಂದೆನಲು ಹೇಳಿದನು ಗುರುವರ 
ಸಂಧ್ಯ ಸ್ನಾನವು ಮಾಡುತಿರೇ ನಾ 
ನೊಂದು ಕಾಣೆನು ದೂತರೇ ಜಯವೆಂದು ಸಾರಿದನು ೩೦
ಮುಂದೆ ಸಾಗಿಹ ದೂತರಿಗೆ ಮ-
ತ್ತೊಂದು  ಚಿಹ್ನವು ರಕ್ತ ಧಾರೆಯ 
ಬಿಂದುಗಳ ಕಂಡಿಹವು ಭೂಮಿಯ ಮೇಲೆ ಸರಿಯಾಗಿ ೩೧
ಹೊರಳಿ ಗುರುವರನೆಡೆಗೆ ನೋಡಲು
ಕೊರಳ ಜೋಳಿಗೆಯೊಳಗೆ ತಲೆಗಳು
ತೆರದಿ ಕಂಡಿತು ನೆತ್ತರವು ಒತ್ತರಿಸಿ ಬರುವುದನೆ ೩೨
ಜೋಳಿಗೆ ಯೋಳೇನು ಇರುವುದು ?
ಹೇಳು ಎಂದೆನೆ ದೂತರೀರ್ವರು
ನಾಳಿನಾ ಫಲಹಾರ ಕಲ್ಲಂಗಡಿಗಳೆರಡಿಹವೂ ೩೩
ಕಪಟ ನಾಟ್ಯವ ಹೂಡಿದನು ಶನಿ 
ವಿಪರೀತವೆನೇ ದೂತರುಗಳವರು
ಶಪಿಸಿ ನುಡಿದರು ಪಾರ್ವನೀನಲ್ಲೇಳು ಶೂದ್ರಕನು ೩೪
ಪುತ್ರರೀರ್ವರ ತಲೆಗಳಡಗಿಸಿ
ಚಿತ್ರ ವಧೆ ಮಾಡಿರುವೆ ಜೋಳಿಗೆ 
ಯತ್ತ ನೋಡೆಲೋ ವೇಷಡಂಭಕ ನರರ ಭಕ್ಷಕನೇ ೩೫
ದೂತರೆಂದಾ ಮಾತು ಕೇಳ್ವೆಡೆ 
ನೇತ ಜೋಳಿಗೆಯೊಳಗೆ ನೋಡಲು 
ಪ್ರೇತ ತಲೆಗಳು ಹರೆಯ ಮಕ್ಕಳದಾಗಿ ಕಂಡಿರಲು ೩೬
ಗದಗದನೆ ನಡುಗಿದನು ವಿಪ್ರರು
ಸದನೆ ಜೋಳಿಗೆಯದನೆ ಸೆಳೆದರು 
ವಿಧಿಸಿ ಬಂಧನ ಮಾಡಿ ತಂದರು ರಾಯನೆದುರಿನಲಿ ೩೭
ರಾಯನೆದುರೋಳ್ ನಿಲಿಸಿ ಎಲ್ಲವು
ಮಾಯೆಯಿಂದ ಪೇಳಿದರು ದೂತರು
ಹಾಯ್ ! ಈತನೆ ಪುತ್ರ ಹತ್ಯಕ ಕಾಲ ವಿಪ್ರನಿವ ೩೮
ಮಂತ್ರಿ ರಾಜರು ವಿಷಯ ತಿಳಿದೊಡೆ
ಮಂತ್ರ ಮುಗ್ಧದಿ ನೋಡೆ ರುಂಡವ
ತಂತ್ರಿಕನೇ ನೀನೇನು ಮಾಡಿದೆ ಓರ್ವ ಪುತ್ರರಿರೇ ೩೯
ದೂತ ಹೇಳಿದ ಮಾತನಾಲಿಸಿ 
ಪ್ರೇತ ಪರಿ ಮೂರ್ಛೆಯಲಿ ರಾಜನು
ನೂತನದ ಸೊಸೆಯಾಗಿ ಪರಿವಾರವದು ದುಃಖದಲಿ ೪೦
ಅರಸು ಮೂರ್ಛೆಯ ತಳೆದು ಬೀಳಲು
ವರಿಸಿ ಬಂದಿಹ ಸೊಸೆಯರಳುತಲೇ
ವಿರಸ ಪರಿವಾರದಲಿ ಎಲ್ಲವು ದುಃಖಮಯವಾಗಿ ೪೧
ಹೀನ ರಕ್ಕಸ ಮಗುವ ನುಂಗಿದ 
ದೀನರಾದೆವು ಇರುವ ಓರ್ವನ
ಏನು ಸೌಭಾಗ್ಯವನುಕಂಡೆವು ! ಹೊಡೆಯಿರೀ ನರನ ೪೨
ಇರುವ ಸುತ ಓರ್ವನೊಳು ಐಸಿರಿ
ವಿರಹ ಕಂಡೆವು ದುಃಖ ದ್ವಿಜನಿಂ
ತೆರೆದು ಶೂಲವನಿಕ್ಕಿರೈ ರಾಜಾಜ್ಞೆ ಕ್ರೋಧದಲಿ ೪೩
ಪ್ರತಿಯ ವರದಿ ಗಲ್ಲಿಗೇರಿಸಿ
ಪ್ರತಿಯ ಕೃತಿ ನಡೆಯ ಬೇಕೆಂದು
ಪ್ರತಿರೂಪ ವಿಷ ಸರ್ಪದಂತಿರೆ ಅರಸು ಆಣಿಸಿದ ೪೪
ಕ್ರೋಧಮಾಗಿಹ ಸಪರಿವಾರವು
ರಾದ್ಧಾಂತ ನಡೆಯಿತು ಮಂತ್ರಿ ಮನೆಯೊಳು 
ತಿದ್ದಿನವು ಬಹು ಕಷ್ಟವೆನಿಸಿತು ಪುರದ ಜನರೊಳಗೂ ೪೫
ಪತಿವ್ರತೆಯರು ಧರ್ಮ ಪರಿಪಾ -
ಲತಿಯ ಶೀಘ್ರದಿ ಗೈಯಲನುವಿರೆ
ಅತಿಶಯದ ಅಳು ರಾಯ ಮಣಿಮಂತರರ ಸದನದಲೀ ೪೬
ಇತ್ತಕಡೆ ಚಂಡಲರು ಗುರುವಿನ 
ಕತ್ತುಹಿಡಿದೆತ್ತುತಲೆ ಮೆರೆಸುತ
ಒತ್ತಿ ತಂದರು ಊರ ಹೊರಬದಿ ಗಲ್ಲಿನಡಿಯಲ್ಲಿ ೪೭
ಗುರುವಿಗಾವದು ತಿಳಿಯದಾಯಿತು 
ಹರವಿ ಕೈಗಳ ಅಂಗಲಾಚಿದ
ಎರಡು ಗಳಿಗೆಗಳಳಿದು ಶಿಕ್ಷೆಯ ಕೊಡಿರಿ ತಡೆ ತಡೆದು ೪೮
ಕೊಡುವೆ ನಾಣ್ಯವು ಪತ್ತುಸಾಶಿರ
ಬಿಡಿರಿ ಮುಂದಾಗುವುದು ನೋಡಿರಿ
ಇಡಿರಿ ಕರುಣೆಯ ಎಂದು ಹರಣವುಹಾರಿ ಕೇಳುತಲೇ ೪೯
ಎರಡು ಗಳಿಗೆಗಳೇನು ಶುಭವೋ ?
ಮರಣ ತಪ್ಪದು ಎಷ್ಟುಆದರೂ
ಇರುಹು ಚಾಂಡಲ ಕರುಣೆ ಪಾತ್ರನು ದೇವ ಗುರುರಾಜ ೫೦
ವ್ಯಾಜ್ಯದೊಳು ಕಳೆ ಎರಡು ಗಳಿಗೆಯು
ವಾಜಿ ಏರಿದ ಯುವಕರೀರ್ವರು
ರಾಜನರಮನೆ ಎಡೆಗೆ ಬಂದರು ಬೇಟೆ ದಣಿವಾಗಿ ೫೧
ಕಾಲಖಂಡವು ಜಾವ ಒಂದೂ
ಕಾಲ ಕಳೆಯೇ ಕುವರರೂಬರೆ
ಆಲಯದಿ ಆನಂದವಾಯಿತು ದಾರಿದ್ರ್ಯವನೆ ಅಳಿದು ೫೨
ಸೇವಕರ ಕರೆದರಸ ಹೇಳಿದೋಯುವಂದದಿ 
ಆವಿಪ್ರನಿಂಗೇ ಶೂಲ ಬೇಡಿಂ-
ಆವ ಕಾರಣವಿಲ್ಲ ತಿಳಿಹಿರಿ ತೀವ್ರ ಕರೆತನ್ನಿ ೫೩
ರಾಯ ಮನೆಗೈತಂದು ಗುರುವಿನ
ನೋಯುವಂದದಿ ಮಾಡಿದುಕೆ ಕ್ಷಮೆ
ನ್ಯಾಯ ತಪ್ಪಿದೆನೆಂದು ಅರಸನು ಚರಣ ಮೇಲೊರಗಿ ೫೩
ತಾವಾರು ಮಹಾಯತಿಗಳಿಂ ಗುಂ-
ಟಾವುದದು ದುಗುಡಿಹುದು ಪೇಳಿರಿ 
ನಾವು ತಪ್ಪಿದೆ ತಿಳಿಹಿರೀ ತಾ ಎಂದ ವರ್ಧನನು ೫೪
ಗುರುಗಳಿಂ ವೃತ್ತಾಂತವರಿದೊಡೆ
ಎರಗಿದನು ಸಹ ರಾಜ ಸಂಕುಲ
ಹರಸಿದನು ದೀರ್ಘಾಯುವಾಗಿರಲೆಂದು ಸುರಗುರುವು ೫೫
ನೃಪತಿ ಕಂಠವು ತುಂಬಿ ಕಂಗಳು 
ತಪಿಸುತಿರೆ ತಾ ತನ್ನ ಗೈಮೆಗೆ
ವಿಪರಿತದ ಅವಿಚಾರತನ ಅನಿವಾರ್ಯವಾಗಿಹುದು  ೫೬
ಗುರುದೇವ ನಿನ್ನೊಳಗೆ ನಂಬಿದ
ಕಿರಿಯರಪರಾಧವನು ಕ್ಷಮಿಸಿರಿ 
ಪರವಶನು ಸಂಸಾರಿ ಧಿಕ್ ಧಿಕ್ಕಾರವೆನ್ನ ನಡೆ. ೫೭
ಅವಿಚಾರ ಅನಿವಾರ್ಯವಾಯಿತು 
ಕವಿದ ಅಜ್ಞಾನವದು ಹರಿಯಿತು
ಭವಿಯನುದ್ಧರಿಪುದಕೆ ಬಂದೆಯೆ ಎನ್ನ ಮಂದಿರಕೆ ೫೮
ಅಳುತ ಪಶ್ಚಾತ್ತಾಪ ತೋರುತ
ಇಳೆಯೊಡೆಯ ಸಿಂಹಾಸನಂ ಕೊಡೆ
ಬಳುವಳಿಯನಿಕ್ಕುತಲೆ ಮಧುಪರ್ಕವನು ಮಾಡಿ. ೫೯
ಸಂತೋಷದಿಂ ಗುರುವು ಅರಸಗೆ 
ಸಂತೈಸುತಲೆ ಹೇ ಕೇಳು ಭೂಪತಿ 
ಅಂತಕನುಜನ ನ್ಯಾಯವದು ಅನ್ಯಾಯವೇನಿಲ್ಲೀ. ೬೦
ಜೋಳಿಗೆಯ ತರಿಸಿದರು ಅದರೋಳ್
ಗೋಳ ಶಿರ ರತ್ನಗಳು ಅದೃಶ
ತಾಳಿ ಕಲ್ಲಂಗಡಿಗಳಾಗಿವೆ ಪಿಂಗಳನ ಲೀಲೆ. ೬೧
ಮಹಿಮೆ ಕೊಂಡಾಡಿದರು ಎಲ್ಲರೂ 
ಮಹತಿ ಗುರುವೋಳು ವಿನಯ ತೋರುತ 
ಬಹುವಿಧದ ಪಕ್ವಾನ್ನ ಷಡ್ರಸ ಪಾಯಸವ ಗೈದು ೬೨
ಭೋಜನಕೆ ಪುರ ಭೂಸುರರ ಕರೆ 
ರಾಜಮಂದಿರ ವೇದಘೋಷದಿ 
ಓಜಿಸಿತು ಭೋಜನವ ನಡೆ ಗುರುರಾಯನಾತಿಥ್ಯ ೬೩
ಮುತ್ತು ರತ್ನಾಭರಣ ವಸ್ತು ಗ-
ಳಿತ್ತು ಸಂಭಾವನೆಯು ಪೂರ್ಣದಿ 
ಮತ್ತೆ ಆಶೀರ್ವಚನ ಪಡೆದನು ಭರ್ಗುವರ್ಧನನು ೬೪
ಬಹು ದುರಾಕೋಪವನು ನೀಗಿ 
ಬಹಳ ಜನಪ್ರಿಯ ನೆನೆಸಿ ಗುರುವು 
ಮಹಿತಳವ ಬಿಡೆ ಅಮರ ಲೋಕಕೆ ಪಯಣ ಬೆಳೆಸಿದನು  ೬೫
ಅಮರ ಲೋಕದ ಸ್ವರ್ಣ ಪೂರ್ಣ 
ಶ್ರಮದ ಶ್ರಮದಿಂ ಮ್ಲಾನ ಮುಖದಿಂ
ಗಮಿತ ಘಟನೆಯ ನೆನೆಸಿ ಕುಳಿತೀರೆ ಬಂದ ಶನಿರಾಯ ೬೬ 
ನಗುತ ಸಾಷ್ಟಾಂಗವನು ಬಾಗಿಯೇ 
ಬಗೆಯ ಪೀಡೆಯಿದೆಂತು ಅನಿಸಿತು 
ಸೊಗಸು ಕತೆಯದು ಒಂದು ಕಾಲು ಜಾವ ಮಹತಿಯನು. ೬೭
ವಿದ್ಯೆದೊಡೆಯನು ಇಂತೂ ನುಡಿದನು 
ಅದ್ದೂರಿಯು ಹೆಚ್ಚಾಯಿತು ನಿನ್ನದು 
ಹದ್ದು ಮೀರಿತು ಒಂದು ಕಾಲು ಅಳತೆಗಳು ಇಂತು ೬೮
ಏಳೂವರೆ ವರುಷದಲಿ ನರನೆಂ -
ತಾಳುವನು ತಳ ಮಳಿಕೆ ಪಡುವನು 
ಗೋಳು ಕಟ್ಟಿಕೊ ಬೇಡ ಸೌಮ್ಯವೆ ತಾಳು ನನ್ನಾಣೆ ೬೯
ಗ್ರಹಗಳಲಿ ಗ್ರಹ ಶ್ರೇಷ್ಠ ನೀನೈ
ಇಹ ಬ್ರಹಸ್ಪತಿ ಶ್ರೇಷ್ಠ ನೀ ಗುರು
ಇಹುದುದನು ಅಳುಕಿಸಿದೆ ಸಾಕುಪಕಾರ ತೀರಿಸಿದೆ. ೭೦
ಮಿತ್ರ ಪುತ್ರನು ಪೇಳೆ ಗುರುವಿಗೆ 
ನತ್ರಮತಿಯರ ನೀಚ ವೃತ್ತಿಯ 
ತತ್ರವ್ಯಥೆಯನು ನೀವೇ ನರಗೆ ಅವರ ಕೃತ್ಯಕ್ಕೆ. ೭೧
ಅಪ ನಿಂದಿಪರ ಗರ್ವವನ್ನೇ 
ಅಪಚಾರ ಗೈವರ ಎನ್ನ ಬಗೆಯ 
ಉಪಭೋಗಿ ದುಸಾಧ್ಯ ದುಃಖವು ಎನ್ನ ಪರವಾಗಿ ೭೨
ಗುರುವರರೇ ಗರ್ವ ತಾಳಿದುದಕೆ
ದರವಸ್ಥೆಯ ಕೊಡಲು ನಾ ನಾಂ-
ತರದಿ ಕ್ರಮಿಸಿರಿ ಎನ್ನ ಕೃತ್ಯಕ್ಕೆ ನಿಮ್ಮ ಕೂಸೆಂದು. ೭೩
ಹಿರಿಯರಲಿ ನಾ ಛಲವ ಸಾಧಿಸಿ 
ಗುರುವಿನಂತ:ಕರುಣ ಪಡೆದೆನು 
ಅರುಹಿದನು ಶನಿರಾಯ ವಿಕ್ರಮಗಿಂತು ಪರಿಯಾಗಿ ೭೪
ಮಾಡೇ ಈ ವ್ಯಾಖ್ಯಾನ ಅರುವಿಕೆ
ಗಾಢ ಶ್ರದ್ಧೆಯು ಗ್ರಹಗಳಲಿ ಇರೆ
ಕಾಡುವದು ಶುಭವಾಗಿ ವಿಕ್ರಮನಂತೆ ವಿಕಸಿತವು. ೭೫
ಗುರುಕಥೆಯ ಆಲಿಸಿರೆ ಕಳೆಯುವುದು 
ಗುರುತಿನಿಂದಲೇ ಸಮಯ ಸಂಕಟ 
ಗುರಿಯು ಪಿಡಿದೆಡೆ ಮುಕ್ತಿಯಕ್ಕುದು ಸ್ವಾರ್ಥ ನರಜನ್ಮ ೭೬
ತಾತಾರ್ಯ ಮಹಿಪತಿಯು ಮಹರಠಿ
ಹೇತು ಪೂರ್ವಕವಾಗಿ ಕನ್ನಡ 
ಮಾತಿನಿಂ ರೂಪಿಸಿದ ತುಳಸಾತ್ಮಜನು ಸಿರಿರಾಯ ೭೭
ಸರಳಗನ್ನಡ ಭಾಷೆಯಲಿ ಕಥೆ 
ಬರೆಹದಿಂ ವರ್ಣಿಸಿದೆ ನ್ಯೂನತೆ 
ಬರದ ತೆರೆ ಅರ್ಥವನು ಬುದ್ಧಿಗೆ ನೀಡಿ ಶನಿದೇವ   ೭೮
ಪಿತರು ಓದಿದುದಂತೆ ಪೇಳಿದ 
ಕಥೆಯು ರಂಜಿಸುವಂತೆ ಕನ್ನಡ 
ಮತಿಯರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ  ೭೯
ಇಂತಿ ಶ್ರೀ ಶನೈಶ್ಚರಚರಿ ತಾ -
ದ್ಯಂತ ಸ್ಪೂರ್ತಿಯು ನೀಡುತಿರೆ ತಾ-
ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ ೮೦
ಇತಿ ಪುರಾಣೈತಿಹದ ಕಥೆಗಳು 
ಮಥಿಸಿ ಸೀತಾರಾಮ ತುಳಸಾ-
ಸುತನ ಸವಿಗತೆ ಚತುರ್ಥದ ಶ್ರೀ ಕೃಷ್ಣ ಅರ್ಪಣೆಯ  ೮೧

ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ಚತುರ್ಥ  ಸಂಧಿ ದ್ವಿತೀಯ ಭಾಗ ಪರಿಪೂರ್ಣ  ಶುಭಮಸ್ತು  ಕೃಷ್ಣಾರ್ಪಣಮಸ್ತು






No comments:

Post a Comment