Saturday, June 28, 2025

Shri Krushna Arpanamastu ಶ್ರೀ ಕೃಷ್ಣಾರ್ಪಣಮಸ್ತು

                        ಶ್ರೀ ಕೃಷ್ಣಾರ್ಪಣಮಸ್ತು


ಶ್ರೀ ಗುರುಭ್ಯೋ ನಮಃ. ಹರಿ: ಓಂ 

             ನಮ್ಮಲ್ಲೊಂದು ಸಾರ್ವಕಾಲಿಕವಾದ ವಿಶೇಷ ಸಂಪ್ರದಾಯವಿದೆ. ಯಾವುದೇ ಪೂಜೆಯ ಕೊನೆಯಲ್ಲಿ ಅಥವಾ ಯಾವುದೇ ಸೇವೆಯನ್ನು, ವಸ್ತುವನ್ನು ದೇವರಿಗೆ ಅರ್ಪಿಸುವಾಗ ಶ್ರೀಕೃಷ್ಣಾರ್ಪಣಮಸ್ತು ಎಂದು ಹೇಳಿ ತುಳಸಿ,ಅಕ್ಷತೆಯೊಂದಿಗೆ ನೀರು ಬಿಟ್ಟು ಸೇವೆ ಅಥವಾ ವಸ್ತುವನ್ನು ದೇವರಿಗೆ ಸಮರ್ಪಿಸಿ ಕೇವಲ ತುಳಸಿಯನ್ನು ನಾವು ಸ್ವೀಕರಿಸುತ್ತೇವೆ.

          ಆದರೇ ಯಾಕೆ ಶ್ರೀಕೃಷ್ಣಾರ್ಪಣಮಸ್ತು ? ರಾಮಾರ್ಪಣಮಸ್ತು, ನರಸಿಂಹಾರ್ಪಣಮಸ್ತು, ವಾಮನಾರ್ಪಣಮಸ್ತು, ಭಾರ್ಗವಾರ್ಪಣಮಸ್ತು, ಮುಂತಾದ ದಶಾವತಾರದ ದೇವರಿಗೆ ಅಥವಾ ಯಾವುದೇ ದೇವರ ಹೆಸರಿನಲ್ಲಿ ಅರ್ಪಣಮಸ್ತು ಏಕಿಲ್ಲ ?

             ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಶ್ರೀಕೃಷ್ಣಾವತಾರಕ್ಕೆ ವಿಶಿಷ್ಟ ಮಹತ್ತ್ವವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ಭಗವಂತನು ಸಾಮಾನ್ಯ ಜನರಿಗೆ ಶ್ರೀ ಕೃಷ್ಣನಷ್ಟು ಹತ್ತಿರವಾಗಿರಲಿಲ್ಲ. ಶ್ರೀಕೃಷ್ಣನು ಅತೀ ಸಾಮಾನ್ಯರಲ್ಲಿ ಸಾಮಾನ್ಯರ ಕೈಗೆ ನಿಲುಕುತ್ತಿದ್ದನು. ಅದಕ್ಕಾಗಿಯೇ ಶ್ರೀಕೃಷ್ಣನನ್ನು ಗೋವಿಂದ ಎಂದು ಕರೆಯುವುದು.

     ಗೋವಿಂದ ಎಂದರೆ ಗೋವೃಂದ ಪಾಲಕನೂ ಹೌದು.  ಉತ್ಪತ್ತಿ ಯು ಪ್ರಮಾಣ "ಗೋ ಎಂದರೆ ಇಂದ್ರಿಯ , (ಮಾತು) ವಿಂದ ಎಂದರೆ ನಿಲುಕು ಅಥವಾ ಸಿಗು ಎಂಬರ್ಥ.ಯಃ ಗಾಃ (ಇಂದ್ರಿಯಾಣಾಂ) ವಿಂದತಿ ಸಃ ಗೋವಿಂದಃ, ಅವನೇ ಶ್ರೀಕೃಷ್ಣ.  

    ಕೃಷ್ಣಾವತಾರವು ಒಂದು ಸಂಪೂರ್ಣ ಅವತಾರ. (ಆದಿ ಹಾಗೂ ಅಂತ್ಯವನ್ನು ತೋರಿದ ಎಂಬಥ೯ದಲ್ಲಿ ಮಾತ್ರ) ಈ ಅವತಾರದಲ್ಲಿ ದಶಾವತಾರದ ಉಳಿದ ಒಂಬತ್ತು ಅವತಾರಗಳಲ್ಲಿ ಭಗವಂತನು ತೋರಿಸಿದ ಲೀಲೇಗಳೆಲ್ಲವೂ ಇವೆ. ಹಾಗಾಗಿ ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಿದರೆ ಉಳಿದೆಲ್ಲಾ ದೇವರಿಗೂ (ಅವತಾರಗಳಿಗೂ) ಅರ್ಪಿಸಿದಂತೆ. ಹಾಗಾಗಿಯೇ ಶ್ರೀಕೃಷ್ಣಾರ್ಪಣಮಸ್ತು.

      ಒಮ್ಮೆ ದೇವರಿಗೆ ಕೃಷ್ಣಾರ್ಪಣ ಆಯಿತೋ ಆ ವಸ್ತು/ಸೇವೆ/ಪೂಜೆ ದೇವರಿಗೆ ಸೇರಿದ್ದು. ನಮಗೆ ಅದರ ಮೇಲೆ ಯಾವುದೇ ಹಕ್ಕಿಲ್ಲ. ಕೃಷ್ಣಾರ್ಪಣೆಯ ತುಳಸಿಯೊಂದೇ ನಮ್ಮ ಪಾಲಿಗೆ. ಅಹಂ ತ್ಯಜಿಸಿ ಕೃಷ್ಣಾರ್ಪಣ ಮಾಡಿದರಂತೂ ಅಮಿತ ಪುಣ್ಯ ಫಲ.

              ಗೋವಿಂದನ ಮುಂದೆ ಅಹಂಭಾವದಿಂದ ವರ್ತಿಸಿದರೆ ಪ್ರತಿಯೊಂದು ಕ್ರಿಯೆಗೂ ಆ ಕ್ರಿಯೆಗೆ ಸಮನಾದ ಮತ್ತು ವಿರೋಧ ಭಾವದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ನಿರಂಹಂಕಾರದಿಂದ ಗೋವಿಂದನ ಮುಂದೆ ವರ್ತಿಸಿದರೆ ಜೀವನದಲ್ಲಿ ಅದು ಕೇವಲ ಭಗವಂತನ ಕ್ರಿಯೆ ಅದುವೇ ದೇವರ ಕೃಪೆಯೋ ಅವಕೃಪೆಯೋ, ಶ್ರೀಕೃಷ್ಣಾನುಗ್ರಹ.

       ಆದರೇ ಕೃಷ್ಣಾರ್ಪಣವೇ ಯಾಕೆ ಎಂದರೆ ಕೆಲವರು ಕೃಷ್ಣ ರೂಪ ಕಲಿಯುಗಕ್ಕೆ ಅತ್ಯಂತ ಹತ್ತಿರದ  ರೂಪವಾದ್ದರಿಂದ ಕೃಷ್ಣಾರ್ಪಣವೆನ್ನಬೇಕು ಎಂದಲೂ ಹೇಳುತ್ತಾರೆ. ಸರಿ.... ಆದರೆ ಅದರ ಜೊತೆಗೆ ಬ್ರಹ್ಮಾಂಡಪುರಾಣದ ಉಕ್ತಯಂತೆ ಎಲ್ಲಾ ಜೀವರ ಹೃದ್ಗುಹ ವಾಸಿಯಾದ ಭಗವಂತ ಒಬ್ಬನೇ ಆಗಿದ್ದರೂ,ಭಗವಂತನು ಯುಗಾನುಸಾರ ತನ್ನ ಬಣ್ಣವನ್ನು ಬದಲಿಸುತ್ತಾನೆ. ಕೃತಯುಗದಲ್ಲಿ ಬಿಳಿ, ತ್ರೇತಾಯುಗದಲ್ಲಿ ಕೆಂಪು, ದ್ವಾಪರದಲ್ಲಿ ಹಳದಿ ಹಾಗು ಕಲಿಯುಗದಲ್ಲಿ ಕೃಷ್ಣ ಬಣ್ಣದಿಂದ ಕೂಡಿ ಎಲ್ಲರ ಬಿಂಬರೂಪನಾಗಿದ್ದಾನೆ. ಕೃಷ್ಣವಣ೯ಂಕಲೌ ಕೃಷ್ಣಂ ಎಂದಿದ್ದಾರೆ. ಆದ್ದರಿಂದಲೇ ಕೃಷ್ಣಾರ್ಪಣ ಎನ್ನುವುದು ಅತ್ಯಂತ ಸಮಂಜಸವಾದುದು. 

    ಅದಕ್ಕೆ ಏನೋ ವ್ಯಾಸರಾಯರು ಮೂರು ಬಾರಿ ಕೃಷ್ಣನನ್ನು ಕರೆದಿದ್ದು. ಒಂದು ಬಿಂಬನನ್ನು, ಮತ್ತೊಂದು ಅವತಾರ ರೂಪವನ್ನು ಮಗದೊಂದು ಮೂಲರೂಪವನ್ನು "ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ ಸಂತುಷ್ಟನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವನು". ಸ್ವತಃ ಶ್ರೀಕೃಷ್ಣನೇ ಗೀತೆಯಲ್ಲಿ

ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್। ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದಪ೯ಣಮ್।।

ಏನೇ ಮಾಡು ಅದನ್ನು ನನಗಪಿ೯ಸು ಎಂದು ನೇರವಾಗಿ ತನಗಪಿ೯ಸುವಂತೆ ತಿಳಿಸಿಲ್ಲವೇ?

ಅಂತೆಯೇ ಶ್ರೀಕೃಷ್ಣಾಪ೯ಣಮಸ್ತು.

No comments:

Post a Comment