Sunday, February 26, 2023

SHRI VENKATESHA STAVARAJA ಶ್ರೀ ವೆಂಕಟೇಶ ಸ್ತವರಾಜ

 SHRI VENKATESHA STAVARAJA  
ಶ್ರೀ ವೆಂಕಟೇಶ ಸ್ತವರಾಜ 

ಶ್ರೀರಮಣ ಸರ್ವೇಶ ಸರ್ವಗ                          ಸಾರಭೋಕ್ತ ಸ್ವತಂತ್ರ ಸರ್ವದs
ಪಾರ ಮಹಿಮೋದ್ಧಾರ ಸದ್ಗುಣ ಪೂರ್ಣಗಂಭೀರ |
ಸಾರಿದವರಘ ದೂರಗೈಸೀ
ಸೂರಿಜನರಿಗೆ ಸೌಖ್ಯನೀಡುವ
ಧೀರವೇಂಕಟರಮಣ ಕರುಣದಿ ಪೊರೆಯೊ ಎನ್ನ || ೧ ||
ಘನ್ನಮಹಿಮಾಪನ್ನ ಪಾಲಕ
ನಿನ್ನ ಹೊರತಿನ್ನನ್ಯ ದೇವರ
ಮನ್ನದಲಿನ ನಾ ನೆನೆಸೆನೆಂದಿಗೂ ಬನ್ನ ಬಡಿಸದಿರೂ |
ಎನ್ನ ಪಾಲಕ ನೀನೆ ಇರುತಿರೆ
ಇನ್ನು ಭವಭಯವೇಕೆ ಎನಗೆ
ಚನ್ನವೇಂಕಟರಮಣ ಕರುಣದಿ ಪೊರೆಯೊ ಎನ್ನ || ೨ ||
ಲಕುಮಿ ಬೊಮ್ಮ ಭವಾಮರೇಶರು
ಭಕುತಿಪೂರ್ವಕ ನಿನ್ನ ಭಜಿಸೀ
ಸಕಲಲೋಕಕೆ ನಾಥನೆನಿಪರೊ ಸರ್ವಕಾಲದಲಿ |
ನಿಖಿಳಜೀವರ ಪೊರೆವೊ ದೇವನೆ
ಭಕುತಿ ನೀಯೆನಗೀಯದಿರಲು
ವ್ಯಕುತವಾಗ್ಯಪಕೀರ್ತಿ ಬಪ್ಪುದೊ ಶ್ರೀನಿಕೇತನನೆ || ೩ ||
ಯಾಕೆ ಪುಟ್ಟದೊ ಕರುಣ ಎನ್ನೊಳು
ಸಾಕಲಾರೆಯ ನಿನ್ನ ಶರಣನ
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ? |
ನೋಕನೀಯನೇ ನೀನೆ ಎನ್ನನು
ಜೋಕೆಯಿಂದಲಿ ಕಾಯೊ ಬಿಡದೆ
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೪ ||
ಅಂಬುಜಾಂಬಕ ನಿನ್ನ ಪದಯುಗ
ನಂಬಿಕೊಂಡೀ ಪರಿಯಲಿರುತಿರೆ
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿತೋರೆ |
ಬಿಂಬಮೂರುತಿ ನಿನ್ನ ಕರಗತ
ಕಂಬುವರವೇ ಗತಿಯೊ ವಿಶ್ವ
ಕುಟುಂಬಿ ಎನ್ನನು ಸಲಹೊ ಸಂತತ ಶೇಷಗಿರಿವಾಸ || ೫ ||
ಸಾರಶಿರಿವೈಕುಂಠ ತ್ಯಜಿಸೀ
ಧಾರುಣೀಯೊಳು ಗೊಲ್ಲನಾಗಿ
ಚೋರಕರ್ಮವ ಮಾಡಿ ಬದುಕಿದ ದಾರಿಗರಿಕಿಲ್ಲ |
ಸಾರಿಪೇಳುವೆ ನಿನ್ನ ಗುಣಗಳ
ಪಾರವಾಗಿರುತಿಹವೊ ಜನರಿಗೆ
ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೬ ||
ನೀರ ಮುಳುಗೀ ಭಾರಪೊತ್ತೂ
ಧಾರುಣೀತಳವಗೆದು ಸಿಟ್ಟಿಲಿ
ಕ್ರೂರನುದರವ ಶೀಳಿ ಕರುಳಿನ ಮಾಲೆ ಧರಿಸಿದರು |
ಪೋರ ವಿಪ್ರ ಕುಠಾರಿ ವನವನ
ಚಾರಿ ಗೋಪ ದಿಗಂಬರಾಶ್ವವ
ಏರಿ ಪೋದರು ಬಿಡೆನೊ ವೇಂಕಟಶೇಷಗಿರಿವಾಸ || ೭ ||
ಲಕ್ಷ್ಮಿನಾಯಕ ಸಾರ್ವಭೌಮನೆ
ಪಕ್ಷಿವಾಹನ ಪರಮಪುರುಷನೆ
ಮೋಕ್ಷದಾಯಕ ಪ್ರಾಣಜನಕನೆ ವಿಶ್ವವ್ಯಾಪಕನೆ |
ಅಕ್ಷಯಾಂಬರವಿತ್ತಿ ವಿಜಯನ
ಪಕ್ಷಪಾತವ ಮಾಡಿ ಕುರುಗಳ
ಲಕ್ಷ್ಯಮಾಡದೆ ಕೊಂದೆಯೋ ಶ್ರೀಶೇಷಗಿರಿವಾಸ || ೮ ||
ಹಿಂದೆ ನೀ ಪ್ರಹ್ಲಾದ ಗೋಸುಗ
ಎಂದು ನೋಡದ ರೂಪಧರಿಸೀ
ಬಂದು ದೈತ್ಯನ ಒಡಲ ಬಗೆದೂ ಪೊರೆದೆ ಬಾಲಕನ |
ತಂದೆತಾಯ್ಗಳ ಬಿಟ್ಟು ವಿಪಿನದಿ
ನಿಂದು ತಪಿಸುವ ಪಂಚವತ್ಸರ
ಕಂದನಾ ಧ್ರುವಗೊಲಿದು ಪೊರೆದೆಯೋ ಶೇಷಗಿರಿವಾಸ || ೯ ||
ಮಡುವಿನೊಳಗಿಹ ಮಕರಿಕಾಲನು
ಪಿಡಿದು ಬಾಧಿಸೆ ಕರಿಯು ತ್ರಿಜಗ
ದ್ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ |
ಮಡದಿಮಾತನು ಕೇಳಿ ಬಲುಪರಿ
ಬಡವಬ್ರಾಹ್ಮಣ ಧಾನ್ಯಕೊಡಲು
ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ || ೧೦ ||
ಪಿಂತೆಮಾಡಿದ ಮಹಿಮೆಗಳ ನಾ
ನೆಂತು ವರ್ಣಿಸಲೇನುಫಲ ಶ್ರೀ
ಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ |
ಕಂತುಜನಕನೆ ಎನ್ನ ಮನಸಿನ
ಅಂತರಂಗದಿ ನೀನೆ ಸರ್ವದ
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || ೧೧ ||
ಶ್ರೀನಿವಾಸನೆ ಭಕ್ತಪೋಷನೆ
ಜ್ಞಾನಿಕುಲಗಳಿಗಭಯದಾಯಕ
ದೀನಬಾಂಧವ ನೀನೆ ಎನ್ನಮನದರ್ಥ ಪೂರೈಸೊ |
ಅನುಪಮೋಪಮಜ್ಞಾನ ಸಂಪದ
ವಿನಯಪೂರ್ವಕವಿತ್ತು ಪಾಲಿಸೊ
ಜನುಮಜನುಮಕೆ ಮರೆಯಬೇಡವೋ ಶೇಷಗಿರಿವಾಸ || ೧೨ ||
ಮದವು ಮತ್ಸರ ಲೋಭ ಮೋಹವು
ಒದಗಬಾರದು ಎನ್ನ ಮನದಲಿ
ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು |
ಹೃದಯಮಧ್ಯದಿ ನಿನ್ನ ರೂಪವು
ವದನದಲಿ ತವ ನಾಮಮಂತ್ರವು
ಸದಯ ಪಾಲಿಸೊ ಬೇಡಿಕೊಂಬೆನೊ ಶೇಷಗಿರಿವಾಸ || ೧೩ ||
ಅಂದನುಡಿ ಪುಸಿಯಾಗಬಾರದು
ಬಂದ ಭಾಗ್ಯವು ಹೋಗಬಾರದು
ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |
ನಿಂದೆ ಮಾಡುವ ಜನರ ಸಂಗವು
ಎಂದಿಗಾದರು ದೊರೆಯ ಬಾರದು
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೧೪ ||
ಏನು ಬೇಡಲಿ ಎನ್ನ ದೇವನೆ
ಸಾನುರಾಗದಿ ಎನ್ನ ಪಾಲಿಸೊ
ನಾನಾವಿಧವಿಧ ಸೌಖ್ಯ ನೀಡು ಇಹಪರಂಗಳಲಿ |
ಶ್ರೀನಿವಾಸನೆ ನಿನ್ನ ದಾಸಗೆ
ಏನುಕೊರೆತಿಲ್ಲೆಲ್ಲಿ ನೋಡಲು
ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ || ೧೫ ||
ಆರುಮುನಿದವರೇನು ಮಾಳ್ಪರೊ
ಆರುವೊಲಿದವರೇನು ಮಾಳ್ಪರೊ
ಆರು ಸ್ನೇಹಿಗರಾರು ದ್ವೇಷಿಗಳಾರುದಾಶಿನರು |
ಕ್ರೂರ ಜೀವರ ಹಣಿದು ಸಾತ್ವಿಕ
ಧೀರ ಜೀವರ ಪೊರೆದು ನಿನ್ನಲಿ
ಸಾರ ಭಕುತಿಯನಿತ್ತುಪಾಲಿಸೋ ಶೇಷಗಿರಿವಾಸ || ೧೬ ||
ನಿನ್ನ ಸೇವೆಯನಿತ್ತು ಎನಗೇ
ನಿನ್ನ ಪದಯುಗ ಭಕ್ತಿ ನೀಡೀ
ನಿನ್ನ ಗುಣ ಗಣ ಸ್ತವನ ಮಾಡುವ ಜ್ಞಾನ ನೀನಿತ್ತು |
ಎನ್ನ ಮನದಲಿ ನೀನೆ ನಿಂತೂ
ಘನ್ನ ಕಾರ್ಯವ ಮಾಡಿ ಮಾಡಿಸು
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೭ ||
ಜಯ ಜಯತು ಶಠ ಕೂರ್ಮ ರೂಪನೆ
ಜಯ ಜಯತು ಕಿಟಿ ಸಿಂಹ ವಾಮನ
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ |
ಜಯ ಜಯತು ಶಿರಿ ಯದುವರೇಣ್ಯನೆ
ಜಯ ಜಯತು ಜನಮೋಹ ಬುದ್ಧನೆ
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || ೧೮ ||
ಕರುಣ ಸಾಗರ ನೀನೆ ನಿಜಪದ
ಶರಣವತ್ಸಲ ನೀನೆ ಶಾಶ್ವತ
ಶರಣಜನ ಮಂದಾರ ಕಮಲಾಕಾಂತ ಜಯವಂತ |
ನಿರುತ ನಿನ್ನನು ನುತಿಸಿ ಪೇಡುವೆ
ವರದ ಗುರುಜಗನ್ನಾಥವಿಠ್ಠಲ
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೯ ||

........ಸೌಜನ್ಯದಿಂದ 

No comments:

Post a Comment