Thursday, May 04, 2023

GANDAKI & SHALIGRAMA ಗಂಡಕೀ ಮತ್ತು ಶಾಲಿಗ್ರಾಮ

ಗಂಡಕೀ ಮತ್ತು  ಶಾಲಿಗ್ರಾಮ 
                 ಗಂಡಕಿ ನದಿಯು ನೇಪಾಳದ ಹಿಮಾಲಯ ಪರ್ವತ ಭಾಗದಲ್ಲಿ ಉ.ಅ 27° 27' ಮತ್ತು ಪೂ. ರೇ. 83° 56' ನಲ್ಲಿ ಹುಟ್ಟಿ ನೈಋತ್ಯ ದಿಕ್ಕಿಗೆ ಹರಿದು ಭಾರತವನ್ನು ಪ್ರವೇಶಿಸುತ್ತದೆ. ಬಿಹಾರದ ಚಂಪಾರಣ್ಯ, ಸರಣ್ಯ ಮತ್ತು ಮುಜಪ್ಭರಪುರ ಜಿಲ್ಲೆಗಳ ಮೂಲಕ ಹರಿದು ಕೊನೆಗೆ ಪಾಟನಾದ ಬಳಿ ಇದು ಗಂಗಾನದಿಯನ್ನು

ಸೇರಿಕೊಳ್ಳುತ್ತದೆ. ಇದರ ಉದ್ದ ಸುಮಾರು 192 ಮೈ. ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಇದು ಬಹುದೂರ ಹರಿಯುತ್ತದೆ. ವಾಸ್ತವವಾಗಿ ಈ ವಲಯದಲ್ಲಿ ಈ ಎರಡು ರಾಜ್ಯಗಳ ನಡುವಣ ಗಡಿ ನಿರ್ಧಾರಕ ನದಿಯಿದು. ನದಿಯ ಹೆಸರುಗಳು - ಈ ನದಿಯನ್ನು ನೇಪಾಳದಲ್ಲಿ ಶಾಲಿಗ್ರಾಮೀ ಎಂದೊ ಉತ್ತರ ಪ್ರದೇಶದಲ್ಲಿ ನಾರಾಯಣೀ ಮತ್ತು ಸಪ್ತಗಂಡಕೀ ಎಂದೂ ಕರೆಯುತ್ತಾರೆ. ಗಂಡಕ, ಮಹಾಗಂಡಕ    ( ಸಫೇದ ಗುಂಡಕಿ ಮತ್ತು ಕಾಲಿ ಗಂಡಕಿ ಎಂತಲೂ ಕರೆಯುತ್ತಾರೆ ಈ ಹೆಸರು ಬರಲು ಕಾರಣ ನದಿಯ ನೀರಿನ ಕೆಳಭಾಗದಲ್ಲಿ ಇರುವ ಕಲ್ಲುಗಳ ಹಾಸಿಗೆಯ ಶಿಲಾ ಪದರುಗಳಿಂದ ಕಾಣುತ್ತಿದ್ದು‌ ನೀರಿನ ಬಣ್ಣದಲ್ಲಿ ಯಾವ ಬದಲಾವಣೆ ಇಲ್ಲ ) ಎಂದು ಇದಕ್ಕೆ ಹೆಸರುಗಳುಂಟು.    ‌                   
                    ಮಹಾಭಾರತಲ್ಲಿ ಸದಾನೀರಾ ಎಂದು ಹೆಸರಿಸಲಾಗಿರುವ ನದಿ ಇದೇ ಎಂಬುದು ಲಾಸೆನ್‍ನ ಅಭಿಪ್ರಾಯ. ಮಳೆಗಾಲದಲ್ಲಿ ಮಳೆಯ ನೀರಿನಿಂದಲೂ, ಬೇಸಗೆಯಲ್ಲಿ ಹಿಮ ಕರಗಿದ ನೀರಿನಿಂದಲೂ ಒಟ್ಟಿನಲ್ಲಿ ಸದಾ ಕಾಲವೂ ತುಂಬಿ ಹರಿಯುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಪ್ರಾತಃ ಕಾಲದಲ್ಲಿ ನದಿಯು ಹಿಮ ಹಾಸಿಗೆಯಾಗಿದ್ದು  ಮಧ್ಯಾಹ್ನದ ಬಿಸಿಲಿನಿಂದ ನೀರು ರಭಸವಾಗಿ ನುಗ್ಗಿ ಹರಿಯುತ್ತದೆ ಸಂಜೆಗೆ ಮೈ ನಡುಕಗೊಒಳ್ಳುವಂಥ ವಿಪರೀತ ಚಳಿ ಇರುತ್ತದೆ. ಗ್ರೀಸದೇಶದ ಭೂಗೋಳಶಾಸ್ತ್ರಜ್ಞರು ಕೂಂಡೊಚೇಟ್ಸ್ ಎಂದು ಕರೆದಿರುವ ನದಿ ಇದೇ ಎಂದು ಹೇಳಲಾಗಿದೆ.
         ನೇಪಾಳಿಗರ ಜನಪದದಲ್ಲಿ ಹಾಸು ಹೊಕ್ಕಾದ ಈ ನದಿಗೆ ಸಂಬಂಧಪಟ್ಟಂತೆ ಒಂದು ಕಥೆಯೂ ಪ್ರಚಾರದಲ್ಲಿ ಇದೆ.
         ಒಬ್ಬ ಪ್ರಸಿದ್ದ ನಿತ್ಯಸುಮಂಗಲೆ ಅಷ್ಟೇ ಅಲ್ಲದೆ ಆಕೆ ಮಹಾನ್ ವಿಷ್ಣು ಭಕ್ತೆ ಕೂಡ ಅತೀ ಸುಂದರಿ ಸಹಿತ. ರಾಜಕುಮಾರರುಗಳು, ಶ್ರೀಮಂತರು ಅವಳ ಸಾಮಿಪ್ಯ ಬಯಸಿ ಬರುತ್ತಿದ್ದರು. ಅವಳು ತನ್ನ ವೃತ್ತಿಯಲ್ಲಿ ಶೃದ್ಧೆಯಿಂದ ಇದ್ದು ಒಂದು ನಿಯಮವನ್ನು (ಲಕ್ಷಣ ರೇಖೆ) ಪಾಲಿಸಿಕೊಂಡು ಬರುತ್ತಿದ್ದಳು. . ಅವಳು ತಾನೇ ಹಾಕಿ ಕೊಂಡ ನಿಯಮದಂತೆ ಬೆಳಿಗ್ಗೆ ಎದ್ದು  ಬಾಗಿಲು ತೆರೆದು ತಳಿಹೊಡೆದು ರಂಗೋಲಿ ಹಾಕುವ ಮೊದಲು ಯಾರು ಪ್ರಪ್ರಥಮರಾಗಿ ತನ್ನ ಮನೆಯ ಮುಂದೆ ಕಾಣಿಸಿಕೊಳ್ಳುವರೋ ಅವರೇ ತನ್ನ ಅಂದಿನ ಒಡೆಯ  ಎಂದು. ಈ ನಿಯಮ ಎಲ್ಲರಿಗೂ ತಿಳಿದಿದ್ದರಿಂದ ಯಾರೂ ಚಕಾರವೆತ್ತದೆ ಸೌಂದರ್ಯಾ ರಾಧನೆಗಾಗಿ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಒಮ್ಮೆ ಮಹಾ ವಿಷ್ಣುವಿಗೆ  ಆಕೆಯ ಭಕ್ತಿಯನ್ನು ಪರೀಕ್ಷೆ ಮಾಡಬೇಕು ಎಂದೆನ್ನಿಸಿತು. 
                     ಅದೊಂದು ದಿನ ಅವಳ ದಾಸಿ ಬೆಳಿಗ್ಗೆ ಯಥಾಪ್ರಕಾರ ಬಾಗಿಲು ತೆರೆದಾಗ ಕೈಯಲ್ಲಿ ದುಡ್ಡಿನ ಗಂಟನ್ನು ಹಿಡಿದ ರೋಗಗ್ರಸ್ತ ವ್ಯಕ್ತಿ ಸರದಿಯಲ್ಲಿ ಮೊದಲು ನಿಂತಿದ್ದ. ನೋಡಿದರೇ ತಿಳಿಯುತ್ತಿತ್ತು ಅವನಿಗೆ ಕುಷ್ಟ ರೋಗವಿದೆಯೆಂದು. ದಾಸಿ ನೋಡುತ್ತಲೇ ಮೂರ್ಛೆ ಹೋದವಳಂತಾಗಿ ತನ್ನ ಮಾಲಿಕಳ ಬಳಿ ವಿಷಯ ತಿಳಿಸುತ್ತಾಳೆ. ಅವಳ ಮುಖ ಭಾವ ಬದಲಾಗಲಿಲ್ಲ.  ಅವನನ್ನು ಗೌರವಪೂರ್ವಕವಾಗಿ ಒಳಗೆ ಕರೆದು ಕೊಂಡು ಬರುವಂತೆ ತಿಳಿಸಿದಳು. ಅವನಿಗೆ ಸ್ನಾನ ಮಾಡಿಸಿ ಶುಭ್ರ ಬಟ್ಟೆ ಇತ್ತಳು. ಹೀಗೆ ಸ್ವಲ್ಪ ಹೊತ್ತು ಅದು ಇದು ಎಂದು ಉಭಯ ಕುಶಲೋಪರಿ ನಡೆಯಿತು. ಬೆಳಗಿನ ಉಪಹಾರ ಸೇವೆ ಆಯಿತು. ಹಾಗೆಯೇ ಮಾತನಾಡುತ್ತಾ ಇದ್ದಂತೆ ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆ ಇದ್ದಿರಬಹುದು. ಅವನು ತನ್ನ ಆಸೆಯನ್ನು ಅವಳ ಬಳಿ ತೋಡಿಕೊಂಡ. "ನನಗೆ ನಿನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಲು ಆಸೆ". ಅವಳಿಗೆ ಅವಳ ಧರ್ಮ ಯಾವುದೇ ಮುಜುಗರ ಉಂಟು ಮಾಡಲಿಲ್ಲ. ತನ್ನ ತೊಡೆಯ ಮೇಲೆ ಅವನ ತಲೆಯಿರಿಸಿ ತಲೆ ಪ್ರೀತಿಯಿಂದ ನೇವರಿಸ ತೊಡಗಿದಳು. ಕೊಂಚ ಹೊತ್ತು ಇದು ನಡೆಯಿತೇನೋ  ಅವಳು ತಲೆ ಸವರುತ್ತಾ ಇದ್ದಂತೆ ಅವನಿಂದ ಏನೂ ಪ್ರತಿಕ್ರಿಯೆ ಬಾರದೆ ಇದ್ದಾಗ ಅವನು ಕೊನೆಯುಸಿರು ಬಿಟ್ಟಿದ್ದು ಖಚಿತವಾಯಿತು. ಊರಲ್ಲೆಲ್ಲ ವಿಷಯ ಬಹಿರಂಗ ಆಯಿತು. ಅವನ ಚಿತೆ ಸಿದ್ಧ ಪಡಿಸಲು ತಯಾರಿ ಮಾಡಿಸಿದ್ದೂ ಆಯಿತು. ಆವಾಗೆಲ್ಲ ಸಹಗಮನ ಪದ್ಧತಿ ರೂಢಿಯಲ್ಲಿತ್ತು. ಅವಳ ತೊಡೆಯ ಮೇಲೆ ಅವನು ಪ್ರಾಣ ತ್ಯಜಿಸಿದ್ದರಿಂದ "ಅವಳು ಅವನ ಒಂದು ದಿನದ ಹೆಂಡತಿ. ಹೀಗಿದ್ದಾಗ ಅವಳು ಸಹಗಮನ ಮಾಡಬೇಕೇ" ಎಂಬುದರ ಬಗ್ಗೆ ತ್ವರಿತ ಪಂಚಾಯತಿ ಕರೆದಾಗ "ಅವಳು ವೃತ್ತಿಯಲ್ಲಿ ನಿತ್ಯ ಸುಮಂಗಲಿ  ಕೇವಲ ಒಂದು ದಿನದ ಪತ್ನಿಯ ಜವಾಬ್ದಾರಿ ಹೊತ್ತವಳು ಆಗಿದ್ದರಿಂದ ಸಹಗಮನ ಬೇಡ" ಎಂಬ ತೀರ್ಮಾನ ಹೊರ ಬಂತು. ಪಂಚಾಯತಿಯ ತೀರ್ಮಾನ ಅವಳಿಗೂ ತಿಳಿಸಲಾಯಿತು. ಚಿತೆ ಸಿದ್ದ ಪಡಿಸಿದ್ದರು. ಅವಳು ಮಾತ್ರ ಒಂದು ದಿನದ ಪತ್ನಿಯಾದರೂ ತನ್ನ ಧರ್ಮ ತನ್ನ ಶಿಸ್ತಿನಂತೆ ತಾನೇ ಸಹಗಮನ ಮಾಡಲು ನಿರ್ಧರಿಸಿದಳು. 
        ಅವಳೇ ಚಿತೆಗೆ ಬೆಂಕಿ ಹಚ್ಚಿ ಬೆಂಕಿಯ ಜ್ವಾಲೆ ಮೇಲೇಳುತಿದ್ದಂತೆ ಚಿತೆಗೆ ಧುಮುಕಿಯೇ ಬಿಡುತ್ತಾಳೆ. ಆಶ್ಚರ್ಯವೆಂಬಂತೆ ಒಮ್ಮೆಲೇ ಜೋರಾದ ಮಳೆ ಸುರಿಯಲು ಆರಂಬಿಸಿತು. ಬೆಂಕಿ ಅವಳನ್ನು ಸುಡಲಿಲ್ಲ. ಅಲ್ಲದೆ ಕುಷ್ಟರೋಗಿಯಾಗಿ ಮೃತ ಹೊಂದಿದ ಶ್ರೀಹರಿ ಈಗ ತನ್ನ ಮೂಲ ರೂಪದಲ್ಲಿ ಪ್ರಕಟವಾಗಿದ್ದು ಅವಳಿಗೆ ಕಾಣಿಸುತ್ತಿದ್ದಾನೆ. ಅವಳ ಕಣ್ಣಲ್ಲಿ ಮಿಂಚು ಹೊಳೆದ ಅನುಭವ. ಭಗವಂತನನ್ನು ಹೀಗೂ ಕಾಣ ಬಹುದೇ ಎಂಬ ಪ್ರಶ್ನೆ ಮನದಲ್ಲಿ ಉದ್ಭವಿಸುತ್ತದೆ. ಅವಳ ಅನನ್ಯ ಶ್ರದ್ಧೆ, ಭಕ್ತಿ, ನಿಯಮ ಪಾಲನೆಗೆ ಮಹಾವಿಷ್ಣು ತಲೆದೂಗಿ "ನಿನಗೆ ಏನು ವರ ಬೇಕು ಕೇಳು?" ಎಂದಾಗ ಅವಳು "ಭಗವನ್..ನಿನ್ನ ದರುಶನದಿಂದಲೇ ಪುನೀತಳಾದೆ.ನನಗೆ ಇನ್ನೇನು ಬೇಕು ಆದರೂ ನೀನು ದಯ ಪಾಲಿಸುವ ವರವೂ ಬೇಕು" ಎಂದು ಹೇಳಿ "ನೀನು ನನ್ನ ತೊಡೆಯ ಮೇಲೆ ಮಲಗಿದ್ದೆ. ಎಂಥ ಅವಕಾಶ ಕಲ್ಪಿಸಿಕೊಟ್ಟಿದ್ದೀ. ಅದೇ ರೀತಿ ಮುಂದೆಯೂ ನನ್ನ ತೊಡೆಗಳು ನಿನ್ನ ಮಸ್ತಕ ವಿರಮಿಸುವ ತಾಣವಾಗಲಿ".  ವಿಷ್ಣುವಿಗೆ ತುಂಬಾ ಇಷ್ಟವಾಯಿತು ಅವಳ ಬೇಡಿಕೆ. ತಥಾಸ್ತು ಎಂದನು. 
         ತನಗಾಗಿ ಇಹದ ಯಾವುದೇ ಸುಖ, ಧನ, ದ್ರವ್ಯಕ್ಕೆ ಇಚ್ಛೆ ಪಡದೆ, ದೇವ ಸಾನಿಧ್ಯ ವನ್ನು ಅವಳು ಬಯಸಿದಳು. ಅರಿವಿಲ್ಲದೆ ವಿಷ್ಣುವನ್ನು ಒಂದು ದಿನದ ಒಡೆಯನಾಗಿ ಸ್ವೀಕರಿಸಿದ ಅವಳು ನೇಪಾಳದ ಬಳಿಯ ಗಂಡಕ ನದಿಯಾಗಿ ಇಡೀ ವರ್ಷ ತುಂಬಿ ಹರಿಯುತಿದ್ದು ವಿಷ್ಣು ಸಾನಿಧ್ಯ ವಿರುವ, ಸಾಲಗ್ರಾವ ಲಭಿಸುವ ಪ್ರಪಂಚದ ಏಕೈಕ ನದಿಯಾಗಿ ಇಂದಿಗೂ ಹರಿಯುತ್ತಲಿದ್ದಾಳೆ. ಒಡೆಯ ಗಂಡಕವಾದ ನದಿಯು ಆ ದೇಶದ ಗ್ರಾಮ್ಯ ಜನಪದಲ್ಲಿ ಗಂಡಕಿಯಾಗಿ ಪರಿವರ್ತನೆ ಯಾಗಿರಬಹುದು. ಗಂಡಕಿ ನದಿಯ ಉಗಮ ಸ್ಥಾನವಾದ ಹಿಮಾಲಯ ಪರ್ವತ ಶ್ರೇಣಿಯ ದಾಮೋದರ ಕುಂಡದಿಂದ ಮಳೆಗಾಲದಲ್ಲಿ ಸಾಲಗ್ರಾಮಗಳು ಉತ್ಪತ್ತಿಯಾಗಿ  ನೀರಿನ ರಭಸದಿಂದ ಹರಿದು ಬರುತ್ತವೆ ಎಂದು ನೇಪಾಳಿಗರ ಹೇಳಿಕೆ. ಶಾಲಿಗ್ರಾಮಗಳು  ಸುವರ್ಣ,ರೌಪ್ಯ ಗೆರೆಗಳನ್ನು ಹೊಂದಿದ್ದು ಅವುಗಳ ಆಕಾರ ದೃಷ್ಟಾಂತಗಳ ಮೇರೆಗೆ ದೇವರ ನಾಮಗಳನ್ನು ಪಡೆದು ಕೊಂಡಿವೆ. ಆ ಆ ದೇವರ,ಅವತಾರ ಸ್ವಭಾವಕ್ಕನುಗುಣವಾಗಿ ಪೂಜಕರಿಗೆ ಫಲ ಕೊಡುತ್ತವೆ ಎಂದು ಸನಾತನರ ಅಭಿಪ್ರಾಯವೂ ಇದೆ. ಹಿರಿಯರಿಂದ ಕೇಳಿದ ಮತ್ತು ಅವರ ಧೃಡ ನಂಬಿಕೆಗಳ ಪ್ರಕಾರ  ಒಬ್ಬ ವ್ಯಕ್ತಿ ಜೀವಿಸಿದ್ದಾಗಲೇ ಅವರು ತಮ್ಮ ಹೆಸರಿನಲ್ಲಿ ವಿಧಿ ಪೂರ್ವಕವಾಗಿ ಗಂಡಕಿ ನದಿಯಲ್ಲಿ ತರ್ಪಣ ಕೊಡಬೇಕು ಎಂದು ಅವರ ಬಲವಾದ ಆಶಯವಿರುತ್ತದೆ. 
                     ಮಳೆಗಾಲದಲ್ಲಿ ಇದರ ಪ್ರವಾಹ ಸುತ್ತಮುತ್ತಣ ಬಯಲು ಪ್ರದೇಶಗಳಿಗೆ ನುಗ್ಗಿ ಬಹಳ ಅನಾಹುತಗಳನ್ನು ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ಕೆಲವಡೆಗಳಲ್ಲಿ ನದಿಯ ದಡದಲ್ಲಿ ಅಡ್ಡಗಟ್ಟೆಗಳನ್ನು ನಿರ್ಮಿಸಲಾಗಿದೆ. ನದಿಯಲ್ಲಿ ವರ್ಷದಾದ್ಯಂತವೂ ದೋಣಿ ಸಂಚಾರವುಂಟು. ನೇಪಾಳದ ಮತ್ತು ಗೋರಖಪುರದ  ಕಾಡುಗಳಿಂದ ಮರದ ದಿಮ್ಮಿಗಳನ್ನು ಸಾಗಿಸಲು ನದಿ ಉಪಯುಕ್ತವಾಗಿದೆ. ಜನವಸತಿಯ ಪ್ರದೇಶವನ್ನು ತಲುಪಿದ ಮೇಲಂತೂ ಕಟ್ಟಡ ಸಾಮಾಗ್ರಿ, ಧಾನ್ಯ, ಸಕ್ಕರೆ ಮೊದಲಾದ ಸರಕುಗಳು ಈ ಜಲಮಾರ್ಗದ ಮೂಲಕ ಸಾಗುತ್ತವೆ. ಈ ನದಿಯಿಂದ ಸರಣ್ಯ ಮತ್ತು ಚಂಪಾರಣ್ಯ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯ ಏರ್ಪಟ್ಟಿದೆ. ಹಾಜಿಪುರ, ಶೋಣಪುರಗಳಿಗೂ ಈ ನದಿಯಿಂದ ತುಂಬ ಅನುಕೂಲವುಂಟು. ನೀರು ಸದಾವಕಾಲ ರಭಸದಿಂದ ಹರಿಯುವುದರಿಂದ ವಿದ್ಯುತ್ ಉತ್ಪಾದನೆ, ನೀರಾವರಿ ಯೋಜನೆ ಅಲ್ಲದೇ ಈ ನದಿಯ ಹರಿವು ರಭಸ ಸುಂದರ ಸೃಷ್ಟಿಯ ಸೊಬಗು ಇಡಿ ಜಗತ್ತಿನ ಪ್ರವಾಸಿಗರನ್ನು ಆಕರ್ಷಿಸುವ ಗುಣದಿಂದ ನೇಪಾಳದೇಶದ ಆರ್ಥಿಕ ಶ್ರೋತವೂ ಇರಬಹುದು 
||   ಶ್ರೀ ಕೃಷ್ಣಾರ್ಪಣಮಸ್ತು  ||

No comments:

Post a Comment