Monday, August 21, 2023

SHODASHOPACHARA POOJA ಷೋಡಶೋಪಚಾರ ಪೂಜೆ

                                          ಷೋಡಶೋಪಚಾರ ಪೂಜೆ         

ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ: 

1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.
2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.
6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.
7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.
8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.
11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.
12.ದೀಪ - ದೀಪ ಸಮರ್ಪಣೆ ಮಾಡುವುದು.
13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.
14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.
15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.
16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ .
ಪೂಜೆಯ ಮೂಲ ತತ್ವ :
ದೇವರಿಗೆ ವಂದನೆ ಧನ್ಯವಾದ ಅರ್ಪಿಸುವದು. ಅದಕ್ಕಾಗಿ ದೇವತೆಯನ್ನು, ಅಥವಾ ದೇವತೆಗಳನ್ನು ಮನೆಯ ದೇವ ಮಂಟಪದಲ್ಲಿರುವ ಮೂರ್ತಿಗಳಿಗೆ ಆಹ್ವಾನಿಸಿ ಆ ದೇವತೆಗಳನ್ನು ಮನೆಗೆ ಬಂದ ವಿಶೇಷ ಅತಿಥಿಗಳಿಗೆ ಉಪಚಾರ ಮಾಡುವಂತೆ ಉಪಚರಿಸಿ ಬೀಳ್ಕೊಡುವದು. ಉದಾ: ಆವಾಹನೆ -ಅಥಿತಿ ಸ್ವಾಗತ; ಆಸನ- ಕುಳಿತುಕೊಳ್ಳಲು ಆಸನ ಕೊಡುವುದು; ಅರ್ಘ್ಯ ಮತ್ತು ಪಾದ್ಯ- ಕೈಕಾಲು ತೊಳೆಯಲು ನೀರು; ಆಚಮನ- ಕುಡಿಯಲು ನೀರು ಕೊಡುವುದು; ಅಭಿಷೇಕ -ಸ್ನಾನ; ಗಂಧ ,ಹೂ - ಅಲಂಕಾರ; ಧೂಪ, ದೀಪ - ಪರಿಮಳ ಸಿಂಚನ, ಗೌರವ ಅರ್ಪಣ; ನೈವೇದ್ಯ - ಭೋಜನ, ತಾಂಬೂಲ; ಪ್ರಸನ್ನಾರ್ಘ್ಯ - ಕೈತೊಳೆದ ನಂತರ ಕೈಗೆ ಸುವಾಸನೆಯ ನೀರು; ಆರತಿ - ಗೌರವ ಸಮರ್ಪಣೆ; ಪ್ರಾರ್ಥನೆ - ನಮಗೆ ಬೇಕಾದುದನ್ನು ಕೇಳುವುದು. ನಂತರ ಬೀಳ್ಕೊಡಿಗೆ. ಇದರಲ್ಲಿ ಹೆಚ್ಚಿನ ವಿಶೇಷವು ದೇವತೆಗಳಿಗೆ ತೋರಿಸುವ ಭಕ್ತಿಯಲ್ಲಿದೆ. ಆದರೆ ಭಗವದ್ಗೀತೆಯಲ್ಲಿ ಭಗವಂತನನ್ನು ಸರ್ವಾಂತರ್ಯಾಮಿಯೆಂದು ಅರ್ಥಮಾಡಿಕೊಂಡು ಧ್ಯಾನ ಮಾಡುವುದೇ  ಶ್ರೇಷ್ಠವೆಂದು ಹೇಳಿದೆ.

ಶ್ರೀ ಕೃಷ್ಣಾರ್ಪಣಮಸ್ತು                  

No comments:

Post a Comment