Friday, June 06, 2025

SHANAISHCHARA CHARITAM II ( 01-81 ) ಶ್ರೀ ಶನೈಶ್ಚರ ಚರಿತಂ ೨

SHANAISHCHARA CHARITAM  II
( 01-81)
       ಶ್ರೀ ಶನೈಶ್ಚರ ಚರಿತಂ   ೨
|| श्री शनैश्चर देवताभ्यो नमः ||

(ಕನ್ನಡ ಭಾಮಿನಿ ಮತ್ತು ವಾರ್ಧಿಕ ತ್ರಿಪದಿಗಳಲ್ಲಿ  ಒಟ್ಟು ಹತ್ತು ಸಂಧಿಗಳು  )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರ ಅಷ್ಟಕಂ, ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರ ಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ ಸಹಿತ )
ದ್ವಿತೀಯ ಸವಿಗಥಾ ಸಂಧಿ ೨
( ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

ಮೂರು ಕಾಲದಿ ಪ್ರಥಮ ಪೂಜಿಪ |
ಕಾರುಣಿಕ ಕಾರ್ಯಾಖ್ಯ ರೂಪದಿ |
ತೋರಿಸು ನೀ ಸಹಜ ಕಥೆಯಿದು ನನ್ನ ಒಳಗಿರ್ಪ || ೧ ||
ಕಥೆ ವಿಷಯ ವಿವರಿಸುವ ಪರಿಯಲಿ |
ಶೃತಿಯಲಿಂ ತಾ ಬರೆಹವಿರುವ |
ಸ್ಮೃತಿಯ ನೀಡು ಬ್ರಹ್ಮ ಪ್ರೀಯಳೆ ನಿನ್ನ ಹೇಳುವೆನು ||೨||
ಜ್ಞಾನ ಭಕ್ತಿ ವಿರಕ್ತ ನಯ ಪು - |
ರಾಣ ಶಾಸ್ತ್ರ  ಶ್ರವಣ ಚಿಂತನ |
ದಾನ ಶಾಮ ಭಾಮ ಎಲ್ಲವನು ಶನಿರಾಯ ಯೋಜಿಪನು ||೩||
ವಿಧಿ ನಿಷೇಧಗಳೇನು ನೋಡದೆ |
ವಿಧಿಸುತಿರ್ಪನು ಶಾಸನಾದಿಯ. |
ಉದಯತನಯನ ವ್ಯಾಪ್ತಿಯದು ಹೇಳಲಸದಳವು. ||೪||
ತ್ರಿವಿಧ ಗುಣಗಳ ಮಾನಿ ಶ್ರೀ ಶನಿ |
ರವಿಸುತನ ಗುಣಿಗಣಗಳೊಳ್ ಅವ - |
ರವರ ಯೋಗ್ಯತೆ ಕರ್ಮಗಳ ಅನುಸರಿಸಿ ಕರ್ಮಫಲ ||೫||
ಪ್ರಥಮ ಸವಿಗತೆಯಲ್ಲಿ  ಕಂದನ |
ವ್ಯಥೆಯು  ಕಾಲುಗಳಲ್ಲಿ ತೋರಿದರೆ |
ಕಥೆಯ ಮುಂದಲ ತಾಯಿಯಡೆ ಆಪ್ಯಾಯ ತೊರೆದಿಹನು. ||೬||
ಕಾಲುಗಳು ಪರಿಪೂರ್ಣ ಹೋಗದೆ | 
ಪಾಲನೆಯು ಉಂಟಾಗಲವಳಿಂ | 
ಬಾಲಕನೆ ಕುಂಟಾಗಿ ಉಳಿಯುವಿ ಬಾಧೆ ಇಲ್ಲೆಂದ || ೭||
ಚಿಕ್ಕ ಮಗು ತಾ ಶೋಕದಿಂದಲಿ | 
ಬಿಕ್ಕಿ ಬಿಕ್ಕಳುತಿರಲು ಸೂರ್ಯನು | 
ನಿಕ್ಕು ತಾಯಿಯು ತಪದಿ ತಲ್ಲಿ ನಿಹಳು ಮೇರುವಲಿ  || ೮ ||
ಮೋಸದಿಂ ಮನೆಬಿಟ್ಟು ಪೋಗಿಹ | 
ಹೇಸಿ ಹೆಂಗಸು ಪಶ್ಚಾತ್ತಾಪದಿ | 
ಬೇಸಿ ಬೇಯಲಿ ಇನ್ನು ಬಹುದಿನ ಎಂದು ರವಿ ನುಡಿದ ||೯ ||
ಶನಿಯು ದುಃಖದಿ ನಿಜದ ತಾಯಿಯ | 
ನೆನೆದು ಕೊರಗುತೆ ಅಣ್ಣ ಯಮನಿಗೆ | 
ಕನವರಿದು ಕೇಳಿದನು ಅವಮಾನಿತನು ತಾನಾದ ||೧೦ || 
ಕಾಲರಾಯನೆ ತಾಯಿ ಕಳೆದಳು | 
ಕಾಲ ಕುಂಟತೆ ಶಾಪವಾಯಿತು   | 
ಮೂಲ ಅಂತಃಕರಣ ತಾಯಿಯ ಇಲ್ಲದಿರೆ ಎಮಗೆ ||೧೧||
ತಾಯಿ ಇಲ್ಲದ ತಬ್ಬಲಿಯು ಮಲ- | 
ತಾಯಿ ಮತ್ಸರದಿಂದ ಶಿಕ್ಷೆಯು | 
ಆಯಿತೀತೆರ ಸಹನೆ ಮೀರಿತು ಅಣ್ಣ ಕೇಳೆಂದ ||೧೨ ||
ಅಂತಕನು ಈ ಮಾತು ಆಲಿಸಿ |
ಅಂತಃಕರಣದಿ ತಮ್ಮ ನಿಗೆ ತ-| 
ನ್ನಂತರಂಗವ ಅರುಹಿದನು ತಪಕುರಿತು ದುಡಿಯುವನು ||೧೩||
ನಮ್ಮ ಪುಣ್ಯವೇ ಕಡಿಮೆಯಾಗಿದೆ | 
ತಮ್ಮ ಹೆರವರ ಹಳಿದು ಫಲವೇ? | 
ಬ್ರಹ್ಮ ಬರಹಕೆ ಸಾಟಿಯಾರಿಹರೀ ಜಗದಿ ಜೀವಿ ||೧೪||
ವಾರಣಾಸಿಗೆ ಹೋಗಿ ಈಶನ | 
ಕುರಿತು ತಪವನು ಮಾಡಬೇಕು | 
ಹಿರಿಮೆ ದೈವಿ ಶಕ್ತಿ ಪ್ರಾಪ್ತಿಯ ಮಾಡಿಕೊಳ್ಳೋಣ ||೧೫||
ಭದ್ರೆ ಯಮ ಶನಿ ನಡೆದು ಕಾಶಿಗೆ | 
ಶುದ್ಧರಾದರು ಗಂಗೆ ಮಿಂದರು | 
ಸಿದ್ಧಿತಪ ಆನಂದ ವನದಲಿ ಮಾಳ್ಪುದಕೆ ಪೋಗಿ ||೧೬||
ರುದ್ರ ದೇವರ ಪೂಜೆ ನ್ಯಾಸವು | 
ಸಿದ್ಧಿ ಸಂಕಲ್ಪವನು ಮಾಡಿಯೇ | 
ಬದ್ಧ ಪದ್ಮಾಸನದಿ ಆನುಷ್ಠಾನ ನಡೆಸಿದರು ||೧೭||
ಲಿಂಗ ರಚಿಸಿದ ಶ್ರೀ ಶನೈಶ್ಚರ | 
ತಂಗಿ ಭದ್ರೆಶ್ವರ ಯಮೆಶ್ವರ | 
ಅಂಗ ನಾಮವೆ ಇರಿಸಿ ಉಗ್ರತೆಯಿಂದ ಜಪಿಸಿದರು ||೧೮||
ತಪವ ಗೈಯುತ್ತಿರಲು ಮೂವರು | 
ಅಪರಿಮಿತ ದಿನಗಳೆಯ ಪ್ರತಿಫಲ | 
ಕುಪಿತ ಸೂರ್ಯನು ಶಾಂತ ವೃತ್ತಿಯ ಹೊಂದಿ ದಯಹುಟ್ಟಿ ||೧೯||
ವಿರಹ ವ್ಯಥೆಯಿಂ ಮರಗುತಿಹ ಸತಿ | 
ಇರುವ ಮೇರುವ ಹುಡುಕಿ ಬಂದನು | 
ತುರಗ ರೂಪದಿ ಕುಳಿತ ಸಂಜ್ಞೆಯ ಕಂಡು ಬೆರಗಾದ ||೨೦||
ದಕ್ಷ ಪ್ರಜಪತಿ ನುಡಿದ ಸಿಟ್ಟಿನ | 
ರುಕ್ಷ ಮಾತಿಗೆ ಮಗಳ ನಡತೆಗೆ | 
ತಕ್ಕ ಶಿಕ್ಷೆಯ ತಿಳಿದು ರವಿ ಹಯ ರೂಪ ಧರಿಸಿದನು ||೨೧||
ಪತಿಯ ರೂಪ ಸರೂಪ್ಯವಾಗಿ | 
ಅತಿಶಯದಿ ಪ್ರೆಮಾಂಬು ಪುಟ್ಟಿ | 
ಋತುಮತಿಯು ತಾನಿಹುದು ತಿಳಿದು ಸಂಜ್ಞೆ ಸಾನಿಧ್ಯ ||೨೨||
ಸಾಮಿಪ್ಯದೊಳು ರವಿ ಹರುಷದಿರಲು | 
ಕಾಮ ವಾಸನೆ ಹುಟ್ಟಿ ಮುದ್ದಿಸೆ | 
ಪ್ರೇಮ ಸಲ್ಲಾಪದೊಳು ಸೂರ್ಯ ವೀರ್ಯವು ಸ್ಖಲಿಸೆ ||೨೩||
ವೀರ್ಯ ವಾಸನೇ ಘ್ರಾಣ ಮಾರ್ಗದಿ | ತೂರ್ಯದೊಳು ಎಳೆ ಸಂಜ್ಞೆ ತನ್ನೊಳು | 
ಭಾರ್ಯೆ ಮೂಗಿನ ಮಡಿಲು ಗರ್ಭವು ಪಿಡಿದು ಕೆಲ ದಿನದಿ ||೨೪|| 
ವೀಡೆ ಪಿಂಗಲೇ ಹೊರಳಿ ಗಳಿತದಿ | 
ನಾಡ ಸುಂದರ ಅವಳಿ ಪುತ್ರರು | 
ಕಾಡಿನಲಿ  ಅಶ್ವಿಜಯ ವೈವಸ್ವತರು ಜನಿಸಿದರು ||೨೫||
ಅವಳಿಗಳು ಮೊಮ್ಮೊದಲ ವೈದ್ಯರು | 
ಕುವರ ಅಶ್ವಿನಿ ಎಂಬ ಪೆಸರಿಂ -| 
ದಿವಿಜ ಕುಲ ಶುಶ್ರೂಷೆ ಅಧಿಪತಿ ಎನಿಸಿ ಕೊಂಡಿಹರು ||೨೬||
ಕುದುರೆಯಾಗಿಹ ಸೂರ್ಯ ಸಂಜ್ಞೆ | 
ಉದಯಿಸಿದ ಪಶು ಯೋನಿಯಿಂ ಮುಂ - |
ಕ್ತದುವು ಎಲ್ಲಿದೆ ಎಂಬ ಚಿಂತೆಯ ಮಾಡಿ ನಡೆದಿಹರು ||೨೭||
ತಿರುಗುತಿಹ ತಾಯ್ತಂದೆಗಳ ಈ | 
ಪರಿಯ ಪಾವನ ಕುರಿತು ತಪದೊಳು | 
ಇರುತಿರಲು ಹನ್ನೆರಡು ಸಾವಿರ ವರುಷ ಶನಿ ಕಳೆಯೇ || ೨೮ ||
ಶಂಕರಗೆ ಆನಂದ ವಾಗಲು | 
ಕಿಂಕರನೆ ಶನಿ ತಪಕೆ ಮೆಚ್ಚಿದೆ | 
ಶಂಕೆ ಬಿಡುನೀ ಶಿವನು ಬಂದಿಹೆ ಕಣ್ಣು ತೆರೆಎಂದ || ೨೯||
ಚಂದ್ರ ಮೌಳಿಯ ನೋಡಿ ಪಿಂಗಳ | 
ಮಂದ್ರ ಸರದಲಿ ಪ್ರಾರ್ಥಿಸಿದ ಮ - | 
ಹೇಂದ್ರ ಗೌರಿ ವರನೇ ಶಂಭುವೆ ಶೂಲ ಖಟ್ವಾನ್ಗ || ೩೦ ||
ಗಂಗೆ ಜಡೆ ರುದ್ರಾಕ್ಷಿ ಧಾರಿ ಭ -| 
ಸ್ಮಾಂಗ ಸುಂದರ ಫಾಲ ನಯನನೆ | 
ಶೃಂಗಿ ಭೃಂಗಿ ಗಳಿಂದ ರಂಜಿಪ ಲಿಂಗ ಜಂಗಮನೆ || ೩೧ ||
ಮೈದಡವಿ ಮೇಲೆತ್ತಿ ಶಿವ ತಾ – | 
ನೈದೆ ಭಕ್ತಿಗೆ ಒಲಿದೆ  ಬೇಡುನಿ | 
ವೇದಿಸೆಂದಭಯವನು ಕೊಟ್ಟನು ನಮಿಸಿ ಶನಿರಾಯ || ೩೨ ||
ಏನು ಬೇಡಲಿ ದೇವ ನಿನ್ನೊಳು | 
ನೀನೆ ನನ್ನವನಾಗಿ ಉಳಿಯಲಿ | 
ಜ್ಞಾನ ದೃಷ್ಟಿಯ ಸರ್ವ ಅಂತರ್ಯಾಮಿ ನೀನಿರುವೆ || ೩೩||
ಬೇಕು ಬೇಡೆಂಬುವುದು ನನ್ನೊಳ | 
ಎಕೆ ನುಡಿಸುವಿ ದೇವ ಅರಿತವ | 
ಸಾಕು ತಿಳಿದವ ನೀಗಿಪುದು ವಾಂಛಿತವು ನಿನಾಗೇ || ೩೪||
ವಚನವ ಕೇಳಿ ಶಂಭುವು | 
ವದನ ನುಡಿ ಬಿತ್ತರಿಸಿ ಪೇಳಿದ | 
ಸದಯ ಹೃದಯನೆ ಮಂದ ನೀಲನೇ ಪೂರ್ತಿ ನಿನ್ನಿಷ್ಟ ||೩೫||
ನಿನ್ನ ತಾಯಿಯ ಪೂರ್ವ ರೂಪವು | 
ನಿನ್ನ ತಂಗಿಯು  ಯಮುನೆ ಮಿಂದಿರೆ | 
ನಿನ್ನ ಮನದಿಂಗಿತವು ಅಕ್ಕುದು ಇದುವೇ ಸಹಜಾಯ್ತು || ೩೬ ||
ವಾಜಿ ರೂಪದ ನಿನ್ನ ತಾಯಿಯ | 
ಹೆಜ್ಜೆ ಕೆಳಗದು ಲಾಳ ಗುರುತನು | 
ತಜ್ಜನಿತ ಚಿರ ಚಿತ್ತ ವಿರಿಸುತೆ ಶೋಧಿಸುವುದೆಂದ || ೩೭ ||        
ತಪದ ಫಲವಿದು ಅಲ್ಲ  ನಾನೇ -| 
ಸುಪ್ರಸನ್ನದಿ ದಯವು ಮಾದುತೆ | 
ಸಪ್ತಗ್ರಹ ಶ್ರೇಷ್ಟತೆಯು ನಿನಗಿದೆ ಎಲ್ಲ ಗ್ರಹಗಳಲಿ || ೩೮ ||
ತಪ್ಪು ಮಾಡಿರೆ ಶಿಕ್ಷೆ ವಿಧಿಸುವೆ | 
ತಪ್ಪು ಯಾವುದೆಂ ತಿಳಿಯ ಹೇಳುವೆ | 
ತಪ್ಪಿಗೆಡೆ ಮಾಡುತಿರೆ ನ್ಯಾಯದಿ ಶಾಸನವು ಖಚಿತ ||೩೯ ||
ಪೀಡೆಕೊಡುವುದರಲ್ಲಿ ಎಲ್ಲರ | 
ಕಾಡುಗ್ರಹಗಳ ನಡುವೆ ಶ್ರೇಷ್ಟನು | 
ನಾಡ ದೇವತೆ ನಡುಗುವರು ನೀ  ನೋಡೆ ವಿವಿಧದಲಿ || ೪೦ ||
ದೃಷ್ಟಿ ಬಲ ಬಹು ಉಗ್ರ ವ್ಯಗ್ರವು | 
ಕಷ್ಟ ಕಾರ್ಪಣ್ಯತೆಯು ಪುಟ್ಟಿಪ | 
ಇಷ್ಟ ನಿಷ್ಠ ಗಳೆಲ್ಲ ನಡೆವುದು ಡೊಂಕು ಸಾಗುಣಿಯ ||೪೧||
ತ್ರಯತ್ರಿOಶತಿ ಕೋಟಿ ದೇವತೆ | 
ಭಯವು ಪಡೆವರು ನಿನ್ನ ಕಂಡೊಡೆ | ಜಯಪಜಯಗಳು ಸೌಖ್ಯ ದುಃಖ ಗಳೆಲ್ಲ ನಿನ್ನಿಂದ ||೪೨ ||
ನಿಂದ ರಾಶಿಗೆ ಎರಡುವರೆ ಇರೆ | 
ಮುಂದು ರಾಶಿಗೆ ವಕ್ರ ದೃಷ್ಟಿಯು |
ಹಿಂದೆ ರಾಶಿಗೆ ಸೌಮ್ಯ ನಾಗುತ ಏಳುವರೆ ವರುಷ ||೪೩ ||
ಸರ್ವ ಗ್ರಹಗಳ ಮಧ್ಯ ಬಲ ಶಾ -| 
ಲಿರ್ವ  ಗ್ರಹ ಗಂಭೀರ ಉಗ್ರನು | 
ದರ್ಪ ಗೈಯುವ ನಿನ್ನ ಸರಿ ಇಲ್ಲೆಂದ ಗೌರಿಹರ ||೪೪ ||
ಪನ್ನೆರಡು ರಾಶಿಗಳ ಭೋಗಿಪ | 
ತನ್ನಡುವೆ ಎರಡೂವರೆ ವರುಷದಿ | 
ತನ್ನ ಸುತ್ತಿದ ಜೇಡನಂತೆ ಉದರದೊಳೆ ಬರುವಿ ||೪೫ ||
ಎರಡುವರೆ ವರುಷದಲಿ ಚಾಂಡಲ | 
ಚರಣದಿರಿಸುವಿ ಜನರ ಜೀವನ | 
ದುರಹಂಕಾರಕೆ ಪಾರುಪತ್ಯವ ಗೈವೆ ಶನಿ ಕುವರ ||೪೬ ||
ಸ್ಥಾಪಿಸಿದ ಲಿಂಗಕ್ಕೆ ನಿನ್ನಯ | 
ಔಪ್ಯ ನಾಮವು ಶನೈಶ್ವರ ವೆಂ-| 
ದಪ್ಪುದೈ ನಾನಿಟ್ಟ ಪೆಸರಿದು ಪೂರ್ಣ ರೂಪದಲಿ ||೪೭||
ಇಷ್ಟ ಲಿಂಗದು ಶನೈಶ್ಚರನಿಗೆ | 
ನಿಷ್ಠೆಯಿಂ ಪೂಜೆಯನು ಮಾಳ್ಪರ |  
ಕಷ್ಟ ಸಂಕಟ ದುರಿತ ದೂರಿ ಕರಿಸುವುದು ಎಂದ  ||೪೮||
ಕಡುಮಮತೆಯಲಿ ತಲೆಮೇಲೆ ಕೈಯನು | 
ಇಡುತೆ ಹರಿಸಿದ ಶುಭವನಿನಗಿದೆ | 
ಮೃಡನು ಅಂತರ್ಧಾನ ಗೌಪ್ಯನು ಆದನೆದರಿನಲಿ ||೪೯||
ಶನಿಯು ಸಾಷ್ಟಾಂಗವನೆ ಹಾಕಿದ | 
ಕೊನೆಗೆ ಉತ್ತರ ಪೂಜೆ ಮುಗಿಸಿಯೇ | ವಿನಯದಿಂದಲೇ ಹೊರಟು ನಡೆದನು ಮೇರುಗಿರಿ ಎಡೆಗೆ ||೫೦||
ಮಾತೃ ಸ್ಥಾನವು ಶೋಧಿಸುತೆ ಅಣು | 
ಮಾತ್ರ ಚಿತ್ತವು ಸುಳಿವು ಹೊಳವು ಗ - | 
ಳೆತ್ತಿ ಅತ್ತಲು ನೋಡುತಿರೆ ಕುರುಹೊಂದು ದೊರಕಿಹುದು ||೫೧||
ದೇವತೆಗಳಾ ಹೆಜ್ಜೆ ಗುರುತಿಸೆ | 
ಧಾವಿಸಿದ ಒಂದೆರಡು ಕಂಡವು | 
ಠಾವಿನಿಂ ರವಿ ಪಾದ ಎಂಬುದು ತಿಳಿದು ನಮಿಸಿದನು || ೫೨ ||
ಮುಂದೆ ಮುಂದೆಡ ಸಾಗುತಿರಲಾ | 
ನಿಂದ ತಾಯಿಯ ತಪದ ಸ್ಥಳದೊಳು | 
ಚಂದ್ರ ಲಾಳದ ಹೆಜ್ಜೆ ಎಂಟಡಿಗಳನು ಗುರುತಿಸಿದ ||೫೩||
ಲಾಳ ಗುರುತನು ಹುಡುಕಿ ನಡೆಯಲು | 
ಕಾಳ ವಿಂಧ್ಯದ ಕಪ್ಪು ಗಿರಿಯೆಡೆ | ನೋಳ್ಪುವುದರೋಳ್ ತಂಗಿ ಮನೆಯನು ಕಂಡ ಕ್ಷಣದೊಳಗೆ ||೫೪||
ತಂಗಿ ಕಂಡೊಡೆ ಹರುಷದಿಂದಲಿ | 
ಇಂಗಿತವು ಇದು ಏನು ಎಂದೊಳೆ | 
ಮಂಗಳದ ಸೂತ್ರಾಧಿಪತಿ ಕಾಳಿಂದ ಗಿರಿರಾಯ ||೫೫||
ಕಪ್ಪು ಹಸಿರಿನ ವರ್ಣ ತಿರುಗಿದ | 
ಒಪ್ಪು ಪತಿ ರೂಪವನು ಧರಿಸಿದ | 
ಇಪ್ಪ ತನ್ನಯ ಕತೆಯ ಪೇಳಿದ ಯಮುನೆ ಸೌಭಾಗ್ಯ ||೫೬ ||
ಅಣ್ಣ ತಿರುಗುವುದೇನು ಕಾರಣ | 
ಸಣ್ಣ ಮುಖವನೆ ಮಾಡಿ ಕುಳಿತಿಹೆ | 
ಬಣ್ಣ ಗೆಟ್ಟಿಹ ನನ್ನ ಬಗೆಗೆ ಚಿಂತೆ ನಿನಗಾಯ್ತೆ ||೫೭ ||  
ಹಸಿರು ನೀಲಿಹ ಪತಿಯು ವರ್ಣದಿ | 
ರಸವಿಸಿಯೇ ಹರಿದಿಹೆನು ಬೆಳ್ಳನ | 
ಹಸನ ನೀರದು ಕಪ್ಪು ವರ್ಣದಿ ತಿರುಗಿ ತಿರುಗಿರುವೆ ||೫೮||
ಓಘದಲಿ ಪೋದೆಡೆ ಮುಂದೆ ಗಂ -| 
ಗೌಘ ಕೂಡಿದೆ ಉದಯ ಚಲದೆಡೆ | 
ಬಾಗಿ ಸಾಗಿದೆ ಅಷ್ಟದಿಸೆಗಳ ವ್ಯಾಪಿಸಿದೆ ಮುಂದೆ ||೫೯ ||
ತಂದೆ ಕೈಪಿಡಿದೆನ್ನ ಪೃಥ್ವಿಯ | 
ಹೊಂದಿಸಿದ ಕಾಳಿಂದಿ ನಾಮವು | 
ಇಂದು ಪಡೆದೆನು ಸಪ್ತ ಸಾಗರ ಕೂಡಿ ಒಡನಾಡಿ ||೬೦||
ತಂಗಿ ಯಮುನೆಯೇ ಪ್ರಮಾದವೇ ತು -| ರಂಗರಾಗಿಯೇ ತಂದೆತಾಯಿ ಗ- | 
ಳಂಗ ಬದಲಿಸಿ ಹೋಗಿ ತಿರುಗುತೆ ಪೋದರವರೆಲ್ಲಿ ||೬೧||
ಎಂಬುದನು ಹುಡುಕುತಲೇ ನಡೆದಿಹೆ | 
ಅಂಬು ದೇವಿಯೇ ನಿನ್ನ ಕಂಡೆನು | 
ಮುಂಬರುವ ಕುರುಹನ್ನೇ ಅರಿತಿಹೆ ನೀನೆ ಪಾವನೆಯು ||೬೨ ||
ಹಯದ ರೂಹನು ಬದಲಿಸಲ್ಕೆಯು | 
ದಯದ ಉದಕಯು ನಿನ್ನದಾಗಿದೆ | 
ದಯದಿ ನಿನ್ನಯ ನೆನೆದೊಡನೆ ಬರಬೇಕು ಕೇಳೆಂದ ||೬೩ ||
ಲಾಳ ಹೆಜ್ಜೆಯ ಹುಡುಕಿ ಬಂದೆನು | 
ಕಾಳ ಪರ್ವತ ರಾಜ ಕಂಡೆನು | 
ತಾಳಿ ಕೊಳ್ಳೌ ತಿರುಗಿ ಬರುವೆನು ಹೊರಟ ಶನಿರಾಯ ||೬೪||
ಚಿತ್ತ ಐಕ್ಯತೆ ತಾಯ ಅಡಿಯೊಳು | 
ಮತ್ತೆ ಮುಂದಕೆ ನಡೆದು ನೋಡುತೆ | 
ಸುತ್ತರಿದ ನವಖಂಡ ಪೃಥ್ವಿಯ ಪರಿಘ ತಿರುಗಿದೆನು ||೬೫ ||
ಕಟ್ಟಕಡೆಯಲಿ ಉದಯಚಲದಡಿ | 
ದಿಟ್ಟಿ ಇಡುತಿರೆ ಎದುರು ಹಯಗಳು | 
ತಟ್ಟನೆಯೇ ನೆನೆ ತಂಗಿ ಯಮುನೆ ಹರಿದು ಬಂದಿಹಳು ||೬೬||
ಯಮುನೆ ಹರಿಯುತ ಒಲವಿನಿಂದಲಿ | 
ಶಮನ ಗೈದಳು ಹಯದ ರೂಹವ | 
ನಮನ ಗೈದರು ಶನಿಯುಯಮುನೆಯು ತಂದೆತಾಯರಿಗೆ ||೬೭||  
ತಾಯಿ ಸಂಜ್ನೆಯ ಅಪ್ಪಿ ಶನಿ ತಾ - | 
ಕಾಯ ಕಲ್ಪ ತರುವನ್ನು ನಂಬಿದ | 
ಪ್ರಿಯ ನಿನ್ನಯ ಪಾದ ಲಾಳವೇ ನನ್ನ ಮೂರುತಿಯು ||೬೮ ||
ಅಮರರೆಲ್ಲರು ಅಮರಪುರಿಯಿಂ | 
ಸುಮನ ವೃಷ್ಟಿಯ ಮಾಡಿ ಜಯ ಜಯ | ಚಮರವಾಡಿಸಿ ಸಂಜ್ಞಸುತ ಸಂಸ್ತುತನ ಕೊಂಡಾಡಿ ||೬೯||
ಕೋಲು ಕುದುರೆಯ ಮಾಡಿ ಆಡುವ |
ಬಾಲ ಚರ್ಮವು ತೀವ್ರ ಹೋಗಿರೇ |
ಲೋಲ ಸ್ವಾತಂತ್ರ್ಯಗುಣವದು  ಬ್ರಹ್ಮಾಸ್ತ್ರ ಒಳಗಿಟ್ಟು ||೭೦||
ಲೀಲೆ ಗೈಯುವಿ ಸರ್ವರಿಗನು -  |
ಕೂಲನಾಗಿರು ಸರ್ವ ಕಾಲದಿ. |
ಖೂಳರಿಗೆ ಪ್ರತಿಕೂಲನಾಗಿರು ಪ್ರಚುರನಾಗದಲೆ ||೭೧||
ಪಾಪ ಪುಣ್ಯಗಳೆರಡು ಅವರ ಸ್ವ - |
ರೂಪಗಳಿಗನುಸರಿಸಿ ಉಣಿಪ  ಪ- |
ರೋಪಕಾರಿ ಪರೇಶ ಪೂಷ್ಣಾನಂದ ಜ್ಞಾನ ಘನ||೭೨||
ಪುಣ್ಯ ಕರ್ಮಕ್ಕೆ ಸಹಾಯವಾಗುವ |
ಧನ್ಯರಿಗೆ ಕಲ್ಪಾದಿ ಸಕಲರ |
ಅನ್ಯ ಫಲಗಳ ನೀಡುತಿರು ತಾ ಕರ್ಮಫಲರೂಪ ||೭೩||
ಕುಂದು ಕೊರತೆಗಳಿಲ್ಲದಿಹ ಸ್ವಾ - |
ನಂದ ದಲೆ ನಿಷ್ಕಾಮ ಭಾವಕೆ. |
ಸಂದಿಸುತ ನೀಡುತಿರೆ ಕರ್ಮಾಜನ್ಯ  ಫಲಗಳನು ||೭೪||
ಶನಿಯ ನೆನವಿಗೆ ಅವನ ಲೋಕವೇ | 
ವನಿತೆ ಶತ ಕಂಕಣೆಯ ಕೂಡಿಯೇ | 
ಘನತೆಯಿಂ ಬಾಳಿದನು ದೇವತೆಗಳಿಗೆ ಮಿಗಿಲಾಗಿ ||೭೫||
ತಂದೆ ತಾಯಿಯ ಸೇವೆ ಗೈದನು | 
ಇಂದುಧರ ಪ್ರಸನ್ನ ನಾದನು | 
ಸಂದಿದನು ಶಿವ ಸನ್ನಿಧಾನದಿ ಶ್ರೇಷ್ಠ ಗ್ರಹನೆಂದು ||೭೬||
ವಿರಹಿಗಳಿಗಿದು ಒಂದು ಮಾಳ್ಪುದು | 
ತರುಳರೊಳು ನಿಷ್ಟೆಯನು ಪುಟ್ಟಿಪ |
ಐದುರುಳರಿಂ ರಕ್ಷಿಪುದು ಕೇಳೆ ಕಥೆಯು ಶನಿ ಜನುಮ ||೭೭|| 
ತಾತಾರ್ಯ ಮಹಿಪತಿಯು ಮಹರಠಿ |
ಹೇತು ಪೂರ್ವಕವಾಗಿ ಕನ್ನಡ |
ಮಾತಿನಿಂ ರೂಪಿಸಿದ ತುಳಸಾತ್ಮಜನು ಸಿರಿರಾಯ ||೭೮||
ಸರಳಗನ್ನಡ ಭಾಷೆಯಲಿ ಕಥೆ | 
ಬರೆಹದಿಂ ವರ್ಣಿಸಿದೆ ನ್ಯೂನತೆ - | 
ಬರದತೆರ ಅರ್ಥವನು ಬುದ್ಧಿಗೆ ನೀಡಿಅ ಶನಿದೇವ ||೭೯||
ಇಂತಿಶ್ರೀ ಶನೈಶ್ಚರ ಚರಿ ತಾ - | 
ದ್ಯಂತ ಸ್ಫೂರ್ತಿಯ ನೀಡುತಿರೆ ತಾ - | 
ನಾಂತು ಮಹತಿಯು ಗೈಮೆ ಶ್ರೀಮತಿ ಗೋವಿಂದರಾಜಮರ ||೮೦||
ಇತಿ ಪುರಾತಿಹದ ಕಥೆಗಳು | 
ಮಥಿಸಿ ಸೀತಾರಾಮ ತುಳಸಾ - | 
ಸುತನಸವಿಗತೆ  ದ್ವಿತೀಯದ ಶ್ರೀ ಕೃಷ್ಣ ಅರ್ಪಣೆಯು ||೮೧||

ಇಂತಿ ಶ್ರೀ ಶನೈಶ್ಚರ ಚರಿತಂ ಪುರಾಣದೋಳ್ ದ್ವಿತೀಯ ಸವಿಗಥಾ ಸಂಧಿ ಪರಿಪೂರ್ಣಂ ಶ್ರೀ ಕೃಷ್ಣಾರ್ಪಣಮಸ್ತು 




No comments:

Post a Comment