Friday, June 06, 2025

SHANAISHCHARA CHARITAM I ( 01- 82 ) ಶ್ರೀ ಶನೈಶ್ಚರ ಚರಿತಂ ೧

 SHANAISHCHARA CHARITAM  I  
( 01- 82)
                     ಶ್ರೀ ಶನೈಶ್ಚರ ಚರಿತಂ ೧
               || श्री शनैश्चर देवताभ्यो नमः ||

( ಕನ್ನಡ ಭಾಮಿನಿ ಮತ್ತು ವಾರ್ಧಿಕ ತ್ರಿಪದಿಗಳಲ್ಲಿ  ಒಟ್ಟು ಹತ್ತು ಸಂಧಿಗಳು  )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರ ಅಷ್ಟಕಂ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ ಸಹಿತ )

ಪ್ರಥಮ ಸವಿಗಥಾ ಸಂಧಿ ೧ 
( ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

ಶ್ರೀ ಗಣೇಶನ ನಮಿಸಿ ಬೇಡುವೆ |
ನೀಗಿಸೆಂದುಸುರುವೆನು ಸೇವೆಗೆ | 
ಶ್ಲಾಘಿಸುವೆ ಶ್ರೀ ಶನೈಶ್ಚರ ಮಹ ಚರಿತೆ ವಿಸ್ತರಿಸಿ  || ೧ ||
ವಾಗು ದೇವಿಯ ವಂದಿಸಿಯೇ ಭವ | 
ಭೋಗ ಭಾಗ್ಯವನೀವ ಪಿಂಗಳ- | 
ಮೋಘ ವರ್ಣನೆ ಮಾಳ್ಪ ಶಕ್ತಿಯು ಕೆಳ್ವೆ ಪ್ರೇರಣೆಯ  || ೨ ||
ಶ್ರೀ ಗುರುವೆ ಹರಿ ಬ್ರಹ್ಮ ಶಂಕರ | 
ಆಗು ಹೋಗುಗಳೆಣೆಯ ಸಾಗಿಪ | 
ಸಾಗರವೇ ಪ್ರಾರ್ಥಿಸುವೆ ಕೋಣಸ್ಥರಿವ ದೆಸೆಯಿಂದ  || ೩ ||
ಶ್ರೀ ಲಕುಮಿ ಗೋವಿಂದದೇವ ವಿ - | 
ಶಾಲ ಮರವಶ್ವತ್ಥ ರೂಪದ | 
ಓಲೈಸಿ ವಂದಿಸುವೆ ಕಾರ್ಯಕೆ ಯಶವನೀಯೆಂದು     || ೪ ||
ಶರಣ ಸಂತತಿ ಚರಣ ಸನ್ನಿಧಿ | 
ಕರುಣಿಸೆಂ ಬಯಸುತಲೆ ನುತಿಸುವೆ | 
ವರವಿರಲಿ ಬುಧರೆಲ್ಲ ಪ್ರೇರಿಸಿ ಕೃತಿಗೆ ಕೈಗೂಡಲಿ   || ೫ ||
ಮೂಲದೊಳು ಕಥೆ ಶಿವ ಭವಾನಿಗೆ | 
ಬಾಲ ಕುವರ ಷಡಾನನಾಲಿಸಿ | 
ಮೇಲು ಸ್ಕಂದ ಪುರಾಣದೊಳು ತಾ ಕಾಶಿಖಂಡೆಂದು ||೬ ||
ಇದನಗಸ್ತಿಯು ಲೋಪಮುದ್ರೆಗೆ  |  
ಬಾದರಾಯಣ ಶಿಷ್ಯರಲಿಯು |  
ಮೋದದಲಿ ಶಿವಶರ್ಮ ವಿಷ್ಣುಗಣಗಳಿಮ್ ಕೇಳ್ದ     || ೭ ||
ಕಾಶಿ ಖಂಡುಪಖಂಡ ವಿಂಶತಿ | 
ಶ್ರೀ ಶನೈಶ್ಚರಜನ್ಮ ಕಥೆಯದು | 
ಭಾಷೆ ಕನ್ನಡ ಪೇಳೆ ತಾ ಗೋವಿಂದ ಕೃಪೆಯಿಂದ      || ೮ ||   
ದಕ್ಷಿಣದಿ ದಾನವರ ಹಾವಳಿ | 
ಭಕ್ಷಿಸುತಲಿರೆ ಮಾನವರ ಕುಲ | 
ರುಕ್ಷ ಬುದ್ಧಿಯ ಕ್ರೂರ ಮತಿಗಳ ನಾಶ ಪಡಿಸಲ್ಕೆ || ೯ ||
ದಾನವರ ನೀಗಿಸುವ ಕೃತಿಯದು | 
ತಾನೇ ಅಮರರಿಗೆಲ್ಲ ಆಗದೆ | 
ಮಾನ ಶರ ಶಪದಪಿಯು ಕುಂಭೋದ್ಭವಗೆ ನೀಡಿದರು || ೧೦ ||
ದೇವತೆಗಳಾದೇಶ ದಂತೆಯೇ | 
ನೋವು ಕಾಶಿಯ ವಿರಹ ತಾಳದೇ | 
ಧಾವಿಸಿದ ದಕ್ಷಿಣದ ಪಥವನೆ ತಿದ್ದಲಾಗಸ್ತಿ    || ೧೧ ||
ಆತಾಪಿ ವಾತಾಪಿ ಇಲ್ವಲ  |  
ಘಾತಮಾಡಲಗಸ್ತಿ ಪೋಗುವ | 
ಪ್ರೀತಿ ಪರಿವಾರವನು ದಕ್ಷಿಣ ಭೀಮೆ ತಟದಿರಿಸಿ        || ೧೨ ||
ದಕ್ಷ ದಾರ್ಢ್ಯರ ಪರ್ಣ ಕುಟಿರವು | 
ವೃಕ್ಷ ದ್ವಯ ಅಶ್ವತ್ಥ ನಿಂಬಕ  | 
ಅಕ್ಷಯದ ಶಿಲೆ ಉತ್ತುಂಗ ಪೀಠದಿ ವೃಕ್ಷ ರಾಜಮರ    || ೧೩ ||  
ಸತ್ವಗುಣ ಗೋವಿಂದ ರಾಜನ | 
ನಿತ್ಯ ಪಾಲಿಪನೆಂದು ತರು ಅ - |  
ಶ್ವತ್ಥ ದಡಿಯೊಳು ಮೂರ್ತಿಯ ಸ್ಮರಿಸಿಪೋಗಿಪನು  || ೧೪ || 
ಅಸುರವಧೆಯನು ಮುಗಿಸಿಕೂಡಿದ | 
ಅಸಮಮರ ಗೋವಿಂದರಾಜನ | 
ಬೇಸಸಿ ಪೊರಟನು ಕಾಶಿಖಂಡದ ಕಥೆಯ ಪೇಳುತಲೇ  || ೧೫ ||
ಕೇಳು ಲೋಪಾಮುದ್ರೆ ಸತಿಯಳೆ | 
ಕೇಳುತಿಹ ಶಿವಶರ್ಮ ಗಣರಿಗೆ | 
ಕಾಳ ಕಂಕಣ ವಲಯವಾಗಿಹ ಲೋಕ ಯಾವುದಿದು  || ೧೬ ||
ಎಂದು ಕೇಳಲು ವಿಷ್ಣು ಗಣರಿಂ |  
ತೆಂದು  ವದಿಸಿದ ಶ್ರೀ ಶನೈಶ್ಚರ | 
ಮಂದ ಗ್ರಹದ ಲೋಕ ಕಾಣುವುದೆಂದು ವರ್ಣಿಸುತ  || ೧೭ ||
ಕೃತ ಯುಗದ ಆರಭ್ಯ ಕಾಲದಿ | 
ಚತುರ ಮುಖಸುತ ಪ್ರಜಪತಿಯ ಅತಿ | 
ಚತುರತೆಯ ಗುಣದಿಂ ದಕ್ಷ ಬ್ರಹ್ಮ ಹೆಸರಾದ || ೧೮|| 
ಕನ್ಯೆ ಸಂಜ್ಞಯ ದಕ್ಷ ಬ್ರಹ್ಮನು | 
ಭಾನು ನಾರಾಯಣಗೆ ಇತ್ತು ವಿ - | 
ಧಾನ ಪೂರ್ವಕ ಶುಭ ವಿವಾಹವು ಜರುಗಿಸಿರಲಾಗಿ    || ೧೯ ||
ತರಣಿ ಸಂಜ್ಞಯರಲ್ಲಿ ಜನಿಸಿದ | 
ಹಿರಿಯ ಮಗು ಕೃತಾಂತ ಕಾಲನು | 
ದೊರೆಯು ಯಮಲೋಕದಲಿ ದಕ್ಷಿಣ ಪೂರ್ಣ ಅಧಿಕಾರಿ || ೨೦ ||
ದ್ವಿತೀಯ ಪುತ್ರನೆ ಶ್ರೀ ಶನೈಶ್ಚರ - |  
ತೃತಿಯದಿಂ ಕ್ರಮ ಕ್ರಮದಿ ಪುಟ್ಟಿತ - | 
ಪತಿ ಭದ್ರೆಯು ಕಾಲಿಂದಿ  ಸಾವಿತ್ರಿ ಕನ್ಯೆಯರು  ||೨೧ ||  
ವಿಷ್ಣುವಿಗೆ ಕಾಳಿಂದಿ ಅರ್ಪಿಸಿ |  
ಸೃಷ್ಟಿ ಕೃತುಗೆ ಸಾವಿತ್ರಿಯಿತ್ತು |  
ಪೂಷ್ಣ ದೇವನು ಮದುವೆಯನು ಮಾಡಿದನು ವೈಭವದ || ೨೨  || 
ಧರೆಯ ಮೇಗೆಡೆ ರವಿಕುವರಿಯರು |  
ಗಿರಿಯಸ್ತಮದಿ ಭದ್ರೆಯಮುನೆಯು | 
ಹರಿದುಹೊಳೆ ಸಾವಿತ್ರಿತಪತಿಯು ಉದಯಚಲ ದುದಿಸಿ  || ೨೩ || 
ರವಿಯ ಸಹವಾಸದಲಿ ಸಂಜ್ಞೆಯ | 
ಯುವತಿ ಅವತೆಯು ಬಾಡುತಿರೆ ಬಾ - | 
ಳುವುದೇ ಕಷ್ಟವು ಪ್ರಖರ ಉಷ್ಣತೆ ಕಿರಣಗಳ ಬಳಿದು || ೨೪ ||
ಸವೆಯುತಿಹ ದೇಹವನು ಸಂಜ್ಞೆಯು | 
ಅವತೆ ನೋಡಿರೆ ದುಃಖದಿಂ ಬಲು | 
ಕವಿದು ಚಿಂತೆಯು ಚಿತೆಯ ರವಿಯಿಂ ಬಳಲಿ ಬೆಂಡಾಗಿ ||೨೫  ||
ತಾಳದೆಯೇ ಸತಿಸಂಜ್ಞೆ ತನ್ನಯ | 
ಹಾಳುಬಾಳುವೆ ಕುರಿತು ಹಳಿದಳು |   
ಖುಳ್ಳ ಯುಕ್ತಿಯು ಯೋಜಿಸಿದಳಾ ತನ್ನ ಛಾಯೆಯೋಳು ||೨೬ ||
 ಛಾಯೇ ಸಂಜ್ಞೆ ಯ ವರ್ಣ ರೂಪದ | 
ಮಾಯೆ ಮೂರುತಿಯಾಗಿ ರೂಪಿಸಿ |  
ಕಾಯ ಕಾಂತಿಯು ಏಕರೂಪ ಸವರ್ಣ ನಿರ್ಮಾಣ  || ೨೭ ||
ಪ್ರತಿಯ ರೂಪ ಸವರ್ಣೆ ನಿರ್ಮಿಸಿ | 
ಶ್ರುತಿಸಿ ಆಜ್ಞೆಯ ನಿತ್ತಳೀಪರಿ |  
ಸತಿಯು ನೀ ರವಿಗಾಗಿ ರತಿ ಸುಖ ಪಡೆಯುತಿರುಯೆಂದು  || ೨೮ ||
ಮಿತ್ರ ಸತಿಯಾಗಿರುತೆ ನೀನು | 
ಗೊತ್ತು ಗುರಿ ತಪ್ಪಿಸಲು ಬೇಡ | 
ಕುತ್ತು ಬಂದರೆ ನನ್ನ ಸ್ಮರಣೆಯು ಮಾಡು ನೀಗಿಪೆನು  || ೨೯ ||
ಸೂರ್ಯನೊಂದಿಗೆ ವಿಷಯಸುಖವನು | ತೂರ್ಯದಿಂದುಪಭೋಗ ಗೊಳ್ಳುತೆ | 
ಕಾರ್ಯಕಂಟಕ ವೆನಿಸೆ ನೆನೆವುದು ನನ್ನಪೆಸರಿಂದೆ || ೩೦ || 
ಆಜ್ಞೆ ಛಾಯೆ ಸವರ್ಣೆ ಗಿತ್ತು ತಾ - | 
ಸಂಜ್ಞೆ ತಂದೆಯ ಮನೆಯ ಸೇರಲು | 
ಸೂಜ್ಞತೆಗೆ ನ್ಯೂನತೆಯು ಬರುವುದು ಕಂಡ ದಕ್ಷ ಪತಿ || ೩೧ ||
ಮಗಳೇ ನೀ ಬಂದಿಹುದು ಯಾಕದು ? | 
ಬಗೆಯು ಎನಿಹುದೆಂದು ಕೇಳಲು | 
ಖಗನ ಪ್ರಖರತೆ ಕುರಿತು ಹೇಳಲು ತಂದೆ ಬೋಧಿಸಿದ || ೩೨ ||
ಹಿರಿಯಳಾಗಿಹ ಮೇಲೆ ಕನ್ಯೆಯ | 
ಹಿರಿಯನಲಿ ಲಗ್ನವನು ಮಾಡಿರೆ | 
ಸರಿ ಸಮಾನರು ತಂದೆತಾಯಿಗೆ ಮಕ್ಕಳೆಂಬುವರು || ೩೩ ||
ಐದು ಮಕ್ಕಳ ಹೆತ್ತ ಹಿರಿಯಳೆ | 
ಐದಿದೆಯೆ ಪತಿಯಿಂದ ಪರದಲಿ | 
ಐದೆತನವಲ್ಲಹುದು ನಿನ್ನಯ ಕೃತಿಗೆ  ಧಿಕ್ಕಾರ ||೩೪ ||
ಕೇಡಿರಲಿ ಒಳ್ಳೆಯದೇ ಇರಲಿ | 
ಬೇಡಿರಲಿ ಬಿಡುವಾಗಿಯಾಗಲಿ | 
ನಾಡ ತಿರುಗದೆ ಪತಿಯೆ ಪರದೈವೆಂದು ಬಗೆಯುವುದು  || ೩೫ ||
ಮದುಯಾಗಿಹ ಮಗಳು ತನ್ನಯ | 
ಸದನದಲಿ ನಲಿನಲಿಯುತಿರುವುದು | 
ಕದನ ತೆಗೆಯುತ ಎರಡನೆಯ ಸ್ಥಳದಲ್ಲಿ  ಬೇಡುವುದು || ೩೬ ||
ತಾಯಿ ತಂದೆಯ ಸರಿಯೇ ನೀವಿರೆ | 
ಗಾಯಗೊಂಡರು ನಿಮ್ಮ ಸಂಸಾ - |  
ರಾಯತದ ಹೊರ ಬಾರದಂತೆಯೇ ಸಹಿಸಿ ನಡೆಯುವುದು || ೩೭ ||
ಮನವು ಚಂಚಲ ಸ್ಥಿರವೆ ಇರಲಿ | 
ಘನವು ತನ್ನಯ ಮನೆಯು ಪಿಡಿದಿರೆ | 
ವಿನಃ ವೇಶ್ಯೆಯ ವೃತ್ತಿಗೆಳೆಯುವ ದೀ ಮನವು ಶುನಗ || ೩೮ ||
ಋತುಮತಿಯು ಆಗಿರಲು ಮಗಳನು | 
ಪತಿಯಮನೆ ಹೊರತಾಗಿಇರುವುದು | 
ಪತಿತಪಾಪಿಯು ಎನಿಪುದೂ ಇದು ತಂದೆಮನೆ ಉಂಟು || ೩೯ ||
ಹೆಣ್ಣು ಪುಣ್ಯದ ಪಣತಿ ದೀಪವು | 
ಬಣ್ಣ ಮೀರಲು ಕೋಟಿ ಕುಲಗಳ | 
ಗಣ್ಯವೆನೆ ನರಕದೊಳು ಬಿಳುವುದಿರಲು ನಿನ್ನಿಂದ || ೪೦ ||
ತವರಿನಲಿ ಹಿರಿ ಹೆಣ್ಣು ಇರಲದು | 
ಭವಿಸೆ ದೋಷವು ತಂದೆ ತಾಯಿಗೆ | 
ಯಾವ ತೀರ್ಥವು ಇಲ್ಲ ಶಕ್ಯವು ಪಾವನಾಗಲ್ಕೆ || ೪೧ ||
ಬೆಳೆದು ನಿಂತಿಹ ಕುದುರೆ ನೀನಿಹೆ | 
ಹಳಿದು ಪತಿಯನು ತವರು ಸೇರಿದೆ | 
ಕೀಳ ಕರ್ಮಕೆ ನೀನೆ ಹಯ ರೂಪದಲಿ ಚರಿಸೆಂದ || ೪೨ ||
ತಂದೆ ದೂಡಿದ ಹಳಿದ ಶಾಪಕೆ |  
ಬೆಂದುಕೇಳೆ ವಿಶಾಪ ಸಂಜ್ಞೆಯು | 
ಎಂದು ರವಿ ನೆನಪಿನಲಿ ಬರುವನೋ ಹಯದರೂಪದಲಿ || ೪೩ ||
ಬಂದು  ಅಂತಃ ಕರಣದಲಿ ತಾ - | 
ಚಂದ ಚಕ್ಕಂದವನು ಮಾಡಲು | 
ಬಿಂದು ಮೂಗಿನ ಮಕ್ಕಳಾದೊಡೆ ಪಾವನೆಯು ನೀನು || ೪೪ ||
ವಿಧವಿಧದಿ ತಿಳಿತಿಳಿಸಿ ದಕ್ಷನು  | 
ಒದವಿದನು ನುಡಿನೀತಿ ಮಾತನು | 
ಹೃದಯದುಃಖವ ತಾಳದೆಯೇ ಅಳುತಳುತ ನಡೆದಿಹಳು || ೪೫ ||
ತಂದೆ ತಾಯಿ ಗಳಾಜ್ಞೆ ಪಾಲಿಸಿ | 
ಸಂದಿಸಲು ಪತಿಪಾದ ಪಾವನ | 
ಎಂದರಿಯದೆಯೇ ಪಾಪಗುರಿ ಮಾಡಿದೆನು ನಾನಿಂದು || ೪೬ ||
ಬಿಟ್ಟು ಬಂದವಳೆಂದು ನೆರೆಹೊರೆ | 
ಕೆಟ್ಟ ದೃಷ್ಟಿಲೆ ನೋಳ್ಪರೆಲ್ಲರು | 
ಕೊಟ್ಟ ಪೆಣ್ಣದು ಕುಲದ ಹೊರತಾಗಿರುವುದೆಂಬುವುರು  || ೪೭ ||
ಪತಿಯ ಮನೆ ಸ್ವಾತಂತ್ರ್ಯ ತಪ್ಪಿಸಿ |  
ಹತ ಪರಾಙಮುಖಿ ಪರಾಧೀನತೆ | 
ಮತಿಹೀನ ವಿಧವೆ ತೆರ ಎನ್ನಯ ಬಾಳು ಬರಿದಾಯ್ತು || ೪೮ ||
ಖಿನ್ನ ಮಾನಸಳಾಗಿ ದೇಹಕೆ | 
ವಹ್ನಿ ಯುಗ್ಗಲಿ ಉರಿದು ಹೋಗಲಿ | 
ಇನ್ನು ಜೀವಿಸಲೇನು ಫಲವು ಹೆಣ್ಣು ಜನ್ಮಕ್ಕೆ   || ೪೯ || 
ದಕ್ಷ ನುಪದೇಶವನು ಆಲಿಸಿ | 
ರಕ್ಷಣೆಯು ಇಲ್ಲೆಂದು ಹೊರಟಳು | 
ವೀಕ್ಷಿತವು ಒದಗಿಹುದು ಎಂದೆನುತಳುತ ನಡೆದಿಹಳು  || ೫೦ ||
ದೇಟು ತಪ್ಪಿದ ಹಣ್ಣು ಕೊಳೆವುದು | 
ಮೇಟಿ ಇಲ್ಲದ ಕರುವು ಕಳೆವುದು | 
ದಾಟಿ ಹೊಸಲನು ತುಳಿದು ಹೊರಗಾಗಿರುವ ದುಃಖ ದಲಿ || ೫೧ ||
ಅಡವಿಯೊಳು ಏಕಾಂಗಿ ಬಾಲೆಯು | 
ನಡೆದು ಸಾಗಲು ಕಾಕ ಕಾಮಿಕ | 
ಕಡೆಯ ನೋಟಕೆ ಗುರಿಯುಆಗುವ ವೇಳೆ ಬಂದೊದಗೆ  || ೫೨ ||
ಮನೆಗೆ ಪೋದರೆ ಮೋಸ ತಿಳಿವುದು | 
ದಿನಕರನ ಕೋಪವನೆ ಸಹಿಸೆನು | 
ಶುನಗ ತಲುಪದು ಎಲ್ಲಿ ಅಗಸರ ಮನೆಗು ಹಳ್ಳಕ್ಕೂ  || ೫೩ ||
ಈ ಪರಿಯೋಳಾಲೋಚಿಸುತಲಾ | 
ಪಾಪಿ ನಾನೆಂದೆನುತ ಅಡವಿಯ | 
ರೂಪ ಪಲ್ಲಟ ವಾಗುದೇಸರಿ ಎಂದು ತಾ ತಿಳಿಯೇ || ೫೪ ||
ಕಳ್ಳಕಾಕರ ಕಾಮಿಕರ ಕೆಂ - | 
ಗಣ್ಣ ದೃಷ್ಟಿಗೆ  ಬೀಳದಾಪರಿ | 
ಮಾಳ್ಪುದೆಂದೆನುತಿರಲು ಆರ್ಕ ಧ್ಯಾನದೊಳು ಸತಿಯು  || ೫೫ ||
ಕೊನೆಗೆ ಭಯದಲಿ ನಡುಗಿನುಡಿದಳು | 
ದಿನಕರನೆ ಖಗ ಭಾನು ಭಾಸ್ಕರ | 
ಎನಗೆನೀನೆ ಗತಿಯು ಪತಿಯೆಂದೆನುತೆ ಕೈಮುಗಿದು || ೫೬ ||  
ಚೆಲುವೆ ಹಯರೂಪವನು ತಾಳಿತು | 
ಒಲುಮೆ ತೃಣದೊಳು ಪೂರ್ಣವಾಗಿಯೇ | 
ಗೆಲುಮೆ ಎನಿಸಿತು ವೃತೆಗೆ ತಾನಿದು ಹೇಯಹಯವೆನದೇ || ೫೭ ||  
ಪೂರ್ವ ಪ್ರಜ್ಞೆಯ ಉಳಿಸಿ ಹಯ ತಾ | 
ನೋರ್ವಳೆಯೇ ರವಿ ಧ್ಯಾನ ತಪವನು | 
ತೂರ್ಯದಿಂ ನಡೆಸಿಹಳು ನಿರಾಹಾರ ನಿಶ್ಚಲದಿ || ೫೮ ||   
ರವಿಗೆ ಸಂಶಯ ಬರದೆ ಬಹುವಿಧ | 
ಸವಿಯ ದಿನಗಳ ಕಳೆಯುತಿರಲಾ | 
ಸವರ್ಣಿಯನೆ ನಿಜ ಸಂಜ್ಞೆ ಎಂದರಿದಿಹನು ವಿಷಯದಲಿ || ೫೯ ||
ಗರತಿಯಾಗಿಹ ಛಾಯೆ ವರ್ಣೆಯು | 
ಸರತಿ ಕಾಯದೆ ಪೂಷ್ಣ ಮೋಹಿಸಿ | 
ಹೆರಿಗೆಯಾದಳು ಏಳು ಮಕ್ಕಳ ತಾಯಿ ತಾನಾಗಿ || ೬೦ ||
ಶ್ರಾದ್ಧ ಋಷಿ ಮನು ವ್ಯತಿಪಾತನು | 
ಅರ್ಧಯಾಮಕು ಲಿಕರು ಪುತ್ರರು | 
ಭದ್ರೆ ವೈಧೃತಿ ಜನಿಸಿ ಸವರ್ಣೆ ಕನ್ಯೆಯರು ||೬೧|| 
ಕೆಲವುದಿನಗಳು ಕಳೆಯೇ ಮಕ್ಕಳು | 
ಮಲಮಕ್ಕಳಿಂ ಪತಿಯ ಮಧ್ಯದಿ | 
ವಿಲಸಿತದಿ ಮಿಲಿಮಿಲಿತಳಾಗಿರೆ ತನ್ನ ಬಾಳಿನಲಿ ||೬೨||
ಒಂದುದಿನ ಶನಿ ಹಸಿವಯಿಂದಲಿ | 
ಕಂದಕಡು ಹಟಮಾಡಬೇಡಿದ | ತಿಂದುಕೊಳ್ಳುವಕುರಿತು ಕೊಡು ಎಂದೆನುತೆ ಕೇಳಿದನು||೬೩ ||
ಪೂಜೆ ನೈವೆದ್ಯಗಳು ಮುಗಿಯಲಿ | 
ತೇಜರಾಜರು ಬಂದಬಳಿ ಕೀ | 
ಭೋಜನವ ನೀಡುವೆನು ತಾಳು ಎಂದಳಾ ತಾಯಿ ||೬೪ ||
ಮೊದಲು ನನಗೆಡೆ ಮಾಡಿಕೊಡು ನೀ| ಉದರದುರಿಯನು ತಾಳೆ ನಾನೇಂ |
ದೆದುರಿಸಿದ ಕೆಂಗಣ್ಣ ಕಿಡಿಗಳ ಬಾಲ ಶನಿ ದೇವ ||೬೫ ||
ಸಲುಗೆಯಿಂದಲಿ ಕಂದ ಪಿಂಗಳ | 
ಬಲದ ಕಾಲನೆ ಎತ್ತಿ ಒದೆದನು | 
ನಲುಮೆಯರಿಯದೆ ಸವತಿ ಭಾವನೆ ವ್ಯಕ್ತ ಮಾಡಿದಳು ||೬೬||
ಎಲವೋ ಶನಿ ನೀ ನನ್ನ ಮೇಗೆಡೆ | 
ಛಲದಿ ಕೆಂಗೆಣ್ಣ ಗಳ ತಿರುವಿದಿ | 
ಬಲದ ಕಾಲನು ಎತ್ತಿದುದು ತಾ ಬತ್ತಿ ಹೋಗಿರಲಿ ||೬೭ ||
ತಾಯಿ ಮನ್ನಣೆಬಿಟ್ಟು ಒದೆಯುವಿ |
ಹೇಯಕಾರ್ಯಕೆ ಮನವ ಒಪ್ಪಿತೆ | 
ಮಾಯೆ ಮೋಹವ ಅರಿಯದಿಹ ಹುರಿಗಾಲ ಕಾಲನೆ ನೀ ||೬೮ ||
ಹೆಳವನಾಗೆಲೋ ಒಲುಮೆ ಬೇಡೆಲೋ | 
ಹಳಿದು ಶಾಪವ ಕೊಟ್ಟುಬಿಟ್ಟಳು | 
ಅಳುತೆ ತಾಯಿಯ ಬಗೆಗೆ ಸಂಶಯಕಂಡ ಕಂದ ಶನಿ ||೬೯ || 
ಕಳವಳದಿ ಶನಿ ತಂದೆ ಎಡೆ ನಡೆ | 
ಗಳುಹಿದನು ಹಳಿ ಹಳಿದ ಶಾಪವ |
ತಿಳುಹಿ ತಾಯಿಯ ಬಗೆಗೆ ಸಂಶಯ ಬರುವುದೆನಗೆಂದ ||೭೦ ||
ಪಿಂಗಳನ ಕಂಗಳದಿ ಕಂಬನಿ | 
ಯಂಗಳನು ಗಲಿತವನು ಕಂಡೊಡೆ | 
ಹಿಂಗಿಸಲು ಹಟವನ್ನು ಕೇಳಿದ ನುಡಿಯ ರವಿ ರಾಯ || ೭೧ || 
ಸುತಗೆ ಶಾಪವ ನೀವ ಘಟನೆಯು | 
ಮಾತೃವೃತ್ತಿ ಗಧರ್ಮ ವೆನಿಸಿತು | 
ಮಾತುಮೊದಲಿದೆ ಲೋಕದೊಳ್ ಕೇಳಿದುದು ಅಚ್ಚರಿಯ ||೭೨ ||
ಮಗನ ಹಟಕೆದುರಾಗಿ ಶಾಪವ | 
ನಿಗುವ ತಾಯಿಯು ನಿಜವೊಸುಳ್ಳೋ | 
ಬಗೆಯು ಸುಜ್ಞಾನದೊಳು ದೃಷ್ಟಿಯನಿರಿಸಿ ನೋಡಿದನು ||೭೩||
ತಿಳಿದು ಅಂತರ್ಜ್ಞಾನ ದಿಂದಲೇ | 
ಉಳಿದ ಛಾಯೆ ಸವರ್ಣಿ ಸಂಜ್ಞೆಯು | 
ಅಳಿದು ಹೋಗಿದ ರೂಪ ತನು ಹಯವಾಗಿ ತಪದಲ್ಲಿ ||೭೪||
ಮಗನ ತಿಳುವಳಿಕೆಯನು ಗ್ರಹಿಸಿಯೇ | 
ಖಗನು ಕೇಳಿದ ವರ್ಣೆ ಸತಿಯಳ | 
ನಿಗಿನಿಗಿಪ ಬಲು ಕೆಂಡಕೋಪದಿ ಬಂದು ಕೇಳಿದನು ||೭೫ ||
ಮೊಸದಂದಲೇ ಇರುವ ನೀನು | 
ವಾಸಮಾಡಿದೆ ಯಾರು ಪೇಳದು | 
ನೇಸರನು ನಿಜ ಕೇಳೆ ತಾನದು  ವರ್ಣೆ ಪೇಳಿದಳು  ||೭೬||
ನಾನು ಸಂಜ್ಞೆ ಯ ದೇಹ ನೆರಳು | 
ತಾನೇ ನಿರ್ಮಿಸಿ ನನ್ನ ನಿರಿಸಿದ | 
ಭಾನು ಸೇವೆಯ ಹಚ್ಚಿ ಹೋದಳು ಸಂಜ್ನೆದೇವಿಯು ತಾ ||೭೭ ||
ಗರತಿ ಸರತಿಯು ನನ್ನ ಏಳು | 
ವರಕುಮಾರರು ಕುವರಿಯವರು | 
ಇರುವ ನನ್ನೆಡೆ  ದೋಷವಿಲ್ಲವು ವರ್ಣೆ ಪೇಳಿದಳು  || ೭೮|| 
ಬಳಿಕ ಸೂರ್ಯನು ಶನಿಗೆ ಪೇಳಿದ | 
ತಿಳಿಯುದೀಕೆಯು ತಾಯಿ ಸರಿ ಎಂ | 
ದಳಯು ಶಾಪವು ವ್ಯರ್ಥ ವಾಗದೆ ಹೆಳವತನವಹುದು ||೭೯||
ಸರಳಗನ್ನಡ ಭಾಷೆಯಲಿ ಕಥೆ | 
ಬರೆಹದಿಂ ವರ್ಣಿಸಿದೆ ನ್ಯೂನತೆ - | 
ಬರದತೆರ ಅರ್ಥವನು ಬುದ್ಧಿಗೆ ನೀಡಿ ಶನಿದೇವ ||೮೦||
ಇಂತಿಶ್ರೀ ಶನೈಶ್ಚರ ಚರಿ ತಾ - | 
ದ್ಯಂತ ಸ್ಫೂರ್ತಿಯ ನೀಡುತಿರೆ ತಾ - | 
ನಾಂತು ಮಹತಿಯು ಗೈಮೆ ಶ್ರೀ ಗೋವಿಂದರಾಜಮರ ||೮೧||
ಇತಿ ಪುರಾತಿಹದ ಕಥೆಗಳು | 
ಮಥಿಸಿ ಸೀತಾರಾಮ ತುಳಸಾ - | 
ಸುತನಸವಿಗತೆ  ಪ್ರಥಮದ  ಶ್ರೀ ಕೃಷ್ಣ ಅರ್ಪಣೆಯು ||೮೨||

ಇಂತಿ ಶ್ರೀ ಶನೈಶ್ಚರ ಚರಿತಂ ಪುರಾಣದೋಳ್ ಪ್ರಥಮ ಸವಿಗಥಾ ಸಂಧಿ  ಪರಿಪೂರ್ಣಂ. ಶ್ರೀ ಕೃಷ್ಣಾರ್ಪಣಮಸ್ತು 
  



No comments:

Post a Comment