Sunday, August 10, 2025

PARIMALARYA. ಪರಿಮಳಾರ್ಯ

                             ಪರಿಮಳಾರ್ಯ

ಶ್ರೀ ಗುರುಭ್ಯೋ ನಮಃ ಹರಿ: ಓಂ 

ಪರಿಮಳಾರ್ಯರೆಂದರೇನೇ ಜ್ಞಾನ ಪರಿಮಳ

ಜ್ಞಾನ ತೃಷೆಯ ನೀಡಿರೆಮಗೆ ಹರಸಿ ಮಂಗಳ IIಪII

ಮಧ್ವಮತದ ತೋಟದಲ್ಲಿ
ಬೆಳೆದ ನೂರು ಸಸಿಗಳಲ್ಲಿ
ಸದಾಕಾಲ ಅರಳಿನಿಂತ 
ವಿವಿಧ ರಂಗ ಸುಮಗಳಲ್ಲಿ
ಘಮಿಸುತಿರುವ ಪರಾ ಸುಖದ ಜ್ಞಾನ ಪರಿಮಳ  II ೧ II

ದ್ವೈತ ಪಂಥದಬ್ಧಿಯಿಂದ
ತತ್ವವೆಲ್ಲ ಆವಿಯಾಗಿ
ಯತಿವರೇಣ್ಯರಿಂದ ಘನಿಸಿ
ಸುಧಾ ನಾಮ ಹನಿಗಳಾಗಿ
ಎದೆಗೆ ಸುರಿವ ಅಮರ ವರದ ಜ್ಞಾನ ಪರಿಮಳ  II೨II

ಶ್ರವಣದಿಂದ ಇಳಿವ ಜ್ಞಾನ
ಮನನದಿಂದ ಉಳಿವ ಜ್ಞಾನ
ಧ್ಯಾನದಿಂದ ಬೆಳೆವ ಜ್ಞಾನ
ಭಕ್ತಿಯಿಂದ ಹೊಳೆವ ಜ್ಞಾನ
ಜ್ಞಾನಸೂರ್ಯ ರಾಘವೇಂದ್ರರೆಂಬ ಪರಿಮಳ   II೩II

ಹರಿಯ ನಾಮ ಕ್ಷೀರದಿಂದ 
ಜಪಿಸಿ ತಪಿಸಿ ಕೆನೆಯ ತೆಗೆದ 
ಮಥನಿದಂಡದಿಂದ ಕಡೆದು 
ಕೃಷ್ಣನೆಂಬ ಬೆಣ್ಣೆ ಪಡೆದ 
ಜಾನಕೀಪ ರಾಮನನ್ನು ನುತಿಪ ಪರಿಮಳ ।। ೪ ।।
ಶ್ರೀ ಕೃಷ್ಣಾರ್ಪಣಮಸ್ತು 

                                          - ಜಾನಕಿರಾಮ

No comments:

Post a Comment