Showing posts with label DEE. Show all posts
Showing posts with label DEE. Show all posts

Wednesday, February 15, 2023

DEEPAAVALI ದೀಪಾವಳಿ ಹಬ್ಬ

 DEEPAAVALI  ದೀಪಾವಳಿ 

ಜಗತ್ತಿನಾದ್ಯಂತ ವಿಶಿಷ್ಟವಾಗಿ ಆಚರಿಸುವ ಹಬ್ಬ. ದೀಪಾವಳಿ ಅಂಗವಾಗಿಪಾಂಡವ ಪೂಜೆಯನ್ನು ಸಂಭ್ರಮದಿಂದ ಸಂಕೇತವಾಗಿ ರಾಕ್ಷಸನ ಹೊಟ್ಟೆಯಲ್ಲಿ ಪಟಾಕಿ ಇಟ್ಟು ಸಿಡಿಸಲಾಗುತ್ತದೆ . ಗೋಪೂಜೆ ನೆರವೇರಿಸುವ ಶುಭ ಕೋರಿ. ಗೋವಿನ ಸೆಗಣಿಯನ್ನು ಪೂಜಿಸುವ ಮೂಲಕ ಧನ-ಕನಕ ಪ್ರಾಪ್ತಿಯಾಗಲಿ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಲಾಗುತ್ತದೆ.

ದೀಪಾವಳಿಯ ಮೊದಲ ದಿನವೆಂದು ಧನ ತ್ರಯೋದಶಿ,ಜಲಕುಂಭ ತ್ರಯೋದಶಿ ಅಂದರೆ ನೀರು ತುಂಬುವ ಹಬ್ಬ, ಆ ದಿನ ಸಂಜೆಯ ಸಮಯದಲ್ಲಿ ದೊಡ್ಡ ಹಿತ್ತಾಳೆಯ ತಾಮ್ರದ ಅಥವಾ ತಮ್ಮಲ್ಲಿರುವ ಯಾವುದೇ ಪಾತ್ರೆಯಲ್ಲಿ ನೀರು ತುಂಬಿ ಅರಿಶಿಣ ಕುಂಕುಮ ಹಚ್ಚಿ ಪೂಜಿಸಲಾಗುವುದು. ಮರುದಿನ ನರಕ ಚತುರ್ದಶಿ ನಸುಕಿನಲ್ಲಿ ಎಲ್ಲರನ್ನು ನಿದ್ದೆಯಿಂದ ಎಬ್ಬಿಸಿ ಆರತಿ ಮಾಡುವುದು,ಊರ ಹಿರಿಯರಾರಾದರು ಬಂದರೆ ಅವರಿಗೂ ಆರತಿ ಮಾಡಬೇಕು ಆರತಿ ಮಾಡುವ ಸುಹಾಸಿನಿಯರ ತಟ್ಟೆಯಲ್ಲಿ ಕಾಣಿಕೆ ಹಾಕುವುದು ನಡೆದುಬಂಧ ಪದ್ಧತಿ ಆಮೇಲೆ ಹಿಂದಿನ ದಿನ ಮೀಸಲಿಟ್ಟ ನೀರನ್ನು ಬೆರೆಸಿ ಕಾಯಿಸಿ ಆ ನೀರಿನಿಂದಲೇ ಎರೆಯಲಾಗುತ್ತದೆ ಮನೆಯ ಸಮಸ್ತರನ್ನು ಒಂದು ಮಣೆಯ ಮೇಲೆ ಅಥವಾ ಹಾಸಿಗೆಯ ಮೇಲೆ ಒಬ್ಬೊಬ್ಬರಾಗಿ ಕೂಡಿಸಿ, ತಲೆಗೆ,ಕಿವಿಗೆ, ಕೈ ಕಾಲುಗಳಿಗೆ ಬೆನ್ನಿಗೆ ಸುವಾಸನೆಯ ಎಣ್ಣೆ ಹಚ್ಚಬೇಕು ಸುಂದರ ಪರಿಪಾಠವಿದೆ. ಆ ದಿನವೇ ಎರೆಯುವಾಗ ಬಚ್ಚಲಲ್ಲಿಯೇ ಆರತಿ ಮಾಡುತ್ತಾರೆ. ಎಲ್ಲರೂ ಹೊಸ ಅಥವಾ ತೊಳೆದ ಬಟ್ಟೆಗಳನ್ನು ಉಟ್ಟುಕೊಳ್ಳಬೇಕು,ಮನೆಯ ಎಲ್ಲ ಹೆಣ್ಣುಮಕ್ಕಳು ಸುವಾಸನೆ ಎಣ್ಣೆ ಹಾಕಿಕೊಂಡು ಎರೆದು ಆರತಿ ಮಾಡಿಕೊಂಡು ಹೂ ಮುಡಿದು,ಹೊಸಸೀರೆಯುಟ್ಟು ಸಿಂಗರಿಸಿಕೊಳ್ಳುತ್ತಾರೆ ಮನೆಯಲ್ಲಿ ಈ ಮೊದಲೇ ತಯಾರಿಸಿಟ್ಟ ಚಕ್ಕುಲಿ,ಚಿವಡಾ,ಕೋಡುಬಳೆ,ಶಂಕರ ಪಾಳೆ ಉಪ್ಪಿಟ್ಟು ಮೊಸರು ಇತ್ಯಾದಿ ಖಾದ್ಯಗಳೊಂದಿಗೆ ನಗುತ್ತ ಹರಟೆ ಹೊಡೆಯುತ್ತ ಇರಬೇಕು, ಯಾವುದೇ ಮನಸ್ತಾಪಗಳಿಗೆ ಎಡೆಗೊಡಬಾರದು, ಮನೆಯ ದೇವರ ಪೂಜೆ ಮುಗಿಸಬೇಕು 
ಅಶ್ವಿನ ಅಮಾವಾಸ್ಯಾ ಲಕ್ಷ್ಮೀ ಪುಜನ ಸಂಕಲ್ಪ : ಮಮ ಮಹಾಲಕ್ಷ್ಮೀ ಪ್ರೀತಿ ದ್ವಾರಾ ಸರ್ವಾಪಃ ಶಾಂತಿ ಪೂರ್ವಕ ಧನ ಧಾನ್ಯ ಪುತ್ರ ಪೌತ್ರ ಸಂತತೈ ಐಶ್ವರ್ಯಾಭಿವೃಧ್ಯರ್ಥಂ ಅಷಿನ ಕೃಷ್ಣ ಮಾಯಾಂ ವಿಹಿತಂ ಯಥಾಮಿಲಿತ ಷೋಡಶೋಪಚಾರ ದ್ರವ್ಯೈ ಶ್ರೀ ಮಹಾಲಕ್ಷ್ಮೀ ಪೂಜನಂ ಚ ಕರಿಷೈ  
ಧ್ಯಾನಂ : ವರಾಂಕುಶಾ ಪಾಶಮ ಭೀತಿ ಮುದ್ರಾಂ ಕರೈರ್ವಹಂತೀಮ್ ಕಮಲಾಸನಸ್ಥಾಂ | ಬಾಲಾರ್ಕ ಕೋಟಿ ಪ್ರತಿಮಾಂ ತ್ರಿನೇತ್ರಾಂ ಭಜೇಹಮಾಧ್ಯಾಂ ಜಗದೀಶ್ವರಿಂ ತಾಂ || ಶ್ರೀ ಮಹಾಲಕ್ಷ್ಮೈನಮಃ 
ಈ ಮಂತ್ರದಿಂದ ಷೋಡಶೋಪಚಾರ ಪೂಜೆಮಾಡಿ ಪ್ರಾರ್ಥಿಸಬೇಕು.
ನಮಸ್ತೇ ಸರ್ವ ದೇವಾನಾಂ ವರದಾಸಿ ಹರಿಪ್ರೀಯಾ | ಯಾ ಗತಿಸ್ತ್ವತ್ ಪ್ರಪನ್ನಾನಾಂ ಸಾ ಮೇ ಭೂಯಾತ್ವದರ್ಚನಾತ್ ||
ಯಾ ದೇವಿ ಸರ್ವ ಭೂತೇಷು ಲಕ್ಷ್ಮೀ ರೂಪೇನ ಸಂಸ್ಥಿತಾ | ನಮಸ್ತಯೈ ನಮಸ್ತಯೈ ನಮಸ್ತಯೈ ನಮೋ ನಮಃ  ||
ಆ ಮೇಲೆ ದಿವ್ಯ ಸ್ವರೂಪಳಾದ ಲಕ್ಷ್ಮಿಯನ್ನು ಆರಾಧಿಸಬೇಕು.
ವಿಶ್ವರೂಪಸ್ಯ ಭಾರ್ಯಾಸೀ ಪದ್ಮೆ ಪದ್ಮಾಲಯೇ ಶುಭೇ |  ಮಹಾಲಕ್ಷ್ಮೀ ನಮಸ್ತುಭ್ಯಂ ಸುಖರಾತ್ರಿಂ ಕುರಷ್ಯ ಮೇ |  ವರ್ಷಾಕಾರೆ ಮಹಾಘೋರೆ ಯನ್ಮಯಾ ದುಷ್ಕೃತಂ ಕೃತಂ | ಸುಖರಾತ್ರಿಂ ಪ್ರಭಾತೇದ್ಯ ತನ್ಮೇ ಲಕ್ಷ್ಮೀರ್ವ್ಯಪೋಹತು || ಯಾ ರಾತ್ರಿ: ಸರ್ವ ಭೂತಾನಾಂ ಯಾ ಚ ದೇವೇಶ್ವವಸ್ಥಿತಾ | ಸಂವತ್ಸರ ಪ್ರಿಯಾ ಯಾ ಚ ಸಾ ಮಮಾಸ್ತು ಸುಮಂಗಲಾ || ಮಾತಾತ್ವಂ ಸರ್ವ ಭೂತಾನಾಂ ದೇವಾನಾಂ ಸೃಷ್ಟಿ ಸಂಭವಾ | ಆಖ್ಯಾತಾ ಭೂತಲೇ ದೇವಿ ಸುಖ ರಾತ್ರಿ ನಮೋಸ್ತುತೆ ||       

     ಆ ದಿನ ಸಂಜೆ (ಅಥವಾ ಮರುದಿನ ) ದೀಪಾವಳಿ ಅಮಾವಾಸ್ಯೆ, ಕುಲದೇವರ ಪೂಜೆಯನ್ನು ಮಾಡಿ ಸಾಯಂಕಾಲದಲ್ಲಿ ಲಕ್ಷ್ಮೀ ಪುಜನ ಮನೆಯ ಹಿರಿಯರಿಂದ ಅಥವಾ ಹಿರಿಯಲಕ್ಷ್ಮಿಯಿಂದ ಮನೆಯ ರೂಢಿಯಂತೆ ಜಾಗಟೆಯ ಜೊತೆ ಮಹಾ ಮಂಗಳಾರತಿ ಮಾಡುವುದು. ಈ ಹಬ್ಬಕ್ಕೆ ಬರಲಾಗದ ತಮ್ಮ ಬಳಗಕ್ಕೆ ಮಕ್ಕಳಿಗೆ ಶುಭವಾಗಲಿ ಎಂಬ ಪ್ರತೀಕವಾಗಿ ಅಷ್ಟದಿಕ್ಕುಗಳಿಗೆ ಆರತಿ ಮಾಡುವ ರೀತಿ ಅತ್ಯಂತ ಶ್ಲಾಘನೀಯ.                                

 ಬಲಿಪಾಡ್ಯಮಿಯ ದಿನಪಾಂಡವ ಪೂಜೆ ನೆರವೇರಿಸಲಾಗುತ್ತದೆ . ಮನೆಗಳ ಮುಂದೆ ಗೋವಿನ ಸೆಗಣಿಯಿಂದ ಪಾಂಡವರ ಕೋಟೆ ನಿರ್ಮಿಸಿ, ಸಮೃದ್ಧ ಜೀವನವನ್ನು ಬಿಂಬಿಸುವ ರೂಪಕಗಳನ್ನು ರಚಿಸಿ. ಬೀಸುವ ಕಲ್ಲು, ಕುಟ್ಟುವ ಒರಳು, ಒನಕೆ, ಹಾಲು ಕಡೆಯುವ ಕಡಗೋಲು ಇತ್ಯಾದಿ ರೂಪಕಗಳನ್ನು ಸಮೃದ್ಧಿಯ ಸಂಕೇತವಾಗಿ ರಚಿಸಲಾಗುತ್ತದೆ ನಂತರ ಕೋಟೆ ಬಾಗಿಲಿನಲ್ಲಿ ರಾಕ್ಷಸ ಅಥವಾ ಕಳ್ಳನನ್ನು ಪ್ರತಿಷ್ಠಾಪಿಸಸಿ. ಪಾಂಡವರ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ ಕೌರವರ ಪ್ರತಿನಿಧಿ ರಾಕ್ಷಸನ ಹೊಕ್ಕಳಲ್ಲಿ ಪಟಾಕಿ ಇಟ್ಟು ಸಿಡಿಸುವ ಮೂಲಕ ಸಂಭ್ರಮಿಸಲಾಗುತ್ತದೆ. ಆ ಮೂಲಕ ಸಾಂಕೇತಿಕವಾಗಿ ದುಷ್ಟನ ಸಂಹಾರ ಮಾದಿದಂತೆ.

ಪಾಂಡವ ಪೂಜೆಯ ಜೊತೆಗೆ ಗೋವಿನ ಪೂಜೆಯನ್ನೂ ನೆರವೇರಿಸಲಾಗುತ್ತದೆ . ಮುತ್ತೈದೆಯರನ್ನು ಮನೆಗೆ ಕರೆಯಿಸಿ ಉಡಿ ತುಂಬುವ ಸಂಪ್ರದಾಯವೂ ನಡೆಯುತ್ತದೆ. ಸುಖ-ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿ. ದುಷ್ಟರನ್ನು ಸಂಹರಿಸಿದ ಸಂಭ್ರಮದಲ್ಲಿ ಸಿಹಿಯೂ ಹಂಚಲಾಗುತ್ತದೆ .

ನಮ್ಮ ಭಾರತೀಯ ಸನಾತನ ಸಾಂಪ್ರದಾಯದಲ್ಲಿ ಗೋವಿನ ಸೆಗಣಿಯಲ್ಲಿ ಲಕ್ಷ್ಮಿಯನ್ನು ಕಾಣುವ ರೂಢಿಯಿದೆ. ಹೀಗಾಗಿ ಲಕ್ಷ್ಮಿ ಅಥವಾ ಸಿರಿಯ ಸಂಕೇತವಾಗಿ ಗೋವಿನಿಂದ ಪಾಂಡವರ ಕೋಟೆಯನ್ನು ನಿರ್ಮಿಸಲಾಗುತ್ತದೆ. ಆ ಮೂಲಕ ಧನ-ಕನಕ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಲಾಗುತ್ತದೆ. ಅಲ್ಲದೆ ಭಾರತ ದೇಶದ ಎಲ್ಲ ನಿವಾಸಿಗಳಿಗೂ ಶುಭವಾಗಲಿ ಎಂದು ಈ ವೇಳೆ ಪ್ರಾರ್ಥಿಸಲಾಗುತ್ತದೆ . ಪುಟ್ಟ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ಬಲಿಪಾಡ್ಯಮಿ ದಿನದಂದು ಮಹಾಭಾರತದ ಪಾಂಡವರಿಗೆ ಸೆಗಣಿಯಿಂದ ತಯಾರಿಸಿರುವ ವಿಶೇಷ ಖಾದ್ಯದ ನೈವೇದ್ಯ ನೀಡಲಾಗುತ್ತದೆ . ಅಂದು ವನವಾಸದಲ್ಲಿ ಪಾಂಡವರು ಕಲ್ಲಿನಿಂದ ಕಡಬು ಮತ್ತು ಮುಳ್ಳಿನಿಂದ ಶಾವಿಗೆಯನ್ನ ತಯಾರಿಸಿ ಊಟ ಮಾಡಿದರು ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ ಸಗಣೆಯ ಪಾಂಡವರನ್ನ ರೂಪಿಸಿ ಸುತ್ತ ಬಿಳಿದಾರವನ್ನ ಸುತ್ತಿ, ಜೊತೆಗೆ ಪಾಂಡವರ ಛತ್ರಿ-ಚಾಮರ, ಕಿರೀಟಗಳಿದ್ದಂತೆ ಇಂದು ಉತ್ತರಾಣಿ ಕಡ್ಡಿ, ಬಿಳಿ ಹೊನ್ನೇ  ಹೂವು, ಅನ್ನ ಮೊಸರಿನ ನೈವೇದ್ಯವನ್ನ ಈ ಸಗಣೆ ಪಾಂಡವರಿಗೆ ನೀಡಲಾಗುತ್ತದೆ .

ದೀಪಾವಳಿಯ ಪಾಡ್ಯಮೆ ದಿನದಂದು ಇಲ್ಲಿ ರೈತಾಪಿ ಜನ, ಒಕ್ಕಲಿಗ, ನೇಕಾರರು ವಿವಿಧ ವ್ಯವಸಾಯಗಾರರು ತಮ್ಮ ತಮ್ಮ ಕ್ಷೇತ್ರದಲ್ಲಿ ಲಕ್ಷ್ಮಿಯನ್ನು ಪೂಜಿಸಿ ಹೊಸದಾಗಿ ಲೆಕ್ಖ ಬರೆಯುವ ಪುಸ್ತಕಗಳನ್ನು ಪೂಜಿಸುತ್ತಾರೆ 

ಎಲ್ಲರೂ ಸೇರಿದಂತೆ ಬಂಧು ಬಾಂಧವರ ಜೊತೆ ವಿವಿಧ ಪಂಗಡಗಳ ಜನತೆ ಗೋವಿನ ಸಗಣೆಯನ್ನ ತಂದು ಆ ಮೂಲಕ ಪಂಚ ಪಾಂಡವರನ್ನು ತಯಾರಿಸ್ತಾರೆ. ಅವುಗಳನ್ನ ತಮ್ಮ ಮನೆಯ ಬಾಗಿಲಿನ ಅಕ್ಕಪಕ್ಕದಲ್ಲಿ ಸುತ್ತುವರೆದು ಇಟ್ಟು ಅವುಗಳನ್ನ ಪೂಜಿಸುವ ಪರಿ ವಿಶೇಷ. ಇಂತಹ ಪದ್ದತಿ ಆಚರಣೆಯಿಂದ ನಮ್ಮ ಮನೆ ಮಕ್ಕಳಿಗೆ ಭವಿಷ್ಯದಲ್ಲಿ ಪಾಂಡವರ ರೀತಿಯಲ್ಲಿ ವನವಾಸ ಬರಬಾರದೆಂಬ ಉದ್ದೇಶದಿಂದ ಈ ಆಚರಣೆ ಮಾಡ್ತೀವಿ ಅಂತಾರೆ ಸ್ಥಳೀಯರು.ಸಾಯಂಕಾಲ ಪಂಚಪಾಂಡವರನ್ನು ಮನೆಯ ಮೇಲ್ಛಾವಣಿಯಲ್ಲಿಡುತ್ತಾರೆ.

ಒಟ್ಟಾರೆ ಬಲಿಪಾಡ್ಯಮಿಯ ದಿನದಂದು ಪಾಂಡವ ಪೂಜೆಯ ವಿಶಿಷ್ಟ ಆಚರಣೆಯ ಮೂಲಕ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯನ್ನು ನಿಸರ್ಗದ ಭೂಮಿಯ ನೀರಿನ ಪೂಜೆಯನ್ನು ಸಾಂಕೇತಿಕವಾಗಿ ಬಿಂಬಿಸಲಾಗುತ್ತದೆ.