Friday, September 04, 2020

Importance of ADHIKA MASS ( ಅಧಿಕಮಾಸ ಮಹತ್ವ )

                   ಆಚರಿಸುವ ಹಬ್ಬ ಹರಿದಿನಗಳಿಂದ ಹಿಡಿದು ಪ್ರತಿಯೊಂದರಲ್ಲೂ ಭಗವದ್ರೂಪವನ್ನು ಚಿಂತಿಸುವ ನಮಗೆ ಪ್ರತಿ ದಿನ,ಮಾಸಗಳೂ ಹೊರತಾಗಿಲ್ಲ. ೧೨ಮಾಸಕ್ಕೂ ಭಗವಂತ ಒಂದೊಂದು ರೂಪಗಳಿಂದ ನಿಯಾಮಕನಾಗಿದ್ದು ಒಂದಕ್ಕಿಂತ ಒಂದು ಮಾಸಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಮೂರು ವರ್ಷಕ್ಕೊಮ್ಮೆ ಬರುವ "ಅಧಿಕ ಮಾಸಕ್ಕೆ" ವಿಶೇಷ ಸ್ಥಾನ ನೀಡಲಾಗಿದೆ.                                                                 

  ಅಧಿಕ ಮಾಸದಲ್ಲಿ ಯಾವುದೇ ಹಬ್ಬಗಳು ಬರುವುದಿಲ್ಲವಾದರೂ ದಾನ,ಕರ್ಮಾನುಷ್ಠಾನ ಸಾಧನೆಗೆ ಅಧಿಕಮಾಸದಲ್ಲಿ ವಿಶೇಷ ಫಲವಿದೆ. ಅದಕ್ಕಲ್ಲವೇ "ಅಧಿಕಸ್ಯ ಅಧಿಕಫಲಂ" ಎಂದು ಹೇಳಿರುವುದು. ಇಂತಹಾ ಅಧಿಕ ಮಾಸ ಏಕೆ ಮಾಡಬೇಕು, ಹಿನ್ನೆಲೆ ಏನು, ಏನು ಫಲ, 33 ಭಗವದ್ರೂಪಗಳು ಯಾವುವು, 33 ದಾನ ಏಕೆ ಮಾಡಬೇಕು ಇತ್ಯಾದಿಗಳನ್ನು ತಿಳಿಸುವುದೇ ಈ ಲೇಖನದ ಉದ್ದೇಶ.

ಯಾವ ಚಾಂದ್ರಮಾಸದಲ್ಲಿ ಸೂರ್ಯ ಸಂಕ್ರಾಂತಿ ಇರುವುದಿಲ್ಲವೋ ಆ ಮಾಸವನ್ನು ಅಧಿಕ ಮಾಸವೆಂದು ಪರಿಗಣಿಸಲಾಗುವುದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಪ್ರತೀ 33ನೇ ಚಾಂದ್ರ ಮಾಸವು ಅಧಿಕ ಮಾಸವಾಗಿರುತ್ತದೆ. ವಶಿಷ್ಟ ಸಿದ್ದಾಂತ ಪ್ರಕಾರ ಅಧಿಕ ಮಾಸವು 32 ತಿಂಗಳು 16 ದಿವಸಗಳು, 3 ಗಂಟೆ 12 ನಿಮಿಷಕ್ಕೆ ಬರುತ್ತದೆ.

ಅಧಿಕಮಾಸವು ಸಹ ಖಗೋಳ ವಿಜ್ಞಾನ ಮತ್ತು ಗಣಿತ ಸೂತ್ರಗಳನ್ನು ಆಧರಿಸಿದ ಪರಸ್ಪರ ತುಲನೆಯ ಲೆಕ್ಕಾಚಾರವಾಗಿದೆ. ಭೂಮಿಯ ಮೇಲಿನ ಕಾಲಗಣನೆಯು ಋತುಗಳಿಗೆ ಬದ್ಧವಾಗಿರ ಬೇಕಾಗಿರುತ್ತದೆ. ಋತು ಆವರ್ತವು, ಭೂ ವಾರ್ಷಿಕ ಚಲನೆಗೆ ಪರ್ಯಾಯವಾಗಿ ಉಂಟಾಗುವ ಪ್ರಾಕೃತಿಕ ಪ್ರಕ್ರಿಯೆ. ಆದ್ದರಿಂದ ಸೌರಮಾನವು ಋತುಗಣನೆಯ ಅಳತೆಯಾಗಿದೆ. ಆದರೆ ಜಗತ್ತಿನಾದ್ಯಂತ ಪೂರ್ವ ಕಾಲದಿಂದಲೂ ಚಂದ್ರನು ಕಣ್ಣಿಗೆ ಕಾಣಿಸುವ ಹಂತಗಳನ್ನು ಆಧರಿಸಿ ಚಾಂದ್ರಮಾನ ಬಳಕೆಯಲ್ಲಿದೆ. ಹಾಗಾಗಿ ನಮ್ಮಲ್ಲಿ ಸೌರಮಾನ ಮತ್ತು ಚಾಂದ್ರಮಾನ ಎರಡೂ ಕಾಲಗಣನೆ ಬಳಕೆಯಲ್ಲಿದೆ. ಸೌರಮಾನ ಚಾಂದ್ರ ಮಾನಗಳೆರಡೂ ಋತುಗಳಿಗೆ ಬದ್ಧವಾಗಿರುವಂತೆ ಅವೆರಡನ್ನು ಸಮೀಕರಿಸಲಾಗಿದೆ.

ಭೂಮಿಯು ಸೂರ್ಯನ ಸುತ್ತ, ಒಂದು ಸುತ್ತು ಸುತ್ತಿ ಬರಲು (1 ಆವರ್ತ) 365.2422 ದಿವಸಗಳು ಬೇಕು. ಇದು ಸೌರಮಾನದ ವಾರ್ಷಿಕ ಚಲನೆಯಾಗಿದೆ. ಚಂದ್ರನು ಭೂಮಿಯ ಸುತ್ತಲೂ ಒಂದು ಸುತ್ತು ಸುತ್ತಿ ಬರಲು 27.3 ದಿವಸಗಳು ಬೇಕು. ಇದು ಚಂದ್ರಮಾನದ ಮಾಸಿಕ ಚಲನೆಯಾಗಿದೆ. ಅಂದರೆ ಭೂಮಿ ಮತ್ತು ಚಂದ್ರರ 27.3 ದಿವಸಗಳ ಚಲನೆ ಅಂದರೆ ನಿಯಮದ ಪ್ರಕಾರ ಸೂರ್ಯನ ಸುತ್ತಲೂ 1/12 ಭಾಗವನ್ನು ಚಲಿಸಿರುತ್ತದೆ. ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆವರೆಗೆ ಚಲಿಸಲು 2.2 ಹೆಚ್ಚಿನ ದಿವಸಗಳನ್ನು ತೆಗೆದುಕೊಳ್ಳುತ್ತದೆ. ಇದು ಸೂರ್ಯನ ಸುತ್ತಲು ಚಲಿಸುವ ಭೂಮಿಯ ಪಥವು ಸಮನಾಗಿಲ್ಲವಾಗಿರುವುದರಿಂದ ವ್ಯತ್ಯಾಸವಾಗುತ್ತದೆ. ಚಂದ್ರನು ಭೂಮಿಯ ಸುತ್ತಲು ಚಲಿಸುತ್ತಿರುವಾಗ ಭೂಮಿಯೂ ಸಹಾ ಸೂರ್ಯನ ಸುತ್ತಲೂ ಚಲಿಸುತ್ತಿರುವುದರಿಂದ ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆಯವರೆಗೆ ಚಲಿಸಲು 29.531 ದಿವಸಗಳನ್ನು ತೆಗೆದುಕೊಳ್ಳುತ್ತದೆ.

ಆದ್ದರಿಂದ ಚಾಂದ್ರಮಾನದ  ವಾರ್ಷಿಕ ಚಲನೆ 29.531 x 12 = 354.372 ದಿವಸಗಳಾಗಿರುತ್ತದೆ.

ಸೌರಮಾನದ ವಾರ್ಷಿಕ ಚಲನೆ (1 ಆವರ್ತನ) = 365.2422  ಚಾಂದ್ರಮಾನದ ವಾರ್ಷಿಕ ಚಲನೆ (29.531 x 12) = 354.372  ಸೌರಮಾನ ಮತ್ತು ಚಾಂದ್ರಮಾನದ ವಾರ್ಷಿಕ ವ್ಯತ್ಯಾಸ: 10.8702 ದಿವಸಗಳು

ಈ ವ್ಯತ್ಯಾಸ 3 ವರ್ಷಗಳಲ್ಲಿ 32.6106 ದಿವಸಗಳಾಗುತ್ತದೆ. ಈ ವ್ಯತ್ಯಾಸ ಸರಿತೂಗಿಸಲು 3ನೇ ವರ್ಷದಲ್ಲಿ ಅಧಿಕ ಮಾಸ ಬರುತ್ತದೆ. ಆಂದರೆ ಪ್ರತೀ 33ನೇ ಚಾಂದ್ರಮಾಸವು ಅಧಿಕಮಾಸವಾಗಿರುತ್ತದೆ. ಹೀಗೆ 33 ತಿಂಗಳಿಗೊಮ್ಮೆ ಒಂದು ಮಾಸವನ್ನು ಸೇರಿಸುವ ಪರಿಕಲ್ಪನೆಯೇ ಅಧಿಕ ಮಾಸ. ಈ ಹಿನ್ನೆಲೆಯಲ್ಲಿಯೇ ೩೩ ದಾನಗಳನ್ನು ಕೊಡುವ ಪದ್ಧತಿ ಜಾರಿಯಲ್ಲಿರುವುದು. 

ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಅಧಿಕ ಮಾಸವು ಹುಣ್ಣಿಮೆಯ ನಂತರ ಶುದ್ಧ ಪ್ರತಿಪದದಿಂದ ಪ್ರಾರಂಭವಾಗಿ ಅಮಾವಾಸ್ಯೆಯ ತನಕ ಆಚರಿಸಲಾಗುತ್ತದೆ. ಆದರೆ ಉತ್ತರ ಭಾರತದ ಜನರಿಗೆ ವೈಶಾಖ ಬಹುಳ ಪ್ರತಿಪದದಿಂದ ಪ್ರಾರಂಭವಾಗಿ ಹುಣ್ಣಿಮೆಗೆ ಮುಗಿಯುತ್ತದೆ.

ಅಧಿಕ ಮಾಸ: ಭಗವಾನ್ ಶ್ರೀ ವೇದವ್ಯಾಸರು 14 ಪುರಾಣಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 14 ಉಪಪುರಾಣಗಳೆಂದು ಪ್ರಸಿದ್ಧವಾದ ಪ್ರಕೃತ ಈ ಅಧಿಕಮಾಸದ ಮಹತ್ವ ಮತ್ತು ಮೂವತ್ತ್ಮೂರು (33) ಅಪೂಪದಾನಗಳ ವಿವರಣೆ ಮಹತ್ವ ಇವುಗಳಿಗೆ ಮೂಲ ಆಧಾರ "ಬೃಹನ್ನಾರದೀಯ ಪುರಾಣ ಗ್ರಂಥ". ನಾರದೀಯ ಪುರಾಣ ಮತ್ತು ಪ್ರಧಾನ ಪುರಾಣ ಹಾಗೂ ಉಪಪುರಾಣಗಳಲ್ಲಿಯೂ ಬಂದಿರುತ್ತದೆ. ಆದಕಾರಣ ಇದು ಪ್ರಧಾನವಾದ ನಾರದ ಪುರಾಣಾಂತರ್ಗತ ಎನ್ನುವುದನ್ನು ಪ್ರತ್ಯೇಕವಾಗಿ ಗುರುತಿಸುವುದರ ಸಲುವಾಗಿ ಹಾಗೂ ಅಧಿಕ ಮಾಸ ಮಹಾತ್ಮೆಯು ಭಗವಾನ್ ಶ್ರೀಮನ್ನಾರಾಯಣ ಹಾಗೂ ನಾರದರ ಸಂವಾದ ರೂಪ ಅಧಿಕ ಮಾಸ ಹಾಗೆಂದೇ "ಬೃಹನ್ನಾರದೀಯ ಪುರಾಣಾಂತರ್ಗತ ಅಧಿಕಮಾಸ ಮಹಾತ್ಮೆ" ಎಂದು ಪ್ರಸಿದ್ಧವಾಗಿದೆ. ಇದು ಸಾತ್ವಿಕ ಪುರಾಣಾಂತರ್ಗತವಾದದ್ದು. ಇದರ ವೈಶಿಷ್ಟ್ಯ ೩೧ಅಧ್ಯಾಯಗಳಲ್ಲಿ ೧೫೬೩ಶ್ಲೋಕಗಳಿಂದ ನಿರೂಪಿತವಾಗಿದೆ.

ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಾಂತಿಯಿರುವುದಿಲ್ಲ.

ಅಧಿಕ ಮಾಸಕ್ಕೆ  ಅಸಂಕ್ರಾಂತ ಮಾಸ, ಪುರುಷೋತ್ತಮ ಮಾಸ ಎಂತಲೂ ಕರೆಯುತ್ತಾರೆ. ಸೂರ್ಯನು ಈ ಮಾಸದಲ್ಲಿ ಒಂದೇ ರಾಶಿಯಲ್ಲಿರುವುದರಿಂದ ಈ ಮಾಸಕ್ಕೆ ಅಸಂಕ್ರಾಂತ ಮಾಸವೆಂದೂ ಕರೆಯುತ್ತಾರೆ. ಕಾಲ ನಿರ್ಣಯ ಗ್ರಂಥದಲ್ಲಿ "ಚಾಂದ್ರಮಾಸೋಹ್ಯ ಸಂಕ್ರಾಂತೋ ಮಲಮಾಸ ಪ್ರಕೀರ್ತಿತಃ ಇತಿ ಮಲತ್ವಂಚ ಕಾಲಾಧಿಕ್ಯಾತ್| ತದುಕ್ತಂ ಗೃಹ್ಯ ಪರಿಶಿಷ್ಟೋ-ಮಲಂವದಂತಿಕಾಲಸ್ಯ ಮಾಸಂ ಕಾಲವಿಧೋಽಧಿಕಂಮಿತಿ||" ಎಂದು ವಿವರಿಸಿದ್ದಾರೆ. (ಅಧಿಕಮಾಸವಷ್ಟೇ ಅಲ್ಲ, ಚೈತ್ರ ಮಾಸದಿಂದ ಫಾಲ್ಗುಣದವರೆಗಿನ 12 ಮಾಸಗಳ ಪೈಕಿ 9 ಮಾಸಗಳಲ್ಲಿ ಅಂದರೆ ಚೈತ್ರದಿಂದ ಕಾರ್ತೀಕ ಮಾಸದ ವರೆಗೆ ಮತ್ತು ಕೊನೆಯ ಫಾಲ್ಗುಣ ಸಹಿತವಾದ ಮಾಸಗಳಲ್ಲಿ ಸೂರ್ಯನು ಒಂದೇ ರಾಶಿಯಲ್ಲಿ ಇರುತ್ತಾನೆ. ಹೀಗಾಗಿ ಈ ಮಾಸಗಳಲ್ಲಿ ಸಂಕ್ರಾಂತಿಯು ಇರುವುದಿಲ್ಲವಾದ್ದರಿಂದ ಇವುಗಳನ್ನೂ ಅಸಂಕ್ರಾಂತ ಮಾಸವೆಂದು ಕರೆಯುತ್ತಾರೆ).

ಪ್ರತಿ ಮಾಸದ ಎರಡೂ ಏಕಾದಶಿಗಳಿಗೆ ಪ್ರತ್ಯೇಕ ಪ್ರತ್ಯೇಕವಾದ ಪುರಾಣೋಕ್ತ ಹೆಸರುಗಳಿವೆ. (ಉದಾ: ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಗೆ "ಕಾಮದಾ ಏಕಾದಶಿ" ಎಂದು ಹೆಸರಿದ್ದರೆ, ಕೃಷ್ಣ ಪಕ್ಷದ ಏಕಾದಶಿಯು "ವರೂಥಿನಿ ಏಕಾದಶಿ" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಆದರೆ ಈ ಅಧಿಕ ಮಾಸ ಯಾವುದೇ ಮಾಸಕ್ಕೆ ಸಂಬಂಧ ಇದ್ದರೂ ಆ ಅಧಿಕ ಮಾಸದಲ್ಲಿ ಬರುವ ಶುಕ್ಲ, ಕೃಷ್ಣ ಪಕ್ಷದ ಏಕಾದಶಿಗಳು "ಪದ್ಮಿನಿ, ಪರಮಾ ಏಕಾದಶಿಗಳೆಂದೇ ಪ್ರಸಿದ್ಧವಾಗಿವೆ. ಈ ಏಕಾದಶಿಗೆ ರಾಧಾಸಹಿತ ಪುರುಷೋತ್ತಮ ನಾಮಕ ಪರಮಾತ್ಮ ನಿಯಾಮಕನು. ಆದ್ದರಿಂದ ಅಧಿಕ ಮಾಸಕ್ಕೆ ಪುರುಷೋತ್ತಮ ಮಾಸವೆಂದೂ ಹೆಸರಿದೆ.

ಅಧಿಕಮಾಸದಲ್ಲಿ 33 ದೇವತೆಗಳ ವಿವರಣೆ:   ಅಷ್ಟ (8) ವಸುಗಳು   ಏಕಾದಶ (11)ರುದ್ರರು  ದ್ವಾದಶ (12) ಆದಿತ್ಯರು.  (1) ಪ್ರಜಾಪತಿ  (1) ವಷಟ್ಕಾರ

ಒಟ್ಟು 33 ದೇವತೆಗಳು.

ಅಧಿಕ ಮಾಸದಲ್ಲಿ ಅಪೂಪ (ಅತಿರಸ) ದಾನ:

ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನಕ್ಕೆ ವಿಶೇಷ ಫಲವಿದೆ. 33 ದಂಪತಿಪೂಜೆ, ದೀಪದಾನಗಳು ವಿಹಿತವಾಗಿವೆ.ಅಪೂಪದಾನದಿಂದ ಪೃಥ್ವೀದಾನದ ಫಲವನ್ನು ಕೊಡುತ್ತದೆ. 

ಅಧಿಕಮಾಸದ ಪ್ರತಿದಿನವೂ ಅದಾಗದಿದ್ದರೆ ದ್ವಾದಶಿ, ಹುಣ್ಣಿಮೆ ಮತ್ತಿತರೇ ದಿನಗಳಲ್ಲಿಯಾದರೂ ಕಂಚಿನಪಾತ್ರೆಯಲ್ಲಿಟ್ಟು ಬೆಲ್ಲ ಮತ್ತು ತುಪ್ಪ ಸಹಿತವಾಗಿ ತಾಂಬೂಲ ದಕ್ಷಿಣೆಯೊಂದಿಗೆ ಶ್ರೇಷ್ಠ ಬ್ರಾಹ್ಮಣರಿಗೆ ದಾನ ಕೊಡಬೇಕು. ಕೊಡುವಾಗ ಅಪೂಪದಲ್ಲಿರುವ ೩೩ಭಗವದ್ರೂಪಗಳನ್ನು ಚಿಂತಿಸಿ ದಾನ ಮಾಡಬೇಕು. ಹೀಗೆ ದಾನ ಮಾಡಿದರೆ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ,ಎಂಬ ನಂಬಿಕೆ 

ಅಪೂಪದಾನ ಪ್ರಮಾಣ ಶ್ಲೋಕ :

ತ್ರಯಸ್ತ್ರಿಂಶದ ಪೂಪಾನ್ನಂ ಕಾಂಸ್ಯಪಾತ್ರೇ ನಿಧಾಯ ಚ|

ಸಘೃತಂ ಹಿರಣ್ಯಂಚ ಬ್ರಾಹ್ಮಣಾಯ ನಿವೇದಯೇತ್||

ಅಪೂಪ ದಾನ ಸಂಕಲ್ಪ:

ಆಚಮ್ಯ, ಪ್ರಾಣಾನಾಯಮ್ಯ ..............ವಾಸರ,...ಯೋಗ,....ಕರಣ,..... ಶುಭತಿಥೌ,....ಸಂಕೀರ್ತ್ಯ, ಶ್ರೀ ಮದಾನಂದ ತೀರ್ಥ ಭಗವತ ಪಾದಾಚಾರ್ಯಾ ಗುರುವಂತರ್ಗತ ಅಷ್ಟವಸು, ಏಕಾದಶ ರುದ್ರ, ದ್ವಾದಶಾದಿತ್ಯ, ಪ್ರಜಾಪತಿ, ವಷಟ್ಕಾರಾಖ್ಯ ತ್ರಯಸ್ತ್ರಿಂಶತ್ ದೇವತಾಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ವಾದಿ ತ್ರಯಸ್ತ್ರಿಂಶನ್ನಾಮಧಾರಿ ಮಲಮಾಸದೇವತಾಭಿನ್ನ ಶ್ರೀ ಪುರುಷೋತ್ತಮ ಪ್ರೇರಣಯಾ, ಶ್ರೀ ಪುರುಷೋತ್ತಮ ಪ್ರೀತ್ಯರ್ಥಂ ಅಮುಖ ಗೋತ್ರಸ್ಯ ಅಮುಖ ಶರ್ಮಣಃ ಸಪತ್ನೀಕಸ್ಯ ಮಮ ನಿಖಿಲ ಪಾಪಕ್ಷಯ ಪೂರ್ವಕ ಭೂದಾನಫಲ ಪ್ರಾಪ್ತ್ಯರ್ಥಂ ಅಪೂಪ ಸಮಛ್ಛಿದ್ರ ಸಮ ಸಂಖ್ಯಾಕ ವರ್ಷಸಹಸ್ರಾವಧಿ ಸ್ವರ್ಲೋಕ ನಿವಾಸಾದಿ ಫಲ ಸಿದ್ಯರ್ಥಂ ತದಂಗತ್ವೇನ ಅಪೂಪಪೂಜಾಂ ಬ್ರಾಹ್ಮಣ ಪೂಜಾಂ ತ್ರಯಸ್ತ್ರಿಂಶದ ಅಪೂಪದಾನಮಹಂ ಕರಿಷ್ಯೇ|

ಎಂಬ ಸಂಕಲ್ಪಾನುಸಾರ ಕಂಚಿನ ಪಾತ್ರೆಯಲ್ಲಿ ತುಪ್ಪ ಬೆಲ್ಲದೊಂದಿಗೆ 33 ಅಪೂಪಗಳನ್ನು ತುಂಬಿ ದೇವರ ಎದುರಿನಲ್ಲಿ ರಂಗೋಲಿ ಅರಿಶಿನ ಕುಂಕುಮಾದಿಗಳಿಂದ ಮಂಡಲಮಾಡಿ ಮಣೆಯನ್ನಿಟ್ಟು ಅದರ ಮೇಲೆ ಅಪೂಪ ತುಂಬಿದ ಪಾತ್ರೆಯನ್ನಿಟ್ಟು ೩೩ದೇವತೆಗಳನ್ನು ಆವಾಹನ ಮಾಡಿ ದಾನ ಮಾಡಬೇಕು.

 ಪುರುಷೋತ್ತಮ ನಾಮಧೇಯ ಹೊಂದಿರುವ ಅಧಿಕಮಾಸದ ಸಂದರ್ಭದಲ್ಲಿ ಆ ಮಹಾವಿಷ್ಣುವಿನ ಯಾ ಶ್ರೀ ಹರಿಯ ಚಿಂತನೆ ಅನುನಿತ್ಯ ಮಾಡುವುದರಿಂದ ಸಕಲ ಸಂಕಷ್ಟಗಳಿಂದ ಪಾರಾಗಲು ಸದ್ಯವೇ ಸರಿ.

ಅಧಿಕಮಾಸದ ಮಹತ್ವ 
 || ಅಪೂಪದಾನ ಮಂತ್ರ ||

ವಿಷ್ಣುರೂಪಿ ಸಹಸ್ರಾಂಶುಃ ಸರ್ವಪಾಪಪ್ರಣಾಶನಃ |
ಅಪೂಪಾನ್ನ ಪ್ರದಾನೇನ ಮಮ ಪಾಪಂ ವ್ಯಪೋಹತು ||
ನಾರಾಯಣ ಜಗದ್ಭೀಜ ಬಾಸ್ಕರ ಪ್ರತಿರೂಪಧೃಕ್ |
ವ್ರತೇನಾನೇನ ಪುತ್ರಾಂಶ್ಚ ಸಂಪದಂ ಚಾಭಿವರ್ಧಯ ||
ಯಸ್ಯ ಹಸ್ತೇ ಗದಾ ಚಕ್ರೋ ಗರುಡೋ ಯಸ್ಯ ವಾಹನಮ್|
ಶಂಖಃ ಕರತಲೇ ಯಸ್ಯ ಸ ಮೇ ವಿಷ್ಣುಃ ಪ್ರಸಿದತು ||
ಕಲಾಕಾಷ್ಠದಿ ರೂಪೇಣ ನೀಮೇಷಘಟಿಕಾದಿನಾ |
ಯೋ ವಂಚಯತಿ ಭೂತಾನಿ ತಸ್ಮೈಕಾಲತ್ಮನೇ ನಮಃ ||
ಕುರುಕ್ಷೇತ್ರಮಯೋ ದೇಶಃ ಕಾಲಃ ಪರ್ವ ದ್ವಿಜೋಹರಿಃ |
ಪೃಥ್ವಿ ಸಮಮಿದಂ ದಾನಂ ಗೃಹಾಣ ಪುರುಷೋತ್ತಮ ||
ಮಲಾನಾಂ ಚ ವಿಶುದ್ಧ್ಯರ್ಥಂ ಪಾಪಪ್ರಶಮನಾಯಚ |
ಪುತ್ರಪೌತ್ರಾದಿವೃಧ್ಯರ್ಥಂ ತೇನ ದಾಸ್ಯಮಿ ಭಾಸ್ಕರ ||
ವಿಷ್ಣುರೂಪದ ಸಹಸ್ರಕಿರಣನಾದ ಸೂರ್ಯ ಸರ್ವಪಾಪಗಳನ್ನು ಪರಿಹರಿಸುವನು ಈ ಅಪೂಪದಾನದಿಂದ ನನ್ನ ಪಾಪವನ್ನು ಪರಿಹರಿಸುವವನು . ಈ ಅಪೂಪದಾನದಿಂದ ನನ್ನ ಪಾಪವನ್ನು ಪರಿಹರಿಸಲಿ; ಜಗತ್ಕಾರಣನಾದ ಶ್ರೀನಾರಾಯಣನಾದ ನೀನು ಸೂರ್ಯನ ಬಿಂಬ ;ಈ ವ್ರತದಿಂದ ಪುತ್ರರನ್ನು ಸಂಪತ್ತನ್ನು ಅಭಿವೃದ್ಧಿಪಡಿಸು .
ಯಾರ ಕೈಯಲ್ಲಿ ಗದಾಚಕ್ರಗಳಿವೆಯೋ ,ಯಾರ ವಾಹನವು ಗರುಡನೋ ,ಯಾರ ಕರತಲದಲ್ಲಿ ಶಂಖವಿದೆಯೋ ಅಂಥ ವಿಷ್ಣುವು ನನ್ನಲ್ಲಿ ಪ್ರಸನ್ನನಾಗಲಿ  .ಕಲಾ ಕಾಷ್ಠ ನಿಮೇಷ ,ಘಳಿಗೆ ಮೊದಲಾದ ರೂಪಗಳನ್ನು ನೆಲೆಸಿದ್ದು ಪ್ರಾಣಿಗಳನ್ನು ಮೋಸಗೊಳಿಸುವ (ನಿಯಂತ್ರಿಸುವ) ಕಾಲರೂಪಿಯಾದ ಶ್ರೀಹರಿಗೆ ನಮಸ್ಕಾರ .ಅಧಿಕಮಾಸದ ಕಾಲ ,ಪರ್ವಕಾಲ ;ಪ್ರತಿಸ್ಥಳವೂ ಕುರುಕ್ಷೇತ್ರ ; ಪ್ರತಿಯೊಬ್ಬ ವಿಪ್ರನಲ್ಲೂ ಶ್ರೀಹರಿಯ ಸನ್ನಿಧಾನ .ಈ ದಾನವಂತೂ ಪೃಥ್ವಿದಾನಕ್ಕೆ ಸಮಾನ . ಪುರುಷೋತ್ತಮರೂಪಿ ಪರಮಾತ್ಮನೇ ಇದನ್ನು ಸ್ವಿಕರಿಸು .ದೋಷಗಳ ಪಾಪಗಳ ನಾಶಕ್ಕೂಸ್ಕಾರ ಪುತ್ರಪೌತ್ರಾದಿಗಳ ಅಭಿವೃದ್ಧಿಗೊಸ್ಕರ ಹೇ ಬಾಸ್ಕರರೂಪಿ ವಿಷ್ಣುವೇ! ನಾನು ಇದನ್ನು ನಿನಗೆ ಸಮರ್ಪೀಸುತ್ತಿರುವೇನು .
|| ಅಪೂಪದಾನಕಾಲದಲ್ಲಿ ಚಿಂತಿಸಬೇಕಾದ ಭಗವದ್ರೂಪಗಳು ||
ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಹರಿಂ ಕೃಷ್ಣಮಧೋಕ್ಷಜಮ್ |
ಕೇಶವಂ ಮಾಧವಂ ರಾಮಮಚ್ಯುತ ಪುರುಷೋತ್ತಮಂ ||
ಗೋವಿಂದಂ ವಾಮನಂ ಶ್ರೀಶಂ ಶ್ರೀಕಂಠಂ ವಿಶ್ವಸಾಕ್ಷಿಣಮ್ ||
ನಾರಾಯಣಂ.ಮಧುರಿಪುಮನಿರುದ್ಧಂ ತ್ರಿವಿಕ್ರಮಮ್||
ವಾಸುದೇವಂ ಜಗದ್ಯೋನಿಮನಂತಂ ಶೇಷಶಾಯಿನಮ್ |
ಸಂಕರ್ಷಣಂ ಚ ಪ್ರದ್ಯುಮ್ನಂ ದೈತ್ಯಾರಿಂ ವಿಶ್ವತೋಮುಖಮ್ ||
ಜನಾರ್ದನಂ ಧರಾವಾಸಂ ದಾಮೋದರಮಘಾರ್ದನಮ್ ||
ಶ್ರೀಪತಿಂ ಚ ತ್ರಯಸ್ತ್ರಿಂಶದುದ್ದಿಶ್ಯ ಪ್ರತಿನಾಮಭಿಃ ||
ಮಂತ್ರೇರೇತೈಶ್ಚ ಯೋ ದದ್ಯಾತ್ ತ್ಯಯಸ್ತ್ರಿಂಶದಪೂಪಕಮ್ |
ಪ್ರಾಪ್ನೋತಿ ವಿಪುಲಾಂ ಲಕ್ಷ್ಮೀಂ ಪುತ್ರಪೌತ್ರಾದಿಸಂತತಿಮ್ ||

ವಿಷ್ಣು ಜಿಷ್ಣುಮಹಾವಿಷ್ಣು ಹರಿ ಅಧೋಕ್ಷಜ ಕೇಶವ ಮಾಧವ ರಾಮ ಅಚ್ಯುತ ಪುರುಷೋತ್ತಮ ಗೋವಿಂದ ವಾಮನ ಶ್ರೀಶ ಶ್ರೀಕಂಠ ವಿಶ್ವಸಾಕ್ಷಿ ನಾರಾಯಣ ಮಧುಸೂದನ ಅನಿರುದ್ಧ ತ್ರಿವಿಕ್ರಮ ವಾಸುದೇವ ಜಗದ್ಯೋನಿ ಅನಂತ ಶೇಷಶಾಯಿ ಸಂಕರ್ಷಣ ಪ್ರದ್ಯುಮ್ನ ದೈತ್ಯಾರಿ ವಿಶ್ವತೋಮುಖ ಜನಾರ್ದನ ಧರಾವಾಸ ದಾಮೋದರ ಅಘಾರ್ಧನ ಶ್ರೀಪತಿ -ಇವು.ಮೂವತ್ತುಮೂರು. ಅಪೂಪಗಳಲ್ಲಿ ಚಿಂತಿಸಬೇಕಾದ. ಹರಿಯರೂಪಗಳು ಪ್ರತಿಯೊಂದು ಅಪೂಪಗಳಲ್ಲಿ. ಚಿಂತಿಸಬೇಕಾದ ಶ್ರೀಹರಿಯ ರೂಪಗಳು ಪ್ರತಿಯೊಂದು ಅಪೂಪದಲ್ಲಿ ನಾಮೋಚ್ಚಾರಣೆ -ಪೂರ್ವಕ ಶ್ರೀಹರಿಯನ್ನು ಚೀಂತಿಸಿ ದಾನನೀಡುವವರು. ಅಪಾರವಾದ ಸಂಪತ್ತನ್ನು ಪುತ್ರ ಪೌತ್ರ ಮೊದಲಾದ ಸಂತತಿಯನ್ನು ಪಡೆಯುವರು .
(ಪದ್ಮಪುರಾಣದಲ್ಲಿ ಧರಾವಾಸ ,ದಾಮೋದರ , ಹಾಗೊ ಜನಾರ್ಧನ ಎಂಬ ಮೂರುನಾಮಗಳ ಬದಲಿಗ ಧರಾಧಾರ ,ಶ್ರೀಧರ, ಗರುಡದ್ವಜ ,ಎಂಬ ನಾಮಾಂತರಗಳು ಉಲ್ಲೇಖಿಸಲ್ಪಟ್ಟಿವೆ .)

|| ಮೂವತ್ತುಮೂರು ದೇವತೆಗಳು ||
1-8 .ಅಷ್ಟವಸುಗಳು ಹಾಗೂ ಅವುಗಳ ಅಂತರ್ಯಾಮಿ ಭಗವದ್ರೂಪಗಳು
1)ದ್ರೋಣ(ವಿಷ್ಣು)
2)ಧ್ರುವ (ಜಿಷ್ಣು)
3)ದೋಷ (ಮಹಾವಿಷ್ಣು)
4)ಅರ್ಕ (ಹರಿ)
5)ಅಗ್ನಿ (ಕೃಷ್ಣ)
6)ದ್ಯು (ಅಧೋಕ್ಷಜ )
7)ಪ್ರಾಣ (ಕೇಶವ )
8)ವಿಭಾವಸು (ಮಾಧವ)
9-19 . ಏಕಾದಶರುದ್ರರು ಹಾಗೂ ಅವುಗಳ ಅಂತರ್ಯಾಮಿ ಭಗವದ್ರೂಪಗಳು.
9)ಭೀಮ (ರಾಮ)
10)ರೈವತ (ಅಚ್ಯುತ)
11)ಓಜ (ಪುರುಷೋತ್ತಮ)
12)ಅಜೈಕಪಾತ್ (ಗೋವಿಂದ)
13)ಮಹಾನ್ (ವಾಮನ)
14)ಬಹುರೂಪ (ಶ್ರೀಶ)
15)ಭವ (ಶ್ರೀಕಂಠ)
16)ವಾಮದೇವ (ವಿಶ್ವಸಾಕ್ಷೀ)
17)ಉಗ್ರ (ನಾರಾಯಣ
18)ವೃಷಕಪಿ (ಮಧುರಿಪು)
19)ಅಹಿರ್ಬುದ್ನಿ (ಅನಿರುದ್ಧ)
20-31.ದ್ವಾದಶಾದಿತ್ಯರು ಹಾಗೂ ಅವುಗಳ ಅಂತರ್ಯಾಮಿ ರೂಪಗಳು .
20)ವಿವಾಸ್ವಾನ್ (ತ್ರಿವಿಕ್ರಮ)
21ಅರ್ಯಮ (ವಾಸುದೇವ)
22)ಪೂಷಾ (ಜಗದ್ಯೋನಿ)
23)ತ್ವಷ್ಟೃ (ಅನಂತ)
24)ಸವಿತೃ (ಶೇಷಶಾಯಿ)
25)ಭಗ (ಸಂಕರ್ಷಣ)
26)ಧಾತೃ(ಪ್ರದ್ಯುಮ್ನ)
27)ಪರ್ಜನ್ಯ (ದೈತ್ಯಾರಿ)
28)ವರುಣ (ವಿಶ್ವತೋಮುಖ)
29)ಮಿತ್ರ (ಜನಾರ್ದನ)
30)ಶಕ್ರ (ಧರಾವಾಸ)
31)ಉರುಕ್ರಮ (ದಾಮೋದರ)
32)ಪ್ರಜಾಪತಿ (ಅಘಾರ್ಧನ)
33) ವಷಟ್ಕಾರ (ಶ್ರೀಪತಿ)
 || ಶ್ರೀಕೃಷ್ಣಾರ್ಪಣಮಸ್ತು ||

No comments:

Post a Comment