ಎತ್ತಿದಳಾರತಿಯಾ ಶ್ರೀ ತುಳಸಿಗೆ |
ಭಕ್ತಿ ಭಾವಗಳಿಂದಲಿ ||ಪ||
ಎತ್ತಿದಳಾರತಿ ಸತ್ಯಧರ್ಮನ ಸತಿ |
ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ || ಆ. ಪ.||
ಗಂಧ ಅರಿಶಿನ ಕುಂಕುಮ |
ಪಾಂಚಾಲಿ ತಾ ವೃಂದಾವನ ಪೂಜಿಸಿ ||
ದುಂಡು ಮಲ್ಲಿಗೆ ಕರ್ಪೂರ ಧೂಪ ದೀಪಗಳಿಂದ |
ಇಂದ್ರ ನಂದನ ಸತಿ ಒಂದೇ ಮನಸಿನಿಂದ || 1 ||
ಹಾರ ಕೇಯೂರದಿಂದ|
ಮುಕ್ತಾವಳಿ ನಾರಿ ತುಳಸಿಗೆ ಆರ್ಸಿಸಿ||
ಚಾರು ಹಸ್ತಗಳಿಂದ ನಾರಿ ಬೊಗಸೆಯ ಒಡ್ಡಿ |
ವಾರಿಜನಾಭನ ತೋರಿಸೆಂದೆನುತಲಿ || 2 ||
ಅನ್ನ ಬೇಡಲು ಮುನಿಗಳು |
ಪತಿಗಳು ಬಂದು ನನ್ನನ್ನೇ ಕೇಳುವರು |
ಪನ್ನಂಗವೇಣಿ ನಾ ನಿನ್ನ ಮೊರೆ ಹೊಕ್ಕೇನೆ |
ಅನ್ನಾಂಗ ಶಯನನ ತೋರು ತೋರೆನುತಲಿ || 3 ||
ಕ್ಷುದದಿಂದಾದವರು ತಪಸಿಗಳೆಂದು ಪತಿಗಳು ಹೇಳಿದರು |
ಪತಿದಾಯಕಿ ನಿನ್ನ ಪತಿ ಶ್ರೀ ಕೃಷ್ಣನ್ನ |
ಅಚ್ಯುತಾನಂತನ ತೋರೆಂದು ತುಳಸಿಗೆ || 4 ||
ಬೇಡಿದ ಭಕ್ತರಿಗೆ ಶ್ರೀ ತುಳಸಿಯು|
ಸಾಯುಜ್ಯ ಪದವಿ ನೀಡಿ |
ವಾರಿಜ ನಾಭನ ತೋರುವೆನೆನುತಲಿ |
ತೋರಿದಳು ಭೀಮೇಶ ಕೃಷ್ಣನ ಸತಿ ತುಳಸಿ || 5||

No comments:
Post a Comment