Saturday, August 13, 2022

CINIWALI SHETIKAVA - II AIDESHI ಸಿನೀವಾಲಿದೇವಿ " ಶಟೀಕವ್ವ" ಭಾಗ 2

ಸಿನೀವಾಲಿ " ಶಟೀಕವ್ವ" ಭಾಗ 2

ಜಗತ್ತಿನಲ್ಲಿ ಒಳ್ಳೆಯ ಕ್ಷಣ,ಯೋಗ,ಯಶಸ್ಸು ,ಗೌರವ,ನೆಮ್ಮದಿ ಈ ರೀತಿಯ ಆಹ್ಲಾದಕರವಾದ ಸನ್ನಿವೇಶಗಳು/ ಸಂದರ್ಭಗಳು ಬೇಕು ಪುಣ್ಯದ ಫಲಬೇಕು ಆದರೆ ಪುಣ್ಯಪ್ರದವಾದ ಕೆಲಸ ಮಾಡಲು ಕಷ್ಟ. ಹಾಗೆ ಪಾಪದ ಅಶುಭ ಫಲಬೇಡ ಆದರೆ ಪಾಪದ ಕೆಲಸವನ್ನು ಮಾಡಿಬಿಡುತ್ತೇವೆ. ಪ್ರತಿಯೊಂದು ಕಾರ್ಯಮಾಡಲು ಯೋಗ್ಯವಾದ ಕಾಲವನ್ನು ನಮ್ಮ ಹಿರಿಯರು ಕಾರಣ ಸಹಿತವಾಗಿ ಹೇಳಿದ್ದಾರೆ. ಇಂದಿಗನುಗುಣವಾದ ವೈಜ್ಞಾನಿಕ ಕಾರಣವನ್ನು ಅವರು ನೀಡಿಲ್ಲ. ಅಂದ ಮಾತ್ರಕ್ಕೆ ಅವರು ನೀಡಿರುವ ಕಾರಣಗಳು ತಪ್ಪೆನ್ನಲು ಸಾಧ್ಯವಿಲ್ಲ. ಆದರೆ ಎಲ್ಲವೂ ಮೂಢನಂಬಿಕೆಗಳೂ ಅಲ್ಲ.    

ಹಿಂದಿನ ಕಾಲದಲ್ಲಿ ಅಮಾವಾಸ್ಯೆಯಂದು ಜನಿಸಿದ ಮಕ್ಕಳನ್ನು ಕೇವಲವಾಗಿ ಕಾಣುವ ಜನರಿದ್ದರು (ಈಗಲೂ ಇದ್ದಾರೆ) . ಅದರಲ್ಲೂ ಹೆಣ್ಣು ಮಕ್ಕಳು ಜನಿಸಿದರೆ ಹಿಂದೆ ಕಷ್ಟವಾಗಿತ್ತು ಅವರ ತಂದೆ ತಾಯಿಗೆ. ವಿವಾಹಾದಿ ವಿಚಾರಗಳಲ್ಲಿ ಅವರನ್ನು ಕಡೆಗಣಿಸುವ ವಾತಾವರಣವಿತ್ತು. ಆದರೆ ಇದು ತಪ್ಪಾದ ಮನೋಭೂಮಿಕೆ. ಯಾಕೆಂದರೆ ಜನ್ಮ ಎನ್ನುವುದು ಒಂದು ಅಲೌಕಿಕ ವ್ಯವಸ್ಥೆ. ಇಲ್ಲಿ ಹೀಗೇ ಎಂದು ವೈದ್ಯರೂ ನಿರ್ಧರಿಸುವುದು ಕಷ್ಟಸಾಧ್ಯದ ಮಾತು. ಹಾಗಿರಬೇಕಾದರೆ ಜನಿಸಿದ ಮಗುವನ್ನೋ ಅಥವಾ ಜನ್ಮದಾತರನ್ನೋ ಕಡೆಗ ಣಿಸುವುದು ಎಷ್ಟರಮಟ್ಟಿಗೆ ಸರಿ? ಹಾಗಂತ ಅವತ್ತು ಜನಿಸಿದವರಿಗಿಂತ ಕೀಳಾಗಿ ಬೇರೆಯ ದಿನ ಜನಿಸಿದವರು ಇರುವ ಉದಾಹರಣೆ ಬೇಕಷ್ಟು ಕಾಣಸಿಗುತ್ತದೆ. ಹಾಗಾದರೆ ಸುಂದರ ನೆಮ್ಮದಿಯ ಬದುಕಿಗೆ ಅಥವಾ ಗೊಂದಲಮಯ ಕಷ್ಟಕರ ಬದುಕಿಗೆ ಏನು ಕಾರಣವೆಂದರೆ ನಾವು ಮಾಡಿದ ಪುಣ್ಯ (ಸತ್ಕರ್ಮ) ಮತ್ತು ಪಾಪ (ದುಷ್ಕರ್ಮ)ಗಳ ಫಲವೇ ಕಾರಣ.

ಅಮಾವಾಸ್ಯೆ ಎಂದರೇನು? ಇದು ಶುಭವೋ ಅಶುಭವೋ ? ಅಂದು ಜನನವಾದರೇ ಕಷ್ಟ ನಷ್ಟಗಳೇನಾದರು ಇದೆಯೇ ? ಯಾಕೆ ಅಂದು ವಿವಾಹವೇ ಮೊದಲಾದ ಶುಭಕರ್ಮಗಳಿಗೆ ನಿಷೇಧ? ಅದರಲ್ಲೂ ಅಮಾವಾಸ್ಯೆಯಂದು ಹೆಚ್ಚು ಅವಗಡಗಳಾಗಲು ಕಾರಣವೇನು? ಮಾಡುವುದಾದರೆ ಯಾವ ಕರ್ಮಗಳನ್ನು ಮಾಡಬಹುದು?  ಅಮಾವಾಸ್ಯೆ ಎಂದರೆ “ಅಮಾ ಸಹ ವಸತಃ ಚಂದ್ರಾರ್ಕೌ ಯಸ್ಯಾಮ್” ಇಲ್ಲಿ ಅಮಾ ಎಂದರೆ ಚಂದ್ರನ ಹದಿನಾರನೇ ಕಲೆ. ಈ ಹದಿನಾರನೇ ಕಲೆಯದಿನ ಚಂದ್ರ ಮತ್ತು ಸೂರ್ಯ ಒಂದೇ ವೇಳೆಯಲ್ಲಿ ಉದಯವಾಗುತ್ತಾರೆ. 

ಹೌದು ಏಕಕಾಲದಲ್ಲೇ ಉದಯ. ಕೃಷ್ಣ ಪಕ್ಷದಲ್ಲಿ ಚಂದ್ರನು ಪ್ರತೀದಿನ ಒಂದೊಂದು ಕಲೆಯಿಂದ ಕ್ಷೀಣನಾಗುತ್ತಾ ಸೂರ್ಯೋದಯಕ್ಕೆ ಸಮೀಪದಲ್ಲಿ ಉದಯವಾಗುತ್ತಾ ಹುಣ್ಣಿಮೆಯಿಂದ ಹದಿನಾರನೇ ದಿನ ಸೂರ್ಯನೊಂದಿಗೆ ಉದಯವನ್ನು ಹೊಂದುತ್ತಾನೆ/ವಾಸವಾಗಿರುತ್ತಾನೆ. ಆದ್ದರಿಂದ ಅಂದು ಗಗನದಲ್ಲಿ ಚಂದ್ರನ ಗೋಚರವಿರುವುದಿಲ್ಲ. ಮತ್ತು ಅಮಾ ಎಂಬ ಕಲೆಯಲ್ಲಿ ಚಂದ್ರಸೂರ್ಯರು ಜೊತೆಯಾಗಿ ಉದಯವಾಗುವುದರಿಂದ/ವಾಸವಾಗಿರುವುದರಿಂದ ಆ ದಿನಕ್ಕೆ ಅಮಾವಾಸ್ಯ ಅಥವಾ ಅಮಾವಾಸ್ಯೆ ಎಂದು ಹೆಸರು.ಅದಕ್ಕೆ ಶಾಸ್ತ್ರದಲ್ಲಿ “ದರ್ಶಃ ಸೂರ್ಯೇಂದು ಸಂಗಮಃ” ಎಂದಿದ್ದಾರೆ. ದರ್ಶಃ ಅಂದರೆ ಅಮಾವಾಸ್ಯೆಯ ಇನ್ನೊಂದು ಹೆಸರು.ಅಥವಾ ಸೂರ್ಯ ಮತ್ತು ಚಂದ್ರರ ಸಂಗಮಕ್ಕೆ (ಜೊತೆಯಾದ ಉದಯದ/ವಾಸದ ದಿನಕ್ಕೆ) ದರ್ಶ ಎಂದು ಹೆಸರು.

ಈ ದಿನಕ್ಕೆ “ಕುಹೂ” ಎಂಬ ಹೆಸರೂ ಇದೆ. ಕುಹೂ ಎಂದರೆ ಚಂದ್ರನ ಕಲೆಯು ಕಾಣದಿರುವ ದಿನ ಎಂದರ್ಥ. ಹಾಗಯೇ ಅಮಾವಾಸ್ಯೆ ದಿನದ ಅಧಿಷ್ಠಾನ ದೇವತೆಯ ಹೆಸರೂ ಹೌದು. ಈ ಕಾರಣದಿಂದಲೇ ಪೂರ್ಣಅಮಾವಾಸ್ಯೆಯಂದು ಜನಿಸಿಸಿದರೆ “ಕೂಹೂ ಜನನ ಶಾಂತಿ” ಎಂಬ ಹವನವನ್ನು ಮಾಡಬೇಕು ಎಂದು ಹೇಳುತ್ತಾರೆ. ಯಾಕೀ ಹೋಮ ಹಾಗಾದರೆ ಅಂದು ಜನಿಸಿದರೆ ದೋಷವೇ ? ಹೌದು ಅಂದು ಜನಿಸಿದರೆ ದೋಷವಿದೆ. ಯಾವುದೇ ಹೊಸತಾದ ಘಟನೆಗೆ ಚಂದ್ರಾನುಕೂಲ ಬೇಕೇಬೇಕು. ಅದನ್ನೇ “ತಾರಾಬಲಂ ಚಂದ್ರಬಲಂ” ಎಂದಿದ್ದಾರೆ. ಅಮಾವಾಸ್ಯೆಯಂದು ಜನಿಸಿದ ಮಗುವಿಗೆ ಚಂದ್ರಾನುಕೂಲದ ಕೊರೆತೆಯ ನಿವಾರಣೆಗಾಗಿ ಆ ಶಾಂತಿಯನ್ನು ಮಾಡಿಸುವುದು. ಹಾಗಾದರೆ ಅದರಿಂದ ತೊಂದರೆ ಇಲ್ಲವೆ ಎಂದರೆ ಜಾತಕ ಕುಂಡಲಿಯಲ್ಲಿ ಎಲ್ಲಾ ಗ್ರಹರು ಶುಭಸ್ಥಾನದಲ್ಲಿದ್ದು ಅನುಗ್ರಹಪ್ರದರಾಗಿದ್ದಲ್ಲಿ ಅಮಾವಾಸ್ಯೆಯ ದೋಷ ಸಂಭವಿಸುವುದಿಲ್ಲ.

ಅಮಾವಾಸ್ಯೆ ಪ್ರಧಾನವಾಗಿ ಎರಡು ವಿಧ ಒಂದು ಮೇಲೆ ಹೇಳಿದ ಕುಹೂ. ಇನ್ನೊಂದು “ಸಿನೀವಾಲಿ” ಎಂದು . ಸಿನೀವಾಲಿ ಎಂದರೆ ಚತುರ್ದಶೀ ಯುಕ್ತವಾದ ಅಮಾವಾಸ್ಯೆ ಅಥವಾ ಚಂದ್ರನ ಒಂದು ಕಲೆ ಕಾಣಲ್ಪಡುವ ಅಮಾವಾಸ್ಯೆ ಎಂದರ್ಥ. ಇದು ಹಿಂದೆ ಹೇಳಿದ ಅಮಾವಾಸ್ಯೆಯಷ್ಟು ಕಠಿಣ ದಿನವಲ್ಲ. ಈ ದಿನದಂದು ಜನಿಸಿದರೆ “ಸಿನೀವಾಲಿ ಜನನ ಶಾಂತಿ” ಎಂಬ ಹವನವನ್ನು ಮಾಡಿಸುವುದು. ಇಲ್ಲಿಯೂ ಮೇಲೆ ಹೇಳಿದಂತೆ ಕುಂಡಲಿ ಅನುಕೂಲಕರವಾಗಿದ್ದರೆ ಏನೂ ಸಮಸ್ಯೆ ಇಲ್ಲ. ಅಮಾವಾಸ್ಯೆ ಶುಭವೋ ಅಶುಭವೋ ಎಂದು ಹೇಳುವುದಾದರೆ ಕೆಲವು ಕರ್ಮ/ಕಾರ್ಯಗಳಿಗೆ ಚಂದ್ರಾನುಕೂಲ ಬೇಕಾಗಿರುವುದರಿಂದ ಅಂತಹ ವಿವಾಹವೇ ಮೊದಲಾದ ಶುಭಕಾರ್ಯಗಳಿಗೆ, ಖರೀದಿಗಳಿಗೆ ಆ ದಿನ ಪ್ರಶಸ್ತವಲ್ಲ.

ಅಂದಿನ ದಿನ ಜನನವಾದರೆ ದೋಷವಿದೆಯೇ ಎಂದು ಕೇಳಿದರೆ .. ಇದೆ. ಆದರೆ ಅದಕ್ಕೆ ಚಿಂತನೆ ಮಾಡಿ ಪರಿಹಾರ ಮಾಡಿಕೊಳ್ಳಬಹುದಾದ ಅವಕಾಶಗಳು ಶಾಸ್ತ್ರದಲ್ಲಿ ಹೇಳಿದೆ. ಜನ್ಮಕುಂಡಲಿ ಉತ್ತಮವಾಗಿದ್ದಲ್ಲಿ ಏನೂ ಸಮಸ್ಯೆ ಇಲ್ಲ.ಜೀವನ ಉತ್ತಮವಾಗಿಯೇ ಇರುತ್ತದೆ. ಅಮಾವಾಸ್ಯೆಯಂದು ವಾತಾವರಣದಲ್ಲಿ ಸಾತ್ವಿಕಗುಣ (Positiv Energy) ಸೂರ್ಯಚಂದ್ರರು ಜೊತೆಗಿರುವ ಕಾರಣ ಕಡಿಮೆ ಇರುತ್ತದೆ. ಆದ್ದರಿಂದ ಅವಗಡಗಳು ಸಂಭವಿಸುವುದು ಕಂಡುಬರುತ್ತದೆ. ಅಲ್ಲದೇ ಅಂದು ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಈ ಎಲ್ಲಾ ಕಾರಣಗಳು ತೊಂದರೆಗೆ ಅಶುಭಕ್ಕೆ ಅಡಿಪಾಯ.

ಜ್ಯೇಷ್ಠಮಾಸದ ಅಮಾವಾಸ್ಯೆಯನ್ನು ಮಣ್ಣೆತ್ತಿನ ಅಮಾವಾಸ್ಯೆಯೆಂದು ಮಣ್ಣಿನ ಎತ್ತನ್ನು ಮಾಡಿ ಪೂಜಿಸುತ್ತಾರೆ. ಆಷಾಢಮಾಸದ ಅಮಾವಾಸ್ಯೆಯನ್ನು ಭೀಮನ ಅಮಾಸ್ಯೆಯೆಂದು ಮುತ್ತೈದೆಯರು ತಮ್ಮಪತಿಯನ್ನು ಪೂಜಿಸಿ ಮುತ್ತೈದೆ ಭಾಗ್ಯದ ಬೆಳಗುವಿಕೆಯನ್ನು ಪ್ರಾರ್ಥಿಸುತ್ತಾರೆ. ಶ್ರಾವಣಾಮಾವಾಸ್ಯೆಯು ದರ್ಭೆಕೊಯ್ಯುವ ದಿನ .ಭಾದ್ರಪದ ಅಮಾವಾಸ್ಯೆಯನ್ನು ಮಹಾಲಯಾಮಾವಾಸ್ಯೆಯೆಂದು ಪಿತ್ರ ಕಾರ್ಯವನ್ನು ಮಾಡಿ ಸತ್ಸಂಗವನ್ನು ಬೇಡುತ್ತಾರೆ (ಹಿರಿಯರ ಕಾರ್ಯಮಾಡುವುದರಿಂದ ಒಳ್ಳೆಯ ಸಂತಾನ ಲಭ್ಯ).ಆಶ್ವಯುಜಮಾಸದ ಅಮಾವಾಸ್ಯೆ ದೀಪಾವಳಿ ಅಮಾವಾಸ್ಯೆ. ಅಂದು ಅಜ್ಞಾನದ ನಾಶಕ್ಕಾಗಿ ಮತ್ತು ಸಂಪತ್ತಿನ ವ್ರದ್ಧಿಗಾಗಿ ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ.

ಮಾರ್ಗಶೀರ್ಷ ಅಮಾವಾಸ್ಯೆ ಎಳ್ಳಮಾವಾಸ್ಯೆ ಅಂದು ತೀರ್ಥಸ್ನಾನ(ಸಮುದ್ರ ಸ್ನಾನ) ಮಾಡಿ ಶುದ್ಧರಾಗುತ್ತಾರೆ. ಈ ರೀತಿ ಆರು ಅಮಾವಾಸ್ಯೆಗಳು ವಿಶೇಷವಾದ ಫಲವನ್ನು ನೀಡುವ ಅಮಾವಾಸ್ಯೆಗಳು. ಕೆಲವು ಕಾರ್ಯಗಳಿಗೆ ಅಮಾವಾಸ್ಯೆಯೆಂಬುದು ಅತ್ಯುತ್ತಮ ಫಲವನ್ನು ನೀಡುತ್ತದೆ. ಪಾರಾಯಣ ಇಂತಹ ಅನುಷ್ಠಾನಗಳಿಗೆ ಅಂದು ಉತ್ತಮಫಲವಿದೆ. “ಅಮಾಯಾಂ ಚ ನದೀ ಸ್ನಾನಂ ಪುನಾತ್ಯಾಸಪ್ತಮಂ ಕುಲಂ” ಅಮಾವಾಸ್ಯೆಯ ದಿನ ನದೀಸ್ನಾನ ಮಾಡಿದರೆ ಏಳುತಲೆಮಾರಿನ ತನಕ ಪುಣ್ಯಪ್ರಾಪ್ತವಾಗುತ್ತದೆ ಎಂದು ವ್ಯಾಸ ಮಹರ್ಷಿಗಳು ಹೇಳಿದ್ದಾರೆ.

ಮಂಗಳವಾರ ಅಮಾವಾಸ್ಯೆಯಿದ್ದು ಗಂಗಾಸ್ನಾನ ಮಾಡಿದರೆ ಸಹಸ್ರಗೋದಾನ ಮಾಡಿದ ಪುಣ್ಯಪ್ರಾಪ್ತವಾಗುತ್ತದೆ ಮತ್ತು ಸೋಮವಾರ ಅಮಾವಾಸ್ಯೆಯಿದ್ದರೆ ಸ್ನಾನಾನಂತರ ಮೌನವ್ರತ ಮಾಡಿದರೆ ಉತ್ತಮ ಶುಭಫಲವಿದೆ ಎಂದು ಸ್ಕಾಂದಪುರಾಣದಲ್ಲಿ ಹೇಳಿದೆ. ಆದರೆ ಪುಂ ಸ್ತ್ರೀ ಮಿಲನವು ಅಮಾವಾಸ್ಯೆಯಂದು ಸರ್ವಥಾ ನಿಷಿದ್ಧ ಮತ್ತು ಅತ್ಯಂತ ಪಾಪದಾಯಕವಾದ ಕಾರ್ಯ. ಇನ್ನೂ ಬಹಳಷ್ಟು ಚಿಂತನೀಯ ವಿಚಾರಗಳಿವೆ 



No comments:

Post a Comment